
Breaking News Today Highlights in Kannada: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಜುಲೈ 17ರ ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆಗೆ ಹೊಸ ಕಾನೂನು ತರಲು ಸರಕಾರ ಮುಂದಾಗಿದ್ದು, ಆ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಇನ್ನೊಂದೆಡೆ ಬಿಡದಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ತಡರಾತ್ರಿ 1 ಗಂಟೆಯಿಂದ 3.30 ರ ಹೋಟೆಲ್, ರೆಸ್ಟೋರೆಂಟ್ ತೆರೆದಿಡಲು ಅನುಮತಿ ನೀಡಿದೆ. ಇದರೊಂದಿಗೆ ರಾಜ್ಯ, ರಾಷ್ಟ್ರೀಯ, ಕ್ರೀಡೆ, ಸಿನಿಮಾ ಸೇರಿದಂತೆ ಇಂದಿನ ಎಲ್ಲಾ ಸುದ್ದಿ ಬೆಳವಣಿಗೆಗಳ ತಾಜಾ ಮಾಹಿತಿಗಾಗಿ ಈ ಪುಟವನ್ನು ರಿಫ್ರೆಷ್ ಮಾಡುತ್ತಾ ಇರಿ.
KRIDL ಕಾರ್ಯಪಾಲಕ ಅಭಿಯಂತರ ಚಿಂಚೋಳಿಕರ್ರನ್ನು ಕೊಪ್ಪಳದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕೊಪ್ಪಳ KRIDL ಇಇ ಆಗಿದ್ದ ಚಿಂಚೋಳಿಕರ್ ವಿವಿಧ ಕಾಮಗಾರಿಯಲ್ಲಿ 72 ಕೋಟಿ ಅಕ್ರಮ ನಡೆಸಿರೋದು ಸಾಬೀತಾಗಿತ್ತು.
ವಿಧಾನಪರಿಷತ್ ಚುನಾವಣೆ ಅಖಾಡಕ್ಕೆ ಕೆಆರ್ಎಸ್ ಪಕ್ಷ ಧುಮುಕಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಿವೃತ್ತ ಪ್ರಾಂಶುಪಾಲ ಡಾ.ಹೆಬ್ಬೂರು ಹೆಸರು ಘೋಷಣೆ ಮಾಡಲಾಗಿದೆ.
ಯುವಕನನ್ನು ಕಾರಿನಲ್ಲಿ ಕರೆದೊಯ್ದು 6 ಜನರು ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕಾರು ತಡೆದು ಕಾರಿನಲ್ಲಿದ್ದವರಿಗೆ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆ.ಪಿ.ನಗರದಲ್ಲಿ ನಡೆದಿದೆ. ಯುವತಿಯೊಬ್ಬಳ ಪ್ರೇಮ ವಿವಾಹ ಸಂಬಂಧ ಜೆ.ಪಿ.ನಗರದ ರೋಷನ್ನನ್ನ ಕರೆದೊಯ್ದು ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದ್ದು, ಹಲ್ಲೆ ನಡೆಸಿ ಆರೋಪಿಗಳು ವಾಪಸಾಗುವಾಗ ರೋಷನ್ ಕಡೆಯವರು ಕಾರು ತಡೆದಿದ್ದಾರೆ. ಈ ವೇಳೆ ಮಾರಾಮಾರಿಯೇ ನಡೆದಿದ್ದು, ಇನೋವಾ ಕಾರಿನ ಗ್ಲಾಸ್ ಒಡೆದು ರೋಷನ್ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ತಡೆಯಲು ಮುಂದಾದ ವೇಳೆ ಪರಾರಿಯಾಗಲು ಯತ್ನದ ವೇಳೆ ಮತ್ತೊಂದು ಕಾರಿಗೆ ಇನೋವಾ ಡಿಕ್ಕಿ ಹೊಡೆದಿದೆ.ಈ ವೇಳೆ ರಸ್ತೆ ಬದಿಯ ಕಲ್ಲಿನಲ್ಲಿ ಕಾರು ಸಿಲುಕಿದ್ದು, ತಕ್ಷಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿದ್ದು, ಎರಡೂ ಕಡೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.
ಕೊಡಗಿನ ಹೋಂಸ್ಟೇನಲ್ಲಿ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ ಕೇಸ್ ಸಂಬಂಧ ಬಂಧನ ಕಾನೂನುಬಾಹಿರವೆಂದು ಘೋಷಿಸಿ 15 ಲಕ್ಷ ಪರಿಹಾರ ಕೋರಿ ಹೋಂಸ್ಟೇ ಮಾಲೀಕ ಪಲೆಕಾಂಡ ಪೊನ್ನಪ್ಪ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಬಂಧನ ಕಾನೂನುಬಾಹಿರವೆಂದು ಆದೇಶಿಸಿದೆ. ಜೊತೆಗೆ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಪ್ರಕರಣದ ತನಿಖೆ ರದ್ದುಪಡಿಸಲು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ನಕಾರ ವ್ಯಕ್ತಪಡಿಸಿದೆ. ತನಗೆ ನೆರವಾಗಿದ್ದಕ್ಕೆ ಮಾಲೀಕನಿಗೆ ಸಂತ್ರಸ್ತೆಯೇ ಧನ್ಯವಾದ ಹೇಳಿದ್ದಾರೆ. ಸಾಕ್ಷ್ಯ ನಾಶಕ್ಕಾಗಲೀ, ಘಟನೆ ಮುಚ್ಚಿಡಲಾಗಲೀ ಮಾಲೀಕ ಯತ್ನಿಸಿಲ್ಲ. ಪೊಲೀಸರು ವಿಚಾರಣೆಯನ್ನೇ ನಡೆಸದೇ ಮಾಲೀಕನನ್ನು ಬಂಧಿಸಿದ್ದಾರೆಂದು ವಾದಿಸಲಾಗಿತ್ತು.
ಆಕಸ್ಮಿಕ ಬೆಂಕಿಯಿಂದ ಪೇಪರ್ ಫ್ಯಾಕ್ಟರಿ ಹೊತ್ತಿ ಉರಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅವಘಡದಲ್ಲಿಹಾಯ್ಹೊಳೆ ಫ್ಯಾಕ್ಟರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ 4 ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದ್ದು, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಹುತ ನಡೆದಿದೆ.
ಚುನಾವಣಾ ಆಯೋಗ SIR ವೇಳಾಪಟ್ಟಿ ಬದಲಾಯಿಸಿದ್ದು, ಬಿಎಲ್ಒಗಳಿಂದ ಮನೆ ಮನೆಗೆ ಭೇಟಿ ಆ.8ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮತದಾರರ ಡ್ರಾಫ್ಟ್ ಪಟ್ಟಿ ಆಗಸ್ಟ್ 17ಕ್ಕೆ ಮತ್ತು ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 19ಕ್ಕೆ ಪ್ರಕಟವಾಗಲಿದೆ. ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಕಾರ್ಯಕ್ರಮ ನಿಗದಿ ಹಿನ್ನೆಲೆ ಜುಲೈ 18ರಂದು ನಡೆಯಬೇಕಿದ್ದಸಾಧನಾ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ. 3200 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 1 ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆಗೆ ಕೋಲಾರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಿಎಂ ಡಿಕೆಶಿ, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮನ್ನು ಕರೆಸಿಕೊಂಡು ಕಾರ್ಯಕ್ರಮ ಒಂದರೆಡು ದಿನ ಮುಂದೂಡುವಂತೆ ಸೂಚನೆ ನೀಡಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಸಿಎಂ ಅವರನ್ನು ದೆಹಲಿಗೆ ಕರೆದಿದ್ದು, 2 ದಿನ ಸಮಯ ಸಿಕ್ಕಿರುವುದ್ರಿಂದ ಕಾರ್ಯಕ್ರಮ ಮತ್ತಷ್ಟು ಚೆನ್ನಾಗಿ ಮಾಡ್ತೇವೆ ಎಂದವರು ತಿಳಿಸಿದ್ದಾರೆ.
ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ನಡೆದಿದೆ. ಮೃತನನ್ನು ಜವನಿಕುಪ್ಪೆ ಗ್ರಾಮದ 45 ವರ್ಷದ ಕೃಷ್ಣ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ 2ನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರಿ ಕಸರತ್ತು ಆರಂಭಿಸಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಇಂದು ಸಂಜೆ ನವದೆಹಲಿಗೆ ತೆರಳುವ ಮುನ್ನ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಡೆಸಿರುವ ಸುದೀರ್ಘ ಮಾತುಕತೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಹಿನ್ನೆಲೆ ಕಾರಣ ನಾಳೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿದೆ. ನಾಳೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಬೇಕಿತ್ತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಮರುಪರಿಶೀಲನೆ ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯವಿರುವ ನಿಯಮಗಳ ಸಡಿಲಿಕೆ ಕುರಿತು ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು ಬುಧವಾರ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಬಾಡಿಗೆದಾರರ ಗೃಹಜ್ಯೋತಿ ಸೌಲಭ್ಯದ ಗೊಂದಲ ಹಾಗೂ ಕಟ್ಟಡಗಳ ವಿದ್ಯುತ್ ಸಂಪರ್ಕಕ್ಕೆ ಓಸಿ ಮತ್ತು ಸಿಸಿ ವಿನಾಯಿತಿ ನೀಡುವ ಕುರಿತು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಎನ್ಯುಮರೇಷನ್ ಫಾರಂ ಹಂಚಿಕೆ ಪ್ರಕ್ರಿಯೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಬೆಂಗಳೂರಿನ ಯಾವುದೇ ವಲಯದಲ್ಲೂ ಇನ್ನೂ ಶೇ. 90ರ ಗಡಿ ದಾಟಲು ಸಾಧ್ಯವಾಗಿಲ್ಲ.
ಇಡೀ ರಾಜ್ಯದ ಗಮನ ಸೆಳೆದಿದ್ದ ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡವು (SIT), ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಅಂತಿಮ ಚಾರ್ಜ್ಶೀಟ್ (ವರದಿ) ಸಲ್ಲಿಕೆ ಮಾಡಿದೆ. ಎಸ್ಐಟಿ ಎಸ್ಪಿ ಸಿ.ಎ. ಸೈಮನ್ ನೇತೃತ್ವದ ತನಿಖಾ ತಂಡವು ಈ ಬೃಹತ್ ವರದಿಯನ್ನು ಕೋರ್ಟ್ಗೆ ಒಪ್ಪಿಸಿದೆ. ಬುರುಡೆ ಪ್ರಕರಣದ ಸತ್ಯಾಸತ್ಯತೆ ಹೊರತರಲು ಎಸ್ಐಟಿ ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿದ್ದು, ದಾಖಲೆಗಳ ಮಹಾಪೂರವನ್ನೇ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಎಸ್ಐಟಿ ತಂಡವು ಒಟ್ಟು 12 ಫೈಲ್ಗಳಲ್ಲಿ ಬರೋಬ್ಬರಿ 7,005 ಪುಟಗಳ ಸುದೀರ್ಘ ವರದಿಯನ್ನು ಸಲ್ಲಿಸಿದೆ. ಈ ಹಿಂದೆ 2025ರ ನವೆಂಬರ್ 20 ರಂದು ಎಸ್ಐಟಿ 3,923 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಇದೀಗ ಅದಕ್ಕೆ ಪೂರಕವಾಗಿ 3,082 ಪುಟಗಳ ಇಂದಿನ ವರದಿಯನ್ನು ಸೇರಿಸಿ, ಒಟ್ಟು 7,005 ಪುಟಗಳ ಅಂತಿಮ ತನಿಖಾ ವರದಿಯನ್ನು ಸಿದ್ಧಪಡಿಸಲಾಗಿದೆ.
ರೈತರು ನಿಮ್ಮ ಬದುಕು ರೂಪಿಸಿಕೊಳ್ಳಿ. ಸಮಿತಿ ಮುಂದೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ ಎಂದು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ಧಾರೆ. ಅಂದು ಜೈಲಿಗೆ ಬಂದು ಹೆಚ್ಡಿಕೆ ನನ್ನನ್ನು ನೋಡಿಕೊಂಡು ಹೋಗಿದ್ದಾರೆ. ಅವರ ಹಿರಿತನಕ್ಕೆ ಗೌರವ ಸಲ್ಲಿಸುವುದು ನನ್ನ ಧರ್ಮ. ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಕಲ್ಪ ಮಾಡಿದ್ದೀರಿ. ನಾನು ಜೈಲಿಗೆ ಹೋಗಿ ಬಂದು ಸಿಎಂ ಆಗಿದ್ದೇನೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬಿಡದಿ ಟೌನ್ಶಿಪ್ ಕುರಿತ ಸರ್ವೆಗೆ ಹೋಗಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ತಾಯಂದಿರು ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅವಶ್ಯಕತೆ ಇಲ್ಲ. ಬೇಕಾದರೆ ನನಗೆ ಹೊಡೆಯಿರಿ ಎಂದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಲವಂತವಾಗಿ ಜಮೀನು ತೆಗೆದುಕೊಳ್ಳುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಹೆಚ್ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ತಗೆದುಕೊಂಡಿದ್ದ ನಿರ್ಧಾರಗಳನ್ನು ಮುಂದುವರಿಸುತ್ತಿದ್ದೇವೆ. 2006ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದಿದ್ದ ಮೀಟಿಂಗ್ ಪ್ರೊಸಿಡಿಂಗ್ಸ್ ಇದೆ. ಆರ್.ಅಶೋಕ್ ಕಂದಾಯ ಸಚಿವರಾಗಿದ್ದಾಗ ತೀರ್ಮಾನ ಮಾಡಿದ್ದರು. ರೈತರು ಜಮೀನು ಮಾರಿಕೊಳ್ಳದಂತೆ ಹೆಚ್ಡಿಕೆ ರೆಡ್ಝೋನ್ ಮಾಡಿದ್ದಾರೆ. ರೈತರ ಬಳಿ ಸಭೆ ಮಾಡಿದ್ದೇನೆ, ಜಮೀನು ಕೊಡುವವರು ಮುಂದೆ ಬರಲಿ. ರೈತರು ಸ್ವಯಂ ಇಚ್ಛೆಯಿಂದ ಜಮೀನು ಕೊಟ್ಟರೆ ತೆಗೆದುಕೊಳ್ಳುತ್ತೇವೆ. ಇಲ್ಲವಾದರೆ ಇಲ್ಲ ಎಂದು ಹೇಳಿದರು.
ಕೊನೆಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಚಟುವಟಿಕೆಗೆ ಜೀವ ಬಂದಿದೆ. ಇಂದು ರಾತ್ರಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿ ಪ್ರಸಾದ್ ದೆಹಲಿ ತಲುಪಲಿದ್ದು, ಗುರುವಾರ ಮೊದಲ ಹಂತದ ಚರ್ಚೆ ನಡೆಸಲಿದ್ದಾರೆ. ರಾಜ್ಯ ನಾಯಕರ ಜೊತೆ ಹೈಕಮಾಂಡ್ ನಾಯಕರು ಸಭೆ ನಡೆಸಲಿದ್ದಾರೆ. ನಾಳೆ ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸುರ್ಜೇವಾಲ, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಸಭೆಯಲ್ಲಿರಲಿದ್ದಾರೆ.
15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಯ ಅಂತರರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆಯ ನಿರ್ವಹಣೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈಭವ್ ಪಾದಾರ್ಪಣೆ ವಿಚಾರವಾಗಿ ಮಾತನಾಡಿರುವ ದಿನೇಶ್ ಕಾರ್ತಿಕ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವಿನ ಸಮನ್ವಯದ ಕೊರತೆಯನ್ನು ಪ್ರಶ್ನೆ ಮಾಡಿದ್ದಾರೆ. ಮತ್ತಷ್ಟು ಓದಿ
ಬೆಂಗಳೂರಿನಲ್ಲಿ 34 ಕೋಟಿ ರೂ. ಡ್ರಗ್ಸ್ ಸೀಜ್ ಮಾಡಿದ ಹೆಬ್ಬಾಳ ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿಕೆ ನೀಡಿದ್ದು, ಮೂರು ಡಿವಿಷನ್ಗಳಲ್ಲಿ 10 ದಿನಗಳಿಂದ ಕಾರ್ಯಾಚರಣೆ ನಡೆದಿದೆ. ಹೆಬ್ಬಾಳದಲ್ಲಿ 17 ಕೆಜಿ MDMA ಡ್ರಗ್ಸ್ ಸೀಜ್ ಮಾಡಿದ್ದಾರೆ. ಕಳೆದ ಬಾರಿಯೂ 34 ಕೋಟಿಯಷ್ಟು ಡ್ರಗ್ಸ್ ಸೀಜ್ ಮಾಡಿದ್ದಾರೆ. ನವದೆಹಲಿಯಲ್ಲೂ ಕೆಲ ಕೆಜಿಯಷ್ಟು ಡ್ರಗ್ಸ್ ಸೀಜ್ ಮಾಡಿದ್ದಾರೆ. ಹೆಬ್ಬಾಳ ಪೊಲೀಸರ ಮಾಹಿತಿ ಮೇರೆಗೆ ದಾಳಿ ಮಾಡಿ ಅರೆಸ್ಟ್ ಮಾಡಲಾಗಿದೆ. ಡ್ರಗ್ಸ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಗೆ ಹೋಗಿ ವಶಕ್ಕೆ ತೆಗೆದುಕೊಳ್ಳುವುದು ಹಾಗೂ ಸ್ಥಳ ಪತ್ತೆ ತುಂಬಾ ಕಷ್ಟ. ನಿಖರ ಮಾಹಿತಿಯನ್ನು ಸಂಗ್ರಹ ಮಾಡಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೆಬ್ಬಾಳ ಪೊಲೀಸರ ಉತ್ತಮ ಕಾರ್ಯಕ್ಕಾಗಿ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಹೇಳಿದ್ದಾರೆ. ಇದಕ್ಕೆ ನಿಖರವಾದ ಕಾರಣಗಳನ್ನು ಅವರು ನೀಡಿದ್ದಾರೆ. ಕಾರಣ ತಿಳಿಯಲು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ರೈಲು ಟಿಕೆಟ್ ತತ್ಕಾಲ್ ಬುಕ್ ಮಾಡುವಾಗ ಹ್ಯಾಂಗ್ ಆಗುವುದು, ಪೇಮೆಂಟ್ ಫೈಲ್ ಆಗುವುದನ್ನು ತಪ್ಪಿಸಲು ಈಗ ಭಾರತೀಯ ರೈಲ್ವೆ ಕ್ರಮ ಕೈಗೊಂಡಿದೆ. ಹೊಸ ವೆಬ್ಸೈಟ್ ಆರಂಭಿಸಲಾಗಿದ್ದು, ಇದು ವೇಗವಾಗಿ ರೈಲು ಟಿಕೆಟ್ ಬುಕಿಂಗ್ಗೆ ನೆರವಾಗಲಿದೆ. ಮತ್ತಷ್ಟು ಓದಿ
ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆಗಾಗಿ ನೂತನ ಕಾನೂನು ರೂಪಿಸುವ ಸಂಬಂಧ ಬೆಂಗಳೂರಿನ ನೆಹರು ತಾರಾಲಯದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಭೈರೇಗೌಡ ಮಾತನಾಡಿದರು. ತುಂಬಾ ವರ್ಷಗಳಿಂದ ವಿಧೇಯಕಕ್ಕೆ ಬೇಡಿಕೆ ಇದೆ. 1972ರಲ್ಲಿ ಅಪಾರ್ಟ್ಮೆಂಟ್ ಓನರ್ಶಿಪ್ ಕಾನೂನು ಮಾಡಿದ್ದೇವೆ. ಈಗ ಕಾಲ ಬದಲಾಗಿದೆ, ಅಪಾರ್ಟ್ಮೆಂಟ್ ಸಂಖ್ಯೆ ಜಾಸ್ತಿ ಆಗಿದೆ. ಹೀಗಾಗಿ ಹೊಸ ಕಾನೂನು ತರುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ದೇಶದಲ್ಲಿಯೇ ಹೊಸ ಪ್ರಯತ್ನಕ್ಕೆ ಕರ್ನಾಟಕ ಆರೋಗ್ಯ ಇಲಾಖೆ ಕೈಹಾಕಿದೆ. ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ ಬರಲಿದೆ ಆ್ಯಂಬುಲೆನ್ಸ್. ಗರಿಷ್ಠ 15 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳದಿದ್ದರೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ತಡವಾಗಿ ಸ್ಥಳಕ್ಕೆ ಬರುವ ಆ್ಯಂಬುಲೆನ್ಸ್ಗೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. 13ರಿಂದ 15 ನಿಮಿಷಗಳಲ್ಲಿ ರೋಗಿ ಇರುವ ಸ್ಥಳ ತಲುಪದೇ ಇದ್ರೆ ಚಾಲಕರಿಗೆ ದಂಡ ವಿಧಿಸುವುದರ ಜತೆಗೆ ಏಜೆನ್ಸಿಯನ್ನೇ ಹೊಣೆ ಮಾಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಮತ್ತಷ್ಟು ಓದಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಪಾರ್ಟ್ಮೆಂಟ್ ಮಾಲೀಕತ್ವದ ಹೊಸ ಬಿಲ್, ಬಿಡದಿ ಟೌನ್ಶಿಪ್ ಯೋಜನೆ ಹಾಗೂ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಿಎಂ ಈ ವೇಳೆ ಮಾತನಾಡಲಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಗುರುವಾರ ಹೈಕಮಾಂಡ್ ನಾಯಕರ ಭೇಟಿಯಾಗಲಿದ್ದಾರೆ.
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿಯ ಟಿಳಕವಾಡಿಯಲ್ಲಿ ಸಂಸ್ಥೆ ಆರಂಭಿಸಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಹಣ ಸಂಗ್ರಹಿಸಿ 165ಕೋಟಿ ರೂ ಟೋಪಿ ಹಾಕಿ ಆರೋಪಿಗಳು ದುಬೈಗೆ ಪರಾರಿಯಾಗಿದ್ದಾರೆ. ಒಂದು ಲಕ್ಷ ಹೂಡಿಕೆ ಮಾಡಿದ್ರೆ ಮಾಸಿಕ 4 ಸಾವಿರ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಲಾಗಿತ್ತು. ಸದ್ಯ ಹೂಡಿಕೆದಾರರ ಮನವಿ ಮೇರೆಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದ್ದು, ಜುಲೈ 17 ರ ನಂತರ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಇದರೊಂದಿಗೆ, ಇದೀಗ ಜುಲೈ 18ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದರೆ ಕ್ಯಾಬಿನೆಟ್ ವಿಸ್ತರಣೆ ಫಿಕ್ಸ್ ಎನ್ನಲಾಗುತ್ತಿದೆ. ಸಿದ್ದರಾಮಯ್ಯರಿಂದಲೂ ಹೈಕಮಾಂಡ್ ಸಚಿವಾಕಾಂಕ್ಷಿಗಳ ಪಟ್ಟಿ ಪಡೆದಿದೆ ಎನ್ನಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳನ್ನು ನಿಯಂತ್ರಿಸುವ ದೃಷ್ಟಿಯಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ನೀಡುವ ಮಹತ್ವದ ಅಭಿಯಾನವನ್ನು ಬುಧವಾರದಿಂದ (ಜುಲೈ 15) ಆರಂಭಿಸುತ್ತಿದೆ. ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಗಾರು ಮಳೆ ಕೊರತೆಯಿಂದ ದಿನಸಿ ವಸ್ತುಗಳ ಲಭ್ಯತೆ ಕೊರತೆ ಭೀತಿ ಉಂಟಾಗಿದೆ. ಇದರ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಮತ್ತಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಫುಟ್ಬಾಲ್ ಪ್ರೇಮಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದೆ. ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಮನವಿ ಮೇರೆಗೆ ತೀರ್ಮಾನ ಕೈಗೊಂಡಿರುವ ಸರ್ಕಾರ, ತಡರಾತ್ರಿ 1ರಿಂದ 3.30ರವರೆಗೂ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದೆ. ಇಂದು ಸೆಮಿಫೈನಲ್ ಮತ್ತು ಜುಲೈ 19ರಂದು ಫೈನಲ್ ಪಂದ್ಯ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಎಲ್ಲಾ ರೀತಿಯ ಭದ್ರತೆ ನೋಡಿಕೊಂಡು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
Football inspires millions across the world, and the FIFA World Cup is a celebration that fans eagerly look forward to. Following a request from the National Restaurant Association of India, our government has permitted hotels and restaurants in Bengaluru to extend food service…
— DK Shivakumar (@DKShivakumar) July 14, 2026
ಬಿಡದಿ ಬಳಿ ಟೌನ್ಶಿಪ್ ಯೋಜನೆ ವಿರೋಧಿಸಿ ರೈತರ ಧರಣಿ ಮುಂದುವರಿದಿದ್ದು, ಅನ್ನದಾತರ ಹೋರಾಟಕ್ಕೆಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಾಥ್ ನೀಡುವ ಸಾಧ್ಯತೆ ಇದೆ.
ಅಪಾರ್ಟ್ಮೆಂಟ್ಗಳಿಗೆ ಹೊಸ ಕಾನೂನು ತರಲು ಸರ್ಕಾರ ಸಜ್ಜಾಗಿದ್ದು, ಇಂದು ಬೆಳಗ್ಗೆ 11ಕ್ಕೆ ಜವಹರಲಾಲ್ ನೆಹರು ತಾರಾಲಯದಲ್ಲಿ ಅಪಾರ್ಟ್ಮೆಂಟ್ ಸಂಘದ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಉಪಸ್ಥಿತರಿರಲಿದ್ದಾರೆ.
Published On - 8:07 am, Wed, 15 July 26