TV9 Kannada News Live: ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಮತ್ತೆ ಶುರುವಾಯ್ತು ಪೋಸ್ಟರ್ ವಾರ್!
Karnataka News Today Live Updates:ಇರಾನ್ ವಿರುದ್ಧ ಯುದ್ಧ ತಡೆಯಲು ಅಮೆರಿಕ ಸೆನೆಟ್ನಲ್ಲಿ ನಿರ್ಣಯ ಅಂಗೀಕಾರವಾಗಿದ್ದು ಟ್ರಂಪ್ಗೆ ಹಿನ್ನಡೆಯಾಗಿದೆ. ಇತ್ತ ಐರ್ಲೆಂಡ್-ಇಂಗ್ಲೆಂಡ್ ಸರಣಿಗೆ ಭಾರತ ತಂಡಕ್ಕೆ ಸೂರ್ಯಂಶ್ ಶೆಡ್ಗೆ ಎಂಟ್ರಿ ಕೊಟ್ಟರೆ, ದಕ್ಷಿಣ ಚಿತ್ರರಂಗದ ಪಿತೃಪ್ರಧಾನ ಮನಸ್ಥಿತಿ ವಿರುದ್ಧ ನಟಿ ತಮನ್ನಾ ಭಾಟಿಯಾ ಆಕ್ರೋಶ ಹೊರಹಾಕಿದ್ದಾರೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್ನಲ್ಲಿ ಮಹತ್ವದ ನಿರ್ಣಯ ಅಂಗೀಕಾರವಾಗುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ರಾಜಕೀಯ ಹಿನ್ನಡೆಯಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ವಿವಿಧ ರಂಗಗಳ ಸಾಧಕರಿಗೆ ಪ್ರತಿಷ್ಠಿತ ‘ಪದ್ಮ ಪ್ರಶಸ್ತಿ 2026’ ಅನ್ನು ಪ್ರದಾನ ಮಾಡಿದ್ದಾರೆ. ಇತ್ತ ಕ್ರೀಡಾಲೋಕದಲ್ಲಿ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೂ ಮುನ್ನ ಗಾಯಾಳು ನಿತೀಶ್ ರೆಡ್ಡಿ ಬದಲಿಗೆ 23 ವರ್ಷದ ಯುವ ಆಲ್ರೌಂಡರ್ ಸೂರ್ಯಂಶ್ ಶೆಡ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ, ನಟಿ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಪಿತೃಪ್ರಧಾನ ಮನಸ್ಥಿತಿ ಮತ್ತು ಐಟಂ ಸಾಂಗ್ಗಳ ಸಂಸ್ಕೃತಿ ಬಗ್ಗೆ ಮುಕ್ತವಾಗಿ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ನೋಂದಣಿಗೆ ಇವರಿಗೇನು ಕಷ್ಟ ಎಂದ ಹರಿಪ್ರಸಾದ್
ಪಕ್ಷ ಆರ್ ಎಸ್ ಎಸ್ ಸಿದ್ದಾಂತ ಒಪ್ಪಿಕೊಳ್ಳಲ್ಲ. ಆರ್ ಎಸ್ ಎಸ್ ಸಂವಿಧಾನ, ಜ್ಯಾತ್ಯಾತೀತ ವಿರುದ್ಧ ಇದೆ. ಆರ್ ಎಸ್ ಎಸ್ ನೋಂದಣಿ ಮಾಡಿಕೊಳ್ಳಬೇಕು. ಫುಟ್ ಪಾತ್ ಮೇಲೆ ಅಂಗಡಿ ಇಟ್ಟವನು ನೋಂದಣಿ ಮಾಡದೇ ಇದ್ರೆ ಪೊಲೀಸರು ಹಿಡಕೊಂಡು ಹೋಗ್ತಾರೆ. ನೋಂದಣಿಗೆ ಇವರಿಗೇನು ಕಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
-
ಫುಟ್ ಪಾತ್ ತೆರವಿಗೆ ಪಣತೊಟ್ಟ ಕೃಷ್ಣಭೈರೇಗೌಡ
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಬೆಂಗಳೂರು ರಸ್ತೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಯ್ತು. ಇದೀಗ ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಮುಂದಾಗಿದ್ದು, ಈ ಸಂಬಂಧಅದರಂತೆ ಇಂದು (ಜೂನ್ 24) GBA ಮುಖ್ಯ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರ ಸಭೆ ನಡೆಸಿದ್ದಾರೆ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನ ಉಪಯೋಗಕ್ಕೆ ನೆರವಾಗುವಂತೆ ದುರಸ್ತಿ ಕಾಮಗಾರಿಗಳನ್ನು ನಡೆಸುವ ಕುರಿತು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಫುಟ್ ಪಾತ್ ತೆರವಿಗೆ ಸಂಬಂಧ ತೊಂದರೆ ಬಂದರೆ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಮಾತುಗಳನ್ನಾಡಿದ್ದಾರೆ.
-
-
ಸಚಿವ ಸ್ಥಾನದ ಲಾಬಿಗೆ ಹೈಕಮಾಂಡ್ ಬ್ರೇಕ್; ಸಿಎಂಗೆ ಖಡಕ್ ಸೂಚನೆ
ಸಂಪುಟ ವಿಸ್ತರಣೆ ಲಾಬಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಹೈಕಮಾಂಡ್ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಖಡಕ್ ಸೂಚನೆ ನೀಡಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ತಂತ್ರ, ಪ್ರತಿಭಟನೆ ಅಥವಾ ಗುಂಪುಗಾರಿಕೆ ನಡೆಸಿದರೆ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುವುದು ಮತ್ತು ಸೂಕ್ತ ಸಮಯದಲ್ಲಿ ವರಿಷ್ಠರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದೂರವಾಣಿ ಕರೆ ಮೂಲಕ ಎಚ್ಚರಿಸಿದ್ದಾರೆ.
-
ಅಧಿಕಾರಿ ಮಂಜುನಾಥ್ ನಿವಾಸದಲ್ಲಿ ಭಾರೀ ಚಿನ್ನಾಭರಣ ಪತ್ತೆ!
ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ, ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ನಿವಾಸದ ಮೇಲೆ ನಡೆದ ಇಡಿ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಬೆಳಗಾವಿಯ ಟಿವಿ ಸೆಂಟರ್ನಲ್ಲಿರುವ ಅವರ ನಿವಾಸದಲ್ಲಿ ಸಿಕ್ಕಿರುವ ಈ ಆಭರಣಗಳ ನಿಖರ ತೂಕ ಹಾಗೂ ಮೌಲ್ಯವನ್ನು ಲೆಕ್ಕಹಾಕಲು ಇಡಿ ಅಧಿಕಾರಿಗಳು ಇಬ್ಬರು ವೃತ್ತಿಪರ ಚಿನ್ನದ ಮೌಲ್ಯಮಾಪಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.
-
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಲೋಪ!
ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ (CAG) ಭಾರೀ ಲೋಪ ಪತ್ತೆ ಹಚ್ಚಿದೆ. ಬ್ಯಾಂಕ್ ಖಾತೆಯೇ ಇಲ್ಲದ 23,262 ಮಂದಿಗೆ 3,03,454 ಕಂತುಗಳಲ್ಲಿ ಬರೋಬ್ಬರಿ 60.69 ಕೋಟಿ ರೂ. ವರ್ಗಾವಣೆಯಾಗಿದೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದವರಿಂದ 10,06,308 ಖಾತೆಗಳು ಪದೇ ಪದೇ ಬದಲಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ತಕ್ಷಣ ಕ್ರಮಕ್ಕೆ ತಾಕೀತು ಮಾಡಲಾಗಿದೆ. ಮತ್ತಷ್ಟು ಓದಿ
-
-
ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಸ್ಕೆಚ್: ಶಂಕಿತ ಉಗ್ರನಿಂದ ಸಂಚು ಬಯಲು!
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಧಿತನಾಗಿರುವ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್, ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಈತನ ಮೊಬೈಲ್ ಪರಿಶೀಲಿಸಿದಾಗ ಪಾಕಿಸ್ತಾನದ ಕೋಡ್ ಹೊಂದಿರುವ ಶಂಕಿತ ವಾಟ್ಸಾಪ್ ಗ್ರೂಪ್ಗಳು, ದೇಶವಿರೋಧಿ ಚಾಟ್ಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಪತ್ತೆಯಾಗಿದ್ದು, ತನಿಖೆ ತೀವ್ರಗೊಂಡಿದೆ. ಮತ್ತಷ್ಟು ಓದಿ
-
ತ್ರಿಷಾ ಶೇರ್ ಮಾಡಿದ್ದು ಹಳೆಯ ಚಿತ್ರ ಎಂದ ಅಭಿಮಾನಿಗಳು!
ನಟಿ ತ್ರಿಷಾ ಕೃಷ್ಣನ್ ಅವರು ದಳಪತಿ ವಿಜಯ್ ಜನ್ಮದಿನದಂದು ಹಂಚಿಕೊಂಡಿದ್ದ ವಿಶೇಷ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ಈ ಫೋಟೋ ಇತ್ತೀಚಿನದಲ್ಲ, ಬದಲಿಗೆ ಹಳೆಯದು ಎಂದು ಸಾಕ್ಷಿ ಸಮೇತ ಪತ್ತೆ ಹಚ್ಚಿದ್ದಾರೆ. ಫೋಟೋದಲ್ಲಿರುವ ವಿಜಯ್ ಅವರ ಉಡುಗೆ ಹಾಗೂ ಕೇಶ ವಿನ್ಯಾಸವನ್ನು (ಹೇರ್ಸ್ಟೈಲ್) ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿ ನೋಡಿರುವ ನೆಟ್ಟಿಗರು, ಇದು ಸದ್ಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ
-
ಪೋಸ್ಟರ್ ವಿವಾದ: ಸಿಎಂ ಹಾಗೂ ಶಾಸಕರ ವಿರುದ್ಧ ನಿಖಿಲ್ ವಾಗ್ದಾಳಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಮ್ಮ ಚೇಲಾಗಳನ್ನು ಬಿಟ್ಟು ಇಂತಹ ಪೋಸ್ಟರ್ ರಾಜಕಾರಣ ಮಾಡಿಸಿದರೆ, ನಾಳೆಯಿಂದ ನಮ್ಮ ಕಾರ್ಯಕರ್ತರೂ ಪೋಸ್ಟರ್ ಅಭಿಯಾನ ಮಾಡಲಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.
-
20.8 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದ ಪೊಲೀಸರು!
ಕಲಬುರಗಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ 22 ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 20.8 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಡಿಸಿಪಿ ಪ್ರವೀಣ್ ನಾಯಕ್ ನೇತೃತ್ವದಲ್ಲಿ ವಾಡಿ ಪಟ್ಟಣದ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಇವುಗಳನ್ನು ವಿಲೇವಾರಿ ಮಾಡಲಾಗಿದೆ. ನಾಶಪಡಿಸಲಾದ ವಸ್ತುಗಳಲ್ಲಿ 17 ಲಕ್ಷ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ಸಿಂಥೆಟಿಕ್ ಡ್ರಗ್ಸ್ ಒಳಗೊಂಡಿವೆ.
-
ಸಚಿವ ಸತೀಶ್ ಜಾರಕಿಹೊಳಿ ಭಾವ ಮಂಜುನಾಥ್ ನಿವಾಸಗಳ ಮೇಲೆ ಇಡಿ ದಾಳಿ
ಬೆಳಗಾವಿಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಂಜುನಾಥ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ (ಭಾವ) ಹಾಗೂ ಬಳ್ಳಾರಿ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರರಾಗಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಇವರ ಎರಡು ನಿವಾಸಗಳು ಸೇರಿದಂತೆ ಗೋವಾ ಹಾಗೂ ಬೆಳಗಾವಿಯ ಹಲವೆಡೆ ಎರಡು ಕಾರುಗಳಲ್ಲಿ ಬಂದ ಅಧಿಕಾರಿಗಳ ತಂಡ ಮುಂಜಾನೆ 5:30ರಿಂದಲೇ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
-
ನವಿಲು ಗರಿ ಬಳಕೆ ವಿವಾದ: ಕ್ಷಮೆಯಾಚಿಸಿದ ನಟ ಕಿಶನ್ ಬಿಳಗಲಿ
ವೀಡಿಯೋವೊಂದರಲ್ಲಿ ನವಿಲು ಗರಿ ಬಳಸಿದ ವಿವಾದಕ್ಕೆ ಸಂಬಂಧಿಸಿದಂತೆ ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. “ಹಾಡಿನ ಕಾನ್ಸೆಪ್ಟ್ಗಾಗಿ ನವಿಲು ಗರಿಯನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಇದು ತಪ್ಪು ಎಂಬುದು ನಮಗೆ ತಿಳಿದಿರಲಿಲ್ಲ. ನಮ್ಮಿಂದ ತಪ್ಪಾಗಿದೆ, ಯಾರೂ ಇಂತಹ ತಪ್ಪು ಮಾಡಬೇಡಿ. ವಿಷಯ ತಿಳಿಯುತ್ತಿದ್ದಂತೆ ವೀಡಿಯೋ ಡಿಲೀಟ್ ಮಾಡಿದ್ದೇವೆ” ಎಂದು ಕಿಶನ್ ತಿಳಿಸಿದ್ದಾರೆ.
-
ಹಳಿಯಾಳ: ನಾಡಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೂ ಎರಡು ಬಾಂಬ್ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ವಸಂತ ಕೊರವ ಎಂಬುವವರ ಮನೆಯಲ್ಲಿ ನಾಡಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ, ಗ್ರಾಮದ ಕೆರೆ ಬಳಿ ಮತ್ತೂ ಎರಡು ನಾಡಬಾಂಬ್ ಪತ್ತೆಯಾಗಿವೆ. ಸ್ಫೋಟದ ಬಳಿಕ ವಸಂತ್ ಕುಟುಂಬ ಸಮೇತ ಪರಾರಿಯಾಗಿದ್ದು, ಈತ ಮನೆಯಲ್ಲೇ ಬಾಂಬ್ ತಯಾರಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಬಾಂಬ್ ನಿಷ್ಕ್ರಿಯ ದಳಕ್ಕೆ ತಂತಿ, ಮದ್ದಿನ ಪೌಡರ್ ಹಾಗೂ ಕಾಡುಹಂದಿಯ ಹಲ್ಲುಗಳು ಸಿಕ್ಕಿವೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಶ್ರೀರಾಮನಿಗೆ ಅವಹೇಳನ: ಪ್ರೊ. ಕೆ.ಎಸ್. ಭಗವಾನ್ಗೆ ಪೊಲೀಸ್ ನೋಟಿಸ್
ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರೊ. ಕೆ.ಎಸ್. ಭಗವಾನ್ ಅವರಿಗೆ ಹರಿಹರ ಗ್ರಾಮಾಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಜೂನ್ 9 ರಂದು ಹನಗವಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವಾನ್ ನೀಡಿದ್ದ ಹೇಳಿಕೆ ವಿರುದ್ಧ ಹಿಂದೂ ಜಾಗರಣ ವೇದಿಕೆಯ ದಿನೇಶ್ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
Published On - Jun 24,2026 8:30 AM




