ಪಹಲ್ಗಾಮ್ ಕರಾಳ ದಿನಕ್ಕೆ ವರ್ಷ: ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಇನ್ನೂ ಮಡುಗಟ್ಟಿದ ನೋವು

ಶಿವಮೊಗ್ಗದ ಮಂಜುನಾಥ್ ಸೇರಿ 26 ಜನರ ನರಮೇಧವಾದ ಪಹಲ್ಗಾಮ್ ಉಗ್ರ ದಾಳಿಗೆ ಒಂದು ವರ್ಷ. ಮಂಜುನಾಥ್ ತಾಯಿಯ ದುಃಖ ಇಂದಿಗೂ ಮಾಸಿಲ್ಲ. ಪತ್ನಿ, ನೋವು ಮರೆತು ಬದುಕಲು ಪ್ರಯತ್ನಿಸುತ್ತಿದ್ದಾರೆ. ಮಗ ದೇಶ ಸೇವೆಗೆ ಸಂಕಲ್ಪ ತೊಟ್ಟಿದ್ದಾನೆ. ಕುಟುಂಬಕ್ಕೆ ರಾಜ್ಯ-ಕೇಂದ್ರ ಸರ್ಕಾರದಿಂದ ಪರಿಹಾರ ಸಿಕ್ಕಿದೆ.

ಪಹಲ್ಗಾಮ್ ಕರಾಳ ದಿನಕ್ಕೆ ವರ್ಷ: ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಇನ್ನೂ ಮಡುಗಟ್ಟಿದ ನೋವು
Manjunath Mother Cc 2
Image Credit source: tv9 kannada
Edited By:

Updated on: Apr 22, 2026 | 7:54 PM

ಶಿವಮೊಗ್ಗ, ಏಪ್ರಿಲ್​ 22: ಪಹಲ್ಗಾಮ್​ನಲ್ಲಿ (Pahalgam) 2025 ಏಪ್ರಿಲ್​​ 22ರಂದು ಶಿವಮೊಗ್ಗದ ಮಂಜುನಾಥ್ (Manjunath)  ಸೇರಿ ಒಟ್ಟು 26 ಜನರ ನರಮೇಧವಾಗಿತ್ತು. ಈ ಘಟನೆ ನಡೆದು ಇಂದಿಗೆ ಒಂದು ವರ್ಷ. ಮೃತ ಮಂಜುನಾಥ್ ಮನೆಯಲ್ಲಿ ಇನ್ನೂ ಅದೇ ನೋವು ಮಡುಗಟ್ಟಿದೆ. ವಯಸ್ಸಾದ ತಾಯಿ ತನ್ನ ಮಗನ ಸಾವಿನ ಕುರಿತು ಈಗಲೂ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಕಳೆದ ವರ್ಷ ಏ. 22 ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಶಿವಮೊಗ್ಗದ ಮಂಜುನಾಥ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಗುಂಡಿಕ್ಕಿ ಕೊಲ್ಲುವ ಸಂದರ್ಭದಲ್ಲಿ ಸೊಸೆ ಪಲ್ಲವಿ ಮತ್ತು ಮೊಮ್ಮಗ ಅಭಿಜಯ್ ಜೊತೆಗೆ ಇದ್ದರು. ಕೆಲವೇ ಕ್ಷಣದಲ್ಲಿ ಉಗ್ರರು ಮಂಜುನಾಥ್​ಗೆ ಗುಂಡಿಕ್ಕಿ ಕೊಂದು ಬಿಟ್ಟಿದ್ದರು. ಸ್ವರ್ಗ ನೋಡಲು ಹೋದವರು ಉಗ್ರರ ರಕ್ತಪಾತ ಕಣ್ಣಾರೆ ನೋಡಿ ಬೆಚ್ಚಿಬಿದ್ದಿದ್ದರು. ಇಂತಹ ಘಟನೆಯಲ್ಲೂ ಸೊಸೆ ಮತ್ತು ಮೊಮ್ಮಗ ಎದೆಗುಂದದೆ ಅಲ್ಲಿಂದ ಮೃತ ಮಂಜುನಾಥ್ ಶವದ ಜೊತೆ ವಾಪಸ್ ಶಿವಮೊಗ್ಗಕ್ಕೆ ಬಂದಿದ್ದು ಮಾತ್ರ ಅಚ್ಚರಿ ಮೂಡಿಸಿತ್ತು. ಇದು ಅತ್ತೆ ಸುಮತಿ ತಮ್ಮ ಸೊಸೆಯ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋವು ನುಂಗಿಕೊಂಡು ಬದುಕು ಸಾಗಿಸುತ್ತಿರುವ ತಾಯಿ

ಮಗನ ಸಾವು ನೆನದು ನೋವು ಆಗುತ್ತದೆ. ಆದರೆ ವಾಸ್ತವವನ್ನು ಅರ್ಥಮಾಡಿಕೊಂಡು ನೋವು ನುಂಗಿಕೊಂಡು ಸುಮತಿ ಅವರು ಬದುಕುತ್ತಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಅನಾಥವಾಗಿದ್ದಾರೆ. ತಾನು ನೊಂದುಕೊಂಡರೇ ಸೊಸೆ ಮತ್ತು ಮೊಮ್ಮಗನಿಗೆ ಕಷ್ಟವಾಗುತ್ತದೆಂದು ಎಲ್ಲಾ ನೋವು ನುಂಗಿಕೊಂಡು ಬದುಕು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮೃತ ಮಂಜುನಾಥ್ ಪುತ್ರ

ಮೃತ ಮಂಜುನಾಥ್ ಕುಟುಂಬ ಇನ್ನು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈ ನಡುವೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಒಂದಿಷ್ಟು ಪರಿಹಾರ ಬಂದಿದೆ. ಮೃತ ಮಂಜುನಾಥ್ ಮಗ ಅಭಿಜಯ್​​ಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್​​ನಲ್ಲಿ ಉಚಿತವಾಗಿ ಬಿ.ಕಾಂ ಪದವಿಗೆ ಅನುಮತಿ ಸಿಕ್ಕಿದೆ. ಪತ್ನಿ ಶಿವಮೊಗ್ಗದ ಮ್ಯಾಮ್ ಕೋಸ್​​ನಲ್ಲಿ ಉದ್ಯೋಗಿ ಆಗಿದ್ದಾರೆ. ಮಂಜುನಾಥ್ ಸಾವಿನಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ. ಈ ಹಿನ್ನಲೆ ಪತ್ನಿಯೂ ಪತಿಯ ಸಾವಿನ ನೋವುವನ್ನು ಕೆಲಸದಲ್ಲಿ ಮರೆಯುತ್ತಿದ್ದಾರೆ. ಮಗ ಕೂಡ ಕಣ್ಣಾರೆ ತನ್ನ ತಂದೆಯ ಸಾವು ನೋಡಿದ ಬಳಿಕ ತಾನು ಕೂಡ ದೇಶಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆನ್ನುವ ಹಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಇತ್ತ ತಾಯಿ ಸುಮತಿ ಅವರಿಗೆ ಮಗ ನೆನಪು ಮಾತ್ರ. ಮಗ ಇಲ್ಲ ಎನ್ನುವುದನ್ನು ನಂಬಲು ಅನೇಕ ತಿಂಗಳೇಬೇಕಾಯಿತು. ಮಗ ಪ್ರವಾಸಕ್ಕೆ ಹೋಗಿ ಜೀವಂತವಾಗಿ ವಾಪಸ್ ಬರಲೇ ಇಲ್ಲ ಎಂಬ ನೋವು ತಾಯಿಗೆ ಈಗಲೂ ಕಾಡುತ್ತಿದೆ.

ಇದನ್ನೂ ಓದಿ: ಪಹಲ್ಗಾಮ್‌ ದಾಳಿ: ಪತ್ನಿ ಎದುರೇ ಪತಿಯನ್ನು ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಪಹಲ್ಗಾಮ್ ಉಗ್ರರ ದುಷ್ಕೃತ್ಯಕ್ಕೆ ಇಡೀ ದೇಶವೇ ಕಣ್ಣೀರು ಹಾಕಿತ್ತು. 26 ಹಿಂದೂಗಳ ನರಮೇಧವಾಗಿತ್ತು. ಆದರೆ ಇದಕ್ಕೆ ಆಪರೇಷನ್ ಸಿಂಧೂರ ಮೂಲಕ ಸೈನಿಕರು ಉಗ್ರರ ಬೇಟೆಯಾಡಿರುವುದಕ್ಕೆ ಮೃತ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us