
ಬೆಂಗಳೂರು, ಜೂನ್ 28: ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯಲಿದೆ. ಪಶ್ಚಿಮ ಬಂಗಾಳ ಫಲಿತಾಂಶದ ಬಳಿಕ SIR ವಿಚಾರದಲ್ಲಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿ ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶಗಳನ್ನ ನೀಡಿದ್ದಾರೆ.
ಕರ್ನಾಟಕದಲ್ಲಿ ಎಸ್ಐಆರ್ ಮಾಡುತ್ತಿರುವ ಮುಖ್ಯ ಉದ್ದೇಶ ಏನು ಅಂದರೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸ್ವಚ್ಛ ಮತ್ತು ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದಾಗಿದೆ. ಆದರೆ ಅಕ್ರಮ SIR ವಿಚಾರದಲ್ಲಿ ಕಾಂಗ್ರೆಸ್ ಸಮರ ಸಾರಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಇಂದು ಮೈಸೂರಿನಲ್ಲಿ SIR ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಎಸ್ಐಆರ್ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ತಪ್ಪಬಾರದು. SIR ಗಂಭೀರವಾಗಿ ಪರಿಗಣಿಸದಿದ್ದರೆ ನಿಮ್ಮ ಮಾರಣಹೋಮ ನಿಶ್ಚಿತ. ಕಾಂಗ್ರೆಸ್ ಕಾರ್ಯಕರ್ತರು ಮೈಮರೆತರೆ ಬಿಜೆಪಿಯವರು ಮುಗಿಸುತ್ತಾರೆ. ನಿಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಬೇಕೆಂದರೆ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮತದಾರರೇ ಗಮನಿಸಿ: SIR ಪ್ರಕ್ರಿಯೆ ಹೇಗೆ? ಗಣತಿ ನಮೂನೆ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್
ನಮ್ಮ ದೇಶದಲ್ಲಿ ಸಂವಿಧಾನ ಬದ್ಧವಾದ ಚುನಾವಣಾ ಆಯೋಗ ಇಲ್ಲ. ಭಾರತದಲ್ಲಿ ಭಾರತೀಯ ಜನತಾ ಪಕ್ಷ ದುರಾಡಳಿತ ನಡೆಸುತ್ತಿದೆ. ವರ್ಷದಿಂದ ವರ್ಷಕ್ಕೆ ಬಿಜೆಪಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಬಿಜೆಪಿ ಯಾವಾಗಲೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುತ್ತದೆ. ದೇಶದಲ್ಲಿ ಸರ್ವಾಧಿಕಾರ ತರಬೇಕು ಎಂಬುದು ಬಿಜೆಪಿ ಉದ್ದೇಶ ಎಂದು ವಾಗ್ದಾಳಿ ಮಾಡಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮಾತನಾಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ ಜಾತಿ ಆಧಾರದ ಮೇಲೆ ಮತ ತೆಗೆದುಹಾಕುವುದಕ್ಕೆ ವಿರೋಧ ಇದೆ. ಯಾರ ಮತಗಳು 2 ಕಡೆ ಇವೆ, ದೇಶದಲ್ಲಿ ಇಲ್ಲದವರ ಮತ ತೆಗೆಯಿರಿ. ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಇದನ್ನೂ ಓದಿ: ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುತ್ತೆ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯ ಚುನಾವಣಾ ಆಯೋಗ
ಮಹಾತ್ಮಗಾಂಧಿ ಅವರ ಸಿದ್ಧಾಂತದ ಮೇಲೆ ಎಲ್ಲಾ ನಡೆಯಬೇಕು. ಆರ್ಎಸ್ಎಸ್ನವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಪರಿಷ್ಕರಣೆ ನೆಪದಲ್ಲಿ ಬೇಡವಾದವರ ಹೆಸರನ್ನ ಕೈಬಿಡುವ ಕೆಲಸ ಆಗುತ್ತಿದೆ. ಎಸ್ಐಆರ್ ಎರಡನೇ ಸ್ವಾತಂತ್ರ್ಯ ಹೋರಾಟ. ಯಾರ ಹೆಸರು ಮತಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು. ಐದು ವರ್ಷಗಳಿಗೊಮ್ಮೆ ಚುನಾವಣೆ ಬರುತ್ತದೆ. ಜನರು ತಮಗೆ ಬೇಕಾದವರ ಆಯ್ಕೆಯನ್ನ ಮಾಡಿಕೊಳ್ಳುವ ಶಕ್ತಿ ಇದೆ. ಬಿಜೆಪಿ ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:00 pm, Sun, 28 June 26