AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗೇರಿದ ವಿಧಾಸಭೆ ಚುನಾವಣೆ: ಮತ ಕೇಂದ್ರದ ಗೋಡೆಗಳಿಗೆ ಕಲಾತ್ಮಕ ಬಣ್ಣ ಹಚ್ಚಲು ಆಹ್ವಾನ, ಭರ್ಜರಿ ಬಹುಮಾನ

ಉಡುಪಿಯ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್) ಸಮಿತಿಯು ಒಂದು ಹೆಜ್ಜೆ ಮುಂದಿಟ್ಟಿದ್ದು ಸಾರ್ವಜನಿಕರಿಗೆ ಮತ ಕೇಂದ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ.

ರಂಗೇರಿದ ವಿಧಾಸಭೆ ಚುನಾವಣೆ: ಮತ ಕೇಂದ್ರದ ಗೋಡೆಗಳಿಗೆ ಕಲಾತ್ಮಕ ಬಣ್ಣ ಹಚ್ಚಲು ಆಹ್ವಾನ, ಭರ್ಜರಿ ಬಹುಮಾನ
ಮತ ಕೇಂದ್ರಗಳಲ್ಲಿ ರಾರಾಜಿಸಲಿರುವ ಕರಾವಳಿ ಸಂಸ್ಕೃತಿ
ಆಯೇಷಾ ಬಾನು
|

Updated on:Mar 12, 2023 | 9:48 AM

Share

ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಚುನಾವಣೆ ಅಖಾಡ ರಂಗೇರಿದೆ. ಇದರ ಜೊತೆಗೆ ಮತದಾನ ಕೇಂದ್ರಗಳು(Polling Booth) ಕೂಡ ರೋಚಕವಾಗಿ ಕಾಣಿಸಲಿದ್ದು ಬಣ್ಣಗಳು ಮತದಾರರನ್ನು ಸ್ವಾಗತಿಸಲಿವೆ. ಉಡುಪಿಯಲ್ಲಿ ನೂತನ ಯೋಜನೆಯೊಂದನ್ನು ಪ್ರಯೋಗಿಸಲಾಗುತ್ತಿದೆ. ಮತದಾರರಿಗಾಗಿ ಮತಗಟ್ಟೆಗಳ ಅಂದವನ್ನು ಹೆಚ್ಚಿಸಲು ಮತ ಕೇಂದ್ರಗಳಲ್ಲಿ ಕಲಾತ್ಮಕ ಚಿತ್ರ ಮೂಡಿಸಲು ಸ್ವೀಪ್ ಸಮಿತಿ ಮುಂದಾಗಿದೆ. ಉಡುಪಿಯ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್) ಸಮಿತಿಯು ಒಂದು ಹೆಜ್ಜೆ ಮುಂದಿಟ್ಟಿದ್ದು ಸಾರ್ವಜನಿಕರಿಗೆ ಮತ ಕೇಂದ್ರಗಳಿಗೆ ಬಣ್ಣ ಹಚ್ಚುವ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ.

ಪ್ರಥಮ ಬಹುಮಾನ -8,000 ರೂ. ದ್ವಿತಿಯ ಬಹುಮಾನ ಮತ್ತು ತೃತೀಯ ಬಹುಮಾನ ಕ್ರಮವಾಗಿ 6,000 ಮತ್ತು 4,000 ರೂ.ಗಳನ್ನು ನಿಗದಿಪಡಿಸಲಾಗಿದೆ. ಹಾಗೂ ತಲಾ 2,000 ರೂ.ಗಳ ಎರಡು ಸಮಾಧಾನಕರ ಬಹುಮಾನಗಳನ್ನು ಸಹ ಇಡಲಾಗಿದೆ. ಮಾರ್ಚ್ 24 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಗೋಡೆ-ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಪ್ರತಿ ತಾಲೂಕಿನಲ್ಲಿನ ಮತದಾನ ಕೇಂದ್ರಗಳು ಚಿತ್ರಗಳಿಂದ ಹೊಳೆಯಲಿವೆ. ಮತಗಟ್ಟೆಗಳಿಗೆ ಬೇರದೇ ರೂಪ ಸಿಗಲಿದೆ.

ಗೋಡೆ ಚಿತ್ರ ಸ್ಪರ್ಧೆಗೆ ನೊಂದಣಿ ಮಾಡುವುದು ಹೇಗೆ?

ಗೂಗಲ್ ಫಾರ್ಮ್‌ಗಳ ಮೂಲಕ ನೋಂದಣಿಯನ್ನು ಮಾಡಬಹುದು. ಇತ್ತೀಚೆಗಷ್ಟೇ ಹನುಮಂತನಗರ ಶಾಲೆಯಲ್ಲಿ 30ಕ್ಕೂ ಹೆಚ್ಚು ಶಿಕ್ಷಕರು ಐದು ಮತಗಟ್ಟೆಗಳಿಗೆ ಬಣ್ಣ ಬಳಿದು ಸಂಚಲನ ಮೂಡಿಸಿದ್ದರು. ಇನ್ನು ಸ್ಪರ್ಧೆಯ ನಿಯಮಗಳನ್ನು ವಿವರಿಸಿದ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್, ಸ್ವಿಪ್ ಸಮಿತಿಯಿಂದ ಬಣ್ಣ ನೀಡಲಾಗುವುದು, ಭಾಗವಹಿಸುವವರು ಉಪಕರಣಗಳನ್ನು ತಾವೇ ತರಬೇಕಾಗುತ್ತೆ. ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇನ್ನು ಈ ಸ್ಪರ್ಧಿಯಲ್ಲಿ ಇಬ್ಬರು ಸದಸ್ಯರ ತಂಡಗಳಿಗೂ ಅವಕಾಶ ನೀಡಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.

ಇದನ್ನೂ ಓದಿ: ಯುವ ಮತದಾರರನ್ನು ಸೆಳೆಯಲು ಸರ್ಕಾರ ಭರ್ಜರಿ ಪ್ಲ್ಯಾನ್​: ಪ್ರತಿ ಗ್ರಾಮ ಪಂಚಾಯಿತಿಗೆ ಯುವಕರ ಸಂಘ ರಚನೆ

ಸ್ಪರ್ಧೆಯ ಥೀಮ್ ಏನು?

ಸ್ಪರ್ಧೆಯ ಮೂಲ ವಿಷಯವೆಂದರೆ ಯಕ್ಷಗಾನ, ಕಂಬಳ ಮತ್ತು ಪ್ರಸಿದ್ಧ ಉಡುಪಿ ಕೈಮಗ್ಗ ಸೀರೆಗಳು, ಜೊತೆಗೆ, ಕಲಾವಿದರು ಕುಂಬಾರಿಕೆ, ಬುಟ್ಟಿ ನೇಯ್ಗೆ ಮತ್ತು ಇತರ ವಿಷಯಗಳ ಜೊತೆಗೆ ಜಾನಪದ ಶೈಲಿಯನ್ನು ಎತ್ತಿ ತೋರಿಸುವ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ಆದರೆ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಿಡಿಸಲು ಅನುಮತಿ ಇಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದು ಮತ್ತು ಸೃಜನಶೀಲತೆಯನ್ನು ಎತ್ತಿ ಹಿಡಿಯುವುದು ಇದರ ಉದ್ದೇಶವಾಗಿದೆ ಎಂದು ಪ್ರಸನ್ನ ಹೇಳಿದರು. 1,111 ಮತಗಟ್ಟೆಗಳಿಗೆ ಹಂತ ಹಂತವಾಗಿ ಬಣ್ಣ ಬಳಿಯುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು. ನಗದು ಬಹುಮಾನದ ಜೊತೆಗೆ ಪ್ರಶಂಸಾ ಪತ್ರವೂ ಇರುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9880505271 ಅಥವಾ 9481971071 ಗೆ ಕರೆ ಮಾಡಬಹುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:42 am, Sun, 12 March 23