ಗಡಿಯಲ್ಲಿ 16 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಪಾವಗಡ ಯೋಧಗೆ ಕಿಡ್ನಿ ಸ್ಟೋನ್, ಜ್ವರ, ಲೋ ಬಿಪಿ – ಚಂಡಿಗಢ ಆಸ್ಪತ್ರೆಯಲ್ಲಿ ಸಾವು
ಪಂಜಾಬ್ ನ ಚಂಢೀಗಡ ಪಿಜಿಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸುರೇಶ್ ಕುಮಾರ್ ರ ಪಾರ್ಥಿವ ಶರೀರವನ್ನು ಸೇನೆ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ, ವಿಮಾನ ಮೂಲಕ ಬೆಂಗಳೂರಿನ ಏರ್ ಪೋರ್ಟ್ ಗೆ ತಂದು ಅಲ್ಲಿಂದ ಸೇನೆಯ ವಾಹನ ಮೂಲಕ ಸ್ವಗ್ರಾಮಕ್ಕೆ ತರಲಾಯಿತು. ಅಂತಿಮ ದರ್ಶನ ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ಶ್ರೀರಕ್ಷೆ ನೀಡಲಾಯಿತು.

ತುಮಕೂರು: ಆತ ನಿರಂತರವಾಗಿ 16 ವರ್ಷಗಳಿಂದ ಗಡಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ, ಇತ್ತೀಚೆಗೆ ಒಂದು ತಿಂಗಳ ರಜೆ ಮುಗಿಸಿ ವಾಪಸ್ ಸೇವೆಗೆ ತಲುಪಿದ್ದ. ದಷ್ಟಪುಷ್ಟವಾಗಿ ಗಟ್ಟಿಮುಟ್ಟಾಗಿ ಇದ್ದ ಆತನಿಗೆ ಅನಾರೋಗ್ಯ ಕಾಡಿದೆ. ಕಿಡ್ನಿ ವೈಫಲ್ಯದಿಂದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದು, ಇಂದು ಮಂಗಳವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಪಾರ್ಥಿವ ಶರೀರ ಮೆರವಣಿಗೆ ಮಾಡಿದ ಗ್ರಾಮಸ್ಥರು, ಒಂದು ಕಡೆ ಗೋಳೋ ಎನ್ನುತ್ತಿರುವ ಕುಟುಂಬಸ್ಥರು,ಮತ್ತೊಂದು ಕಡೆ ಯೋಧರಿಂದ ಗೌರವ ಸಮರ್ಪಣೆ, ಈ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ಗ್ರಾಮದಲ್ಲಿ. ಗ್ರಾಮದ ಎಸ್ ಜಿ ಸುರೇಶ್ ಕುಮಾರ್ ಸತತ 16 ವರ್ಷಗಳಿಂದ ಬಿಎಸ್ ಎಫ್ ನಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದರು. ಮೇಘಾಲಯ, ಜಮ್ಮು ಕಾಶ್ಮೀರ, ಶ್ರೀಲಂಕಾ ಗಡಿ ಹಾಗೂ ಪಂಜಾಬ್ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ರಜೆ ಮುಗಿಸಿ, ಊರಿನಿಂದ ವಾಪಸ್ ಹೋಗಿದ್ದರು. ಆದರೆ ಅನಾರೋಗ್ಯದಿಂದ ಕಳೆದ ಶನಿವಾರ ಸಂಜೆ ಹುತಾತ್ಮರಾಗಿದ್ದಾರೆ.
ಗ್ರಾಮದ ಜಯರಾಮರೆಡ್ಡಿ ಹಾಗೂ ಸುದಮ್ಮ ಅವರ ಹಿರಿಯ ಪುತ್ರರಾಗಿದ್ದ ಸುರೇಶ್ ಕುಮಾರ್ ಕಳೆದ ತಿಂಗಳಷ್ಟೆ ಊರಿಗೆ ಬಂದು ವಾಪಸ್ ಹೋಗಿದ್ದರು. ಈ ವೇಳೆ ತನ್ನ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಎರಡು ಮಕ್ಕಳು ಹಾಗೂ ಕುಟುಂಬಸ್ಥರನ್ನ ಅಗಲಿರುವ ಸುರೇಶ್ ಕುಮಾರ್ ಅವರ ಸಾವಿನಿಂದಾಗಿ ಇಡೀ ಗ್ರಾಮವೇ ಕನ್ಣೀರು ಹಾಕಿದೆ.
ಸುರೇಶ್ ಕುಮಾರ್ ಗೆ ಎರಡು ಕಿಡ್ನಿ ಸ್ಟೋನ್ ಆಗಿತ್ತಂತೆ, ಇದರಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಜ್ವರ ಬಂದು ಬಿಪಿ ಲೋ ಆದ ಕಾರಣ ಕೊನೆಯುಸಿರೆಳೆದಿದ್ದಾರೆ ಎಂದು ಮೃತನ ಸ್ನೇಹಿತ ರಾಜೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ 10 ವರ್ಷದಿಂದ ಮೀನಮೇಷ, ಮೀಸಲಿಟ್ಟ ಉದ್ಯಾನವನ ಜಾಗ ಅತಿಕ್ರಮಣವಾಗಿದೆ!
ಇನ್ನು ಪಂಜಾಬ್ ನ ಚಂಢೀಗಡ ಪಿಜಿಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸುರೇಶ್ ಕುಮಾರ್ ರ ಪಾರ್ಥಿವ ಶರೀರವನ್ನು ಸೇನೆ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ, ವಿಮಾನ ಮೂಲಕ ಬೆಂಗಳೂರಿನ ಏರ್ ಪೋರ್ಟ್ ಗೆ ತಂದು ಅಲ್ಲಿಂದ ಸೇನೆಯ ವಾಹನ ಮೂಲಕ ಸ್ವಗ್ರಾಮಕ್ಕೆ ತರಲಾಯಿತು. ಅಂತಿಮ ದರ್ಶನ ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ಶ್ರೀರಕ್ಷೆ ನೀಡಲಾಯಿತು.
ಬಿಎಸ್ ಎಫ್ ಯೋಧರಿಂದ ಮೂರು ಬಾರಿ ಕುಶಾಲತೋಪು ಸಿಡಿಸುವುದರ ಮೂಲಕ ಗೌರವ ವಂದನೆ ನೀಡಲಾಯಿತು. ಬಳಿಕ ರಾಷ್ಟ್ರ ಧ್ವಜವನ್ನ ಪತ್ನಿಗೆ ಹಸ್ತಾಂತರಿಸಿದರು. ಈ ವೇಳೆ ಅವರ ಶೋಕ ಮಡುಗಟ್ಟಿತ್ತು.ಇನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಯೋಧನಿಗೆ ಅಂತಿಮ ನಮನ ಸಲ್ಲಿಸಿ ಎಲ್ಲಾ ವ್ಯವಸ್ಥೆ ಕೈಗೊಂಡು ಗೌರವ ಸಮರ್ಪಣೆ ಮಾಡಿದರು. ಒಟ್ಟಾರೆ ದೇಶಸೇವೆ ಮಾಡ್ತಿದ್ದ ಓರ್ವ ವೀರಯೋಧ ಹುತಾತ್ಮ ಆಗಿದ್ದು, ದೇಶಕ್ಕೆ ಹಾಗೂ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ