AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು

ಡ್ಯಾಂ ಸುರಕ್ಷತೆಗೆ ಧಕ್ಕೆಯಾಗದ ಸ್ಥಳದಲ್ಲಿ ಕಲ್ಲುಗಳು ಕುಸಿದಿವೆ. ಘಟನೆಯಿಂದ ಯಾವುದೇ ಆತಂಕ ಇಲ್ಲ ಎಂದು ಟಿವಿ9ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿಜಯ್​ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು
KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು
TV9 Web
| Updated By: ಸಾಧು ಶ್ರೀನಾಥ್​|

Updated on:Jul 19, 2021 | 9:26 AM

Share

ಮಂಡ್ಯ: ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ (KRS Dam) ತೊಂದರೆಯಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬಂದ ಬೆನ್ನಲ್ಲೇ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿದ್ದು, ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ರಸ್ತೆಯಂತಿರುವ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಡ್ಯಾಂ ನಿರ್ಮಾಣದ ನಂತರ ಕಲ್ಲುಗಳು ಕುಸಿದಿದ್ದು ಇದೇ ಮೊದಲ ಬಾರಿಯಾಗಿದ್ದು, ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆದರೆ, ಗಾರ್ಡನ್​ಗೆ (Garden Area) ಹೋಗುವ ರಸ್ತೆಯಲ್ಲಿ ಕುಸಿದಿರುವ ಕಲ್ಲುಗಳಿಂದ ಡ್ಯಾಂ ಸುರಕ್ಷತೆಗೆ (Safety) ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಆತಂಕ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಜಲಾಶಯದಿಂದ ಕಾವೇರಿ ಪ್ರತಿಮೆ ಬಳಿಗೆ ತೆರಳಲು ಸಂಪರ್ಕ ಕಲ್ಪಿಸುವ ರಸ್ತೆಯಂತಹ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಡ್ಯಾಂಗೂ ಕುಸಿತ ಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ, ಡ್ಯಾಂ ಸುರಕ್ಷತೆಗೆ ಧಕ್ಕೆಯಾಗದ ಸ್ಥಳದಲ್ಲಿ ಕಲ್ಲುಗಳು ಕುಸಿದಿವೆ. ಘಟನೆಯಿಂದ ಯಾವುದೇ ಆತಂಕ ಇಲ್ಲ ಎಂದು ಟಿವಿ9ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿಜಯ್​ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ಹಳೆ ರಸ್ತೆಯ ಕಲ್ಲುಗಳು ಕುಸಿದಿದ್ದು, 80+ ಗೇಟ್‌ಗಳ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಲ್ಲುಗಳ ಕುಸಿತ ಕಂಡಿರುವುದರಿಂದ ಸಹಜವಾಗಿಯೇ ಆತಂಕ ಉದ್ಭವಿಸಿತ್ತು. ಅಲ್ಲದೇ ಅದು ಕೆಆರ್‌ಎಸ್ ಡ್ಯಾಂನ ಮಧ್ಯ ಭಾಗದಲ್ಲಿರುವ ಜಾಗವಾಗಿದ್ದು, ಗೇಟ್ ದುರಸ್ತಿ ಕಾರ್ಯದ ವೇಳೆ ಏಕಾಏಕಿ ಕುಸಿತವಾಗಿದ್ದು ಅನುಮಾನಕ್ಕೆ ಆಸ್ಪದವಾಗಿತ್ತು. ಆದರೆ, ಈ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಸ್ಪಷ್ಟನೆ ನೀಡಿರುವುದರಿಂದ ಜನ ಕೊಂಚ ನಿರಾಳರಾಗಿದ್ದಾರೆ.

ಇತ್ತೀಚೆಗೆ ಡ್ಯಾಂ ಸುರಕ್ಷತೆ ಬಗ್ಗೆ, ಸುತ್ತಮುತ್ತ ನಡೆಯುವ ಅಕ್ರಮ ಗಣಿಗಾರಿಕೆಯಿಂದ ಜಲಾಶಯಕ್ಕೆ ಆತಂಕ ಇದೆ ಎನ್ನುವ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದು, ಸಂಸದೆ ಸುಮಲತಾ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ‌ KRS​ ಡ್ಯಾಂ, ಸುಮಾರು 90 ವರ್ಷ ಹಳೆಯದಾಗಿದ್ದು, ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ‌ ಗಣಿಗಾರಿಕೆಯಿಂದಾಗಿ ಡ್ಯಾಂಗೆ ಗಂಡಾಂತರ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದರು. ಇದೇ ತಿಂಗಳ 14ನೇ ತಾರೀಕಿನಂದು ಡ್ಯಾಂಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದರು. ಇದೀಗ ಸುಮಲತಾ ಭೇಟಿ ನೀಡಿ ಪರಿಶೀಲಿಸಿದ ನಾಲ್ಕೇ ದಿನಗಳಲ್ಲಿ ಕಲ್ಲುಗಳು ಕುಸಿದಿವೆ. ಸದ್ಯ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದ್ದು, ಯಾವುದೇ ಭಯ ಬೇಡ ಎಂದು ಅಧಿಕಾರಿಗಳು ಹೇಳಿದ್ದರೂ ಆಗುತ್ತಿರುವ ಚರ್ಚೆಗೂ ಈ ಬೆಳವಣಿಗೆಗೂ ಏನಾದರೂ ಸಂಬಂಧ ಇರುವ ಸಾಧ್ಯತೆ ಇದೆ ಎಂದು ಕೆಲ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಬಿರುಕು ವಿವಾದ: ಸಿಬಿಐ ತನಿಖೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಸುಮಲತಾ ಒತ್ತಾಯ

Published On - 7:05 am, Mon, 19 July 21