ತುಮಕೂರಿನಲ್ಲಿ 35 ನವಿಲುಗಳು ಸಾವು! ಸುಡುವ ಬಿಸಿಲಿನ ಪರಿಣಾಮವೋ? ಹಕ್ಕಿ ಜ್ವರವೋ?
ತುಮಕೂರಿನಲ್ಲಿ 35 ನವಿಲುಗಳು ಸಾವನ್ನಪ್ಪಿದ್ದು, ಆತಂಕ ಸೃಷ್ಟಿಸಿದೆ. ಬಿಸಿಲಿನ ತಾಪಮಾನ ಏರಿಕೆಯಿಂದ ಅಥವಾ ಹಕ್ಕಿ ಜ್ವರವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಈ ಸಾಮೂಹಿಕ ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ಶೀಘ್ರವೇ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

ತುಮಕೂರು, ಏಪ್ರಿಲ್ 24: ಜಿಲ್ಲೆಯಲ್ಲಿ ಈ ವಾರ ಬರೋಬ್ಬರಿ 35 ನವಿಲುಗಳು ಸಾವನ್ನಪ್ಪಿರುವ ಆತಂಕಕಾರಿ ಘಟನೆ ತುಮಕೂರಿನಲ್ಲಿ ನಡೆದಿದೆ. ಬಿಸಿಲಿನ (Heat wave) ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ರಾಜ್ಯದಲ್ಲಿ ಹಕ್ಕಿ ಜ್ವರದ ಸೋಂಕು ಹರಡುತ್ತಿರುವುದೂ ಈ ಸಾವುಗಳಿಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಹೊರವಲಯದ ಬೊಮ್ಮನಹಳ್ಳಿ ಮತ್ತು ಮಾಚೇನಹಳ್ಳಿ ಸುತ್ತಮುತ್ತಲಿನ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಸಾವುಗಳು ಸಂಭವಿಸಿದ್ದು,
ಸಾವಿಗೆ ನಿಖರ ಕಾರಣವೇನು?
ಅರಣ್ಯ ಇಲಾಖೆ ಹಾಗೂ ಪಶುವೈದ್ಯಕೀಯ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಮಯೂರಗಳ ಶವಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿವೆ. ವರದಿಗಳು ಇನ್ನೂ 48 ಗಂಟೆಗಳೊಳಗೆ ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪ್ರಾಥಮಿಕ ವರದಿ ಹೇಳುವಂತೆ ನವಿಲುಗಳ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರಿದೆ. ಅತಿಯಾದ ಶಾಖ ಮತ್ತು ನಿರ್ಜಲೀಕರಣವೇ ಸಾವಿಗೆ ಪ್ರಮುಖ ಕಾರಣ ಎಂದು ಕಂಡುಬಂದಿದ್ದರೂ, ಹಕ್ಕಿ ಜ್ವರದಂತಹ ಸಾಂಕ್ರಾಮಿಕ ರೋಗಗಳ ಸಾಧ್ಯತೆಯನ್ನು ನಾವು ತಳ್ಳಿಹಾಕುವಂತಿಲ್ಲ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷವೂ ಇಂತದ್ದೇ ಘಟನೆ!
ಮುಂಜಾಗ್ರತಾ ಕ್ರಮವಾಗಿ ಮೃತದೇಹಗಳು ಪತ್ತೆಯಾದ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸ್ಥಳೀಯ ಜಲಮೂಲಗಳ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಕೀಟನಾಶಕ ಮಿಶ್ರಿತ ಬೀಜಗಳನ್ನು ಸೇವಿಸಿ 20 ನವಿಲುಗಳು ಸಾವನ್ನಪ್ಪಿದ್ದವು. ಇದೀಗ ಅರಣ್ಯ ಇಲಾಖೆಯ ಆರು ಸದಸ್ಯರ ತಂಡವು ಈ ಸಾಮೂಹಿಕ ಸಾವಿನ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದೆ. ಮುಂದಿನ 48 ಗಂಟೆಗಳಲ್ಲಿ ಪ್ರಯೋಗಾಲಯದ ವರದಿ ಲಭ್ಯವಾಗಲಿದ್ದು, ಸಾವಿನ ರಹಸ್ಯ ಹೊರಬೀಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Fri, 24 April 26




