TV9 Kannada News Live: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ; ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಹಾಕಿದ್ಯಾರು?
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ತೀವ್ರಗೊಳಿಸಿದ್ದಾರೆ. ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 1.5ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಸಿಎಂ ಆದ ಬಳಿಕ ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ? ಸದ್ಯದ ಪ್ರಮುಖ ಸುದ್ದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ (Bomb Threat) ಹಾಕಿದ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಲೋಹಿತ್ ಎಂಬಾತ ಬಾಂಬ್ ಬೆದರಿಕೆ ಹಾಕಿದ್ದ. ಬಳಿಕ ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಲೋಹಿತ್ ಮನೆಯಲ್ಲಿ ಇಂದು ಕೋರಮಂಗಲ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಲೋಹಿತ್ ಸದಾ ನಶೆಯಲ್ಲಿರುತ್ತಿದ್ದ ಮತ್ತು ಮನೆಯಲ್ಲಿ ಒಬ್ಬೊಬ್ಬನೇ ಕಿರುಚಾಡುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯ ಡೈರಿ ಹಾಗೂ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಮುಖ್ಯಾಂಶಗಳು
- ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ಚುರುಕು
- ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 1.5ರಷ್ಟು ಹೆಚ್ಚಿದ ಸರ್ಕಾರ
- ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?
ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ತುಟ್ಟಿಭತ್ಯೆ ಶೇ.1.5ರಷ್ಟು ಹೆಚ್ಚಳ
ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, ತುಟ್ಟಿಭತ್ಯೆಯನ್ನು ಶೇ.1.5ರಷ್ಟು ಹೆಚ್ಚಿಸಿ ಸೋಮವಾರ ಆದೇಶ ಹೊರಡಿಸಿದೆ. ಪ್ರಸ್ತುತ ಶೇ.14.25ರಷ್ಟಿರುವ ತುಟ್ಟಿಭತ್ಯೆಯನ್ನು ಶೇ.15.75ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು 2026ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯನ್ನು ಪಡೆಯುತ್ತಿರುವ ಸರ್ಕಾರಿ ನೌಕರರಿಗೆ ಈ ಪರಿಷ್ಕೃತ ತುಟ್ಟಿಭತ್ಯೆ ಅನ್ವಯವಾಗಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಅಡುಗೆ ಎಣ್ಣೆ ದರ ಪ್ರತಿ ಲೀಟರ್ಗೆ 3 ರೂ ಏರಿಕೆ: ಕಡಿಮೆ ಬಳಕೆ ಮೋದಿ ಕರೆ
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ & ಜಾಗತಿಕ ತೈಲ ಮಾರ್ಗವಾದ ಹೊರ್ಮುಜ್ ಬಂದ್ ಆಗಿ ಜಗತ್ತೇ ಸಂಕಷ್ಟದ ಸುಳಿಗೆ ಸಿಲುಕಿದೆ.. ಭಾರತಕ್ಕೂ ಕೂಡ ತೈಲ ಅಭಾವದ ಹೊಡೆತ ಬಿದ್ದಿದೆ. ಈ ಮಧ್ಯೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರವು ಪ್ರತಿ ಲೀಟರ್ಗೆ 3 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಹಿಂದೆ ಲೀಟರ್ಗೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯ ಬೆಲೆ ಇದೀಗ 141 ರೂಪಾಯಿಗೆ ತಲುಪಿದೆ. ಇತ್ತ ಪ್ರಧಾನಿ ಮೋದಿ ಕೂಡ ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ಸಲಹೆ ನೀಡಿದ್ದಾರೆ.
ಸಿಎಂ ಆದ ಬಳಿಕ ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?
ನಟ ದಳಪತಿ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಚಿತ್ರರಂಗದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರತಿ ಸಿನಿಮಾಗೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಅವರು, ಇದೀಗ ಜನರ ಸೇವೆಗಾಗಿ ಬಣ್ಣದ ಪ್ರಪಂಚವನ್ನು ತೊರೆದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್ಗೆ ತಮಿಳುನಾಡು ಲಿಂಕ್? ಸ್ಫೋಟಕ ಸುಳಿವು ಪತ್ತೆ
ಸದ್ಯ ಸಿಎಂ ಆಗಿರುವ ವಿಜಯ್ ಅವರ ಮಾಸಿಕ ಮೂಲ ವೇತನ 2,05,000 ರೂ.ಗಳಾಗಿದ್ದು, ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ವೇತನ ಸುಮಾರು 2,85,000 ರೂ. ಆಗಲಿದೆ. ಅಂದರೆ ವಾರ್ಷಿಕವಾಗಿ ಅವರು 34.20 ಲಕ್ಷ ರೂ. ಪಡೆಯಲಿದ್ದಾರೆ. ಇದರೊಂದಿಗೆ ಅವರಿಗೆ ಸರ್ಕಾರಿ ಬಂಗಲೆ, ಬುಲೆಟ್ ಪ್ರೂಫ್ ಎಸ್ಯುವಿ ಕಾರು, Z+ ದರ್ಜೆಯ ಭದ್ರತೆ ಮತ್ತು ಉಚಿತ ಪ್ರಯಾಣ ಸೌಲಭ್ಯಗಳು ದೊರೆಯಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:15 pm, Mon, 11 May 26




