ಪೊಲೀಸರ ಜಾಗೃತಿಗೂ ಮೀರಿದ ಸೈಬರ್ ವಂಚಕರ ಗಾಳ: ತುಮಕೂರಿನಲ್ಲಿ 6 ತಿಂಗಳಲ್ಲಿ 10 ಕೋಟಿ ರೂ. ವಂಚನೆ
ವರ್ಷದಿಂದ ವರ್ಷಕ್ಕೆ ದೇಶ ಬೆಳದಂತೆ ಊರು ಸಹ ಬೆಳೆಯುತ್ತಿದೆ. ಜನರು ಸಹ ಅಪ್ಡೇಟ್ ಆಗುತ್ತಿದ್ದಾರೆ, ಹಾಗಂತ ಕಳ್ಳರೇನು ಅದೇ ಹಳೆ ದಾರಿ ಹಿಡಿದಿಲ್ಲ. ಬದಲಾಗಿ ಸೈಬರ್ ವಂಚಕರಾಗಿ ಬದಲಾಗಿದ್ದಾರೆ. ತುಮಕೂರು ಜಿಲ್ಲೆಯ ಜನರನ್ನು ಸೈಬರ್ ವಂಚಕರು ಟಾರ್ಗೆಟ್ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ನೂರಕ್ಕೂ ಅಧಿಕ ಸೈಬರ್ ಪ್ರಕರಣಗಳು ದಾಖಲಾಗಿವೆ.

ತುಮಕೂರು, ಜೂನ್ 18: ಸೈಬರ್ ವಂಚನೆ (Cyber Crime) ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿವೆ. ವಿವಿಧ ಮಾರ್ಗಗಳ ಮೂಲಕ ಸೈಬರ್ ವಂಚಕರು ಜನರನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಂಡು, ಅವರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದವು. ಇದೀಗ, ಪಕ್ಕದ ಜಿಲ್ಲೆ ತುಮಕೂರಿನಲ್ಲಿ (Tumakur) ಕಳೆದ ಆರು ತಿಂಗಳಲ್ಲಿ ನೂರಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. 10 ಕೋಟಿಗೂ ಅಧಿಕ ಹಣ ಜನರು ಕಳೆದುಕೊಂಡಿದ್ದಾರೆ.
| ವರ್ಷ | ದಾಖಲಾದ ಕೇಸ್ಗಳ ಸಂಖ್ಯೆ | ವಂಚನೆಯ ಮೊತ್ತ | ರಿಕವರಿ | ಫ್ರೀಜ್ |
| 2023 | 252 | 8.91 ಕೋಟಿ ರೂ. | 2 ಕೋಟಿ ರೂ. | – |
| 2024 | 314 | 25 ಕೋಟಿ ರೂ. | 2 ಕೋಟಿ ರೂ. | 12 ಕೋಟಿ ರೂ. |
| 2025 | 107 | 10 ಕೋಟಿ ರೂ. | 70 ಲಕ್ಷ ರೂ. | 2 ಕೋಟಿ ರೂ. |
ಕಳೆದ ಮೂರು ವರ್ಷದ ಸೈಬರ್ ವಂಚನೆಯ ಅಂಕಿ ಅಂಶಗಳನ್ನು ನೋಡಿದರೇ 2023ರಲ್ಲಿ 252 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 8.91 ಕೋಟಿಯಷ್ಟು ಹಣ ವಂಚಕರ ಪಾಲಾಗಿತ್ತು. ತನಿಖೆ ವೇಳೆ 2 ಕೋಟಿಯಷ್ಟು ಹಣ ಮಾತ್ರ ರಿಕವರಿ ಮಾಡಲಾಗಿತ್ತು. 2024ರಲ್ಲಿ ತುಮಕೂರು ವಂಚಕರ ಟಾರ್ಗೆಟ್ ಆಗಿ ರೂಪುಗೊಂಡಿದ್ದು, ಒಂದರ ನಂತರ ಒಂದರಂತೆ ಗಾಳ ಹಾಕಲು ಶುರು ಮಾಡಿದ್ದರು. 2024ರ ಅಂಕಿ ಅಂಶ ಗಮನಿಸಿದರೇ 314 ಸೈಬರ್ ಪ್ರಕರಣಗಳು ದಾಖಲಾಗಿದ್ದು, ಬರೊಬ್ಬರಿ 25 ಕೋಟಿಷ್ಟು ಹಣ ವಂಚಕರ ಪಾಲಾಗಿತ್ತು.
ಪ್ರಕರಣಗಳ ಒಟ್ಟಾರೆ ತನಿಖೆಯಲ್ಲಿ 12 ಕೋಟಿ ಹಣ ಫ್ರೀಜ್ ಮಾಡಿಸುವುದರ ಜೊತೆಗೆ 2 ಕೋಟಿ ಹಣ ಕಳೆದುಕೊಂಡವರಿಗೆ ಹಿಂತಿರುಗಿಸಲಾಗಿತ್ತು. ಉಳಿದಂತೆ 11 ಕೋಟಿ ಕಾನೂನು ಪ್ರಕ್ರಿಯೆಯಲ್ಲಿದೆ. 2025 ಅಂದರೇ ಈ ವರ್ಷದ ಮೊದಲ ಆರು ತಿಂಗಳಲ್ಲಿ 107 ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದು, ಈಗಾಗಲೇ 10 ಕೋಟಿಗೂ ಅಧಿಕ ಹಣ ವಂಚಕರ ಪಾಲಾಗಿದೆ. 2 ಕೋಟಿಯಷ್ಟು ಹಣ ಫ್ರೀಜ್ ಮಾಡಿರುವ ಪೊಲೀಸರು 70 ಲಕ್ಷದಷ್ಟು ಹಣ ಕಳೆದುಕೊಂಡವರಿಗೆ ನೀಡಿದ್ದಾರೆ.
ತುಮಕೂರು ಸೈಬರ್ ವಂಚಕರ ಹೊಸ ಟಾರ್ಗೆಟ್ ಆಗಿದ್ದು, ಕೇರಳ, ಆಂಧ್ರ, ಯೂಪಿ, ಹರಿಯಾಣ, ಗುಜರಾತ್ ರಾಜ್ಯದಲ್ಲಿ ಕೂತು ವಂಚಕರು ತಮಕೂರಿನ ಜನರನ್ನು ತಮ್ಮ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಿದ್ದಾರೆ. ಹೀಗಾಗಿ ಪೊಲೀಸರು ಸಹ ಹಲವು ರೀತಿಯಲ್ಲಿ ಸಾರ್ವಜನಿಕರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಹೊಸ ಹೊಸ ಮಾರ್ಗದ ಮುಖಾಂತರ ವಂಚನೆಯ ಎಸಗುತ್ತಿರುವ ಸೈಬರ್ ವಂಚಕರು ಪೊಲೀಸರಿಗೆ ಸವಾಲಾಗಿದ್ದಾರೆ. ಆದರೂ, ನಮ್ಮ ಪೊಲೀಸರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತುಮಕೂರು ಎಸ್ಪಿ ಅಶೋಕ್ ವಿಕೆ ಹೇಳುದ್ದಾರೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ನ್ನೂ ಬಿಡದ ಸೈಬರ್ ವಂಚಕರು: ರಾಜ್ಯದ ನೂರಾರು ಜನರಿಂದ ಕೋಟ್ಯಂತರ ರೂ ವಂಚನೆ
ಕೇವಲ ಹೊರ ರಾಜ್ಯಗಳಷ್ಟೇ ಅಲ್ಲದೇ ವಿದೇಶದಿಂದಲೂ ವಂಚನೆಯ ಗಾಳ ತುಮಕೂರಿಗೆ ಬರುತ್ತಿದೆ. ಜನ ಕೊಂಚ ಯಾಮಾರಿದರೂ ಅಕೌಂಟ್ನಲ್ಲಿದ್ದ ಹಣ ಮಂಗಮಾಯವಾಗತ್ತೆ. ಒಟ್ಟಾರೆಯಾಗಿ ತುಮಕೂರು ಪೊಲೀಸರು ಹಲವು ರೀತಿ ಜಾಗೃತಿ ಮೂಡಿಸಿದರೂ ಸೈಬರ್ ವಂಚಕರು ಅದಕ್ಕೂ ಮೀರಿ ವಂಚನೆ ಮಾಡುವುದು ಮುಂದುವರೆದಿದೆ. ಆದರೆ, ಸೈಬರ್ ವಂಚಕರ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Wed, 18 June 25







