ಶಿವರಾಮ್​ ಹೆಬ್ಬಾರ್​ಗೂ ಗ್ಯಾರಂಟಿ ಕೊಟ್ಟಿದ್ದೇನೆ: ಸಿದ್ದರಾಮಯ್ಯ ಹೇಳಿಕೆ ಹಿಂದಿನ ಗೂಢಾರ್ಥ ಏನು?

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಐತಿಹಾಸಿ ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಮೋದಿ ಗ್ಯಾರಂಟಿಗಳ ಬಗ್ಗೆ ಟೀಕಿಸಿದರು. ಇದೇ ವೇಳೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ಅವರು, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್​ಗೂ ಗ್ಯಾರಂಟಿ ಕೊಟ್ಟಿದ್ದೇನೆ ಎಂದಿದ್ದಾರೆ. ಹಾಗಾದರೆ, ಹೆಬ್ಬಾರ್​ಗೆ ಕೊಟ್ಟ ಗ್ಯಾರಂಟಿ ಹಿಂದಿನ ಗೂಢಾರ್ಥ ಕುತೂಹಲ ಮೂಡಿಸಿದೆ.

ಶಿವರಾಮ್​ ಹೆಬ್ಬಾರ್​ಗೂ ಗ್ಯಾರಂಟಿ ಕೊಟ್ಟಿದ್ದೇನೆ: ಸಿದ್ದರಾಮಯ್ಯ ಹೇಳಿಕೆ ಹಿಂದಿನ ಗೂಢಾರ್ಥ ಏನು?
ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ ಸಿದ್ದರಾಮಯ್ಯ
Edited By: Rakesh Nayak Manchi

Updated on: Mar 05, 2024 | 10:40 PM

ಕಾರವಾರ, ಮಾ.5: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಐತಿಹಾಸಿಕ ಕದಂಬೋತ್ಸವಕ್ಕೆ (Kadambotsava) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಮೋದಿ ಗ್ಯಾರಂಟಿಗಳ ಬಗ್ಗೆ ಟೀಕಿಸಿದರು. ಇದೇ ವೇಳೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ಅವರು, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್​​ಗೂ (Shivaram Hebbar) ಗ್ಯಾರಂಟಿ ಕೊಟ್ಟಿದ್ದೇನೆ ಎಂದಿದ್ದಾರೆ. ಹಾಗಾದರೆ, ಹೆಬ್ಬಾರ್​ಗೆ ಕೊಟ್ಟ ಗ್ಯಾರಂಟಿ ಹಿಂದಿನ ಗೂಢಾರ್ಥ ಕುತೂಹಲ ಮೂಡಿಸಿದೆ.

ಬಿಜೆಪಿಯಿಂದ ಅಂತರಕಾಯ್ದುಕೊಂಡಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ, ರಾಜ್ಯಸಭೆ ಚುನಾವಣೆಗೆ ಗೈರಾಗುವ ಮೂಲಕ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರಲು ಆರಂಭವಾಗಿದೆ.

ಹಾಗಾದರೆ, ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಷರತ್ತುಗಳನ್ನು ಹಾಕಿದ್ದಾರಾ? ಈ ಷರತ್ತುಗಳನ್ನು ಈಡೇರಿಸುವ ಗ್ಯಾರಂಟಿಯನ್ನು ಸಿದ್ದರಾಮಯ್ಯ ಅವರು ನೀಡಿದ್ದಾರಾ? ಬನವಾಸಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಅವರಿಗೂ (ಶಿವರಾಮ್ ಹೆಬ್ಬಾರ್) ಗ್ಯಾರಂಟಿ ಕೊಟ್ಟಿರುವುದು ಗೊತ್ತಿದೆ ಎಂದಾಗ, ಹೆಬ್ಬಾರ್ ಅವರು “ಗೊತ್ತಿದೆ ಗೊತ್ತಿದೆ” ಎಂದು ಕೈ ಸನ್ನೆ ಮಾಡಿ ನಕ್ಕರು. ಸದ್ಯ ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಶಿವರಾಮ್ ಹೆಬ್ಬಾರ್​ ಆಹ್ವಾನಿಸಿದ ಸಿದ್ದರಾಮಯ್ಯ

ಕಾಂಗ್ರೆಸ್ ವಿಚಾರ, ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದರೆ ಶಿವರಾಮ್ ಹೆಬ್ಬಾರ್​ ಅವರಿಗೆ ಸ್ವಾಗತವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬನವಾಸಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶಿವರಾಮ್ ಹೆಬ್ಬಾರ್ ಅವರು ನನ್ನ ಜೊತೆ ಚರ್ಚಿಸಿಲ್ಲ. ಮೊದಲು ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದರು, ಆಮೇಲೆ ಬಿಜೆಪಿಗೆ ಹೋದರು. ಬಿಜೆಪಿಯಲ್ಲಿ ಬೇಸರ ಆಗಿದೆ ಅಂತಿದ್ದಾರೆ, ಮುಂದೆ ನೋಡೋಣ. ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರದ ಫ್ಲೆಕ್ಸ್ ಹಾಕಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್

ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಜಾತಿ ಧರ್ಮ ಇಲ್ಲ. ಬಿಜೆಪಿಯ ಬಡವರಿಗೂ ಗ್ಯಾರಂಟಿ ಕೊಟ್ಟಿದ್ದೇವೆ ಎಂದ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿಗಳ ಬಗ್ಗೆ ಈ ಹಿಂದೆ ಟೀಕೆ ಮಾಡಿದ್ದರು. ಅವರೇ ಈಗ ಗ್ಯಾರಂಟಿ ಪದ ಕದ್ದಿದ್ದಾರೆ. ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಜಾಹಿರಾತು ಕೊಡುತ್ತಿದ್ದಾರೆ. ಅಂದು ನಾವು ಹೇಳಿದಾಗ ವಿರೋಧಿಗಳು ರಾಜ್ಯ ದಿವಾಳಿಯಾಗುತ್ತದೆ ಅಂತ ಹೇಳುತ್ತಿದ್ದರು. ಮೋದಿ ಹೇಳಿದರೆ ದೇಶ ಉದ್ದಾರ ಆಗುತ್ತದಾ ಎಂದರು.

ಜಿ.ಎಸ್.ಟಿ ನೂರು ರೂಪಾಯಿ ಕೊಟ್ಟರೆ 13 ರೂಪಾಯಿ ವಾಪಾಸ್ ಬರುತ್ತಿದೆ. ಇದನ್ನ ಪ್ರಶ್ನಿಸಿದರೆ ದೇಶ ವಿಭಜನೆ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎನ್ನುತ್ತಾರೆ. ಇಡೀ ದೇಶದಲ್ಲಿ ಜಿ.ಎಸ್.ಟಿ ಸಂಗ್ರಹದಲ್ಲಿ ಒಂದನೇ ಸ್ಥಾನದಲ್ಲಿ ಇದ್ದೇವೆ. ಇಂತ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ. ಈ ಅನ್ಯಾಯ ಬೆಂಬಲಿಸುವವರು ಏಳು ಕೋಟಿ ಕನ್ನಡಿಗರಿಗೆ ಮಾಡುವ ದ್ರೋಹ. ಕರ್ನಾಟಕದಿಂದ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಯಾರೊಬ್ಬರು ಜಿಎಸ್​ಟಿ ಬಗ್ಗೆ ಮಾತನಾಡಿಲ್ಲ ಎಂದರು.

ಅನಂತಕುಮಾರ್ ಹೆಗಡೆ ವಿರುದ್ಧ ಸಿಎಂ ವಾಗ್ದಾಳಿ

ಸಂಸದ ಅನಂತ್ ಕುಮಾರ್ ಹೆಗಡೆ ಇಲ್ಲಿಯ ವರೆಗೆ ಬಿಲ ಸೇರಿಕೊಂಡಿದ್ದರು. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಮಾತಾಡ್ಲಿ ಅದರ ಬಗ್ಗೆ ಮಾತಾಡಲ್ಲ, ಅದು ಅವರ ಸಂಸ್ಕೃತಿ ತೋರಿಸುತ್ತದೆ. ಹಿಂದುತ್ವದ ಬಗ್ಗೆ ಮಾತನಾಡಿದರೆ ದ್ವೇಷ ಭಾವನೆ ಹುಟ್ಟು ಹಾಕಿದರೆ ರಾಜಕೀಯ ಮಾಡಬಹುದು ಅಂದುಕೊಂಡಿದ್ದಾರೆ. ಅಂತವರನ್ನ ಬೆಂಬಲಿಸಬೇಡಿ. ದ್ವೇಷ ಹುಟ್ಟು ಹಾಕುವವರಿಗೆ ಓಟು ಹಾಕಬೇಡಿ. ನಿಮ್ಮ ಆಶಿರ್ವಾದ ನಮಗೆ ಇರಲಿ ಎಂದು ಸಿದ್ದರಾಮಯ್ಯ ಹೇಳಿದರು.

ಕದಂಬೋತ್ಸವದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಯಾವುದೇ ಜಾತಿಗೆ ಸೇರಿರಲಿ. ಆದರೆ ಮನುಷ್ಯರು ಎಂದು ತಿಳಿದುಕೊಳ್ಳಬೇಕು. ಇತಿಹಾಸವನ್ನ ಎಲ್ಲರೂ ನಾವು ತಿಳಿದುಕೊಳ್ಳಬೇಕು. ಯಾರಿಗೆ ಇತಿಹಾಸ ಗೊತ್ತಿರುತ್ತದೆಯೋ ಅವರು ಮಾತ್ರ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಕದಂಬೋತ್ಸವ ನಮ್ಮ ಯುವ ಪೀಳಿಗೆಗೆ ಹಿಂದಿನ ಇತಿಹಾಸ ತಿಳಿಸಲು ಮಾಡಲಾಗುವುದು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ದ್ವೇಷದ ಬೀಜ ಬಿತ್ತುತ್ತಾರೆ. ಧರ್ಮದ ಹೆಸರಿನಲ್ಲಿ ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರದಿಂದ ಇರಿ ಎಂದರು.

ಆರ್ ವಿ ದೆಶಪಾಂಡೆ ಹೇಸರು ಹೇಳಲು ತಡಬಡಾಯಿಸಿದ ಸಿದ್ದರಾಮಯ್ಯ

ಭಾಷಣ ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ನಾಯಕರನ್ನು ಹೆಸರನ್ನು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಸ್ವಪಕ್ಷದ ಹಿರಿಯ ಶಾಸಕ ಆರ್​ವಿ ದೇಶಪಾಂಡೆ ಹೆಸರು ಹೇಳಲು ತಡಬಡಾಯಿಸಿದರು. ಕೆಲಹೊತ್ತು ಮನಸ್ಸಿನಲ್ಲೇ ಹೆಸರು ಜ್ಞಾಪಿಸಿದರೂ ಹೆಸರು ನೆನಪಿಗೆ ಬಾರದಿದ್ದಾಗ “ಅವರ ಹೆಸರೇನಪ್ಪ” ಅಂತಾ ಹಿಂದಿರುವ ಅಧಿಕಾರಿಯನ್ನ ಕರೆದು ಕೇಳಿದರು. ಆರ್ ವಿ ದೇಶಪಾಂಡೆ ಅಂತಾ ಅಧಿಕಾರಿ ಹೇಳಿದರು. ಈ ವೇಳೆ ಆರ್ ವಿ ದೇಶಪಾಂಡೆ ಹೆಸರನ್ನು ಸಿದ್ದರಾಮಯ್ಯ ಮರೆತ ಹಿನ್ನೆಲೆ ವೇದಿಕೆ ಮೇಲಿದ್ದ ನಾಯಕರು, ಅಧಿಕಾರಿಗಳು ಮುಗಳ್ನಕ್ಕರು.

ಸಿದ್ದರಾಮಯ್ಯರನ್ನು ಸನ್ಮಾನಿಸಿ ಹಾಡಿ ಹೊಗಳಿದ ಶಿವರಾಮ್ ಹೆಬ್ಬಾರ್

ವೇದಿಕೆ ಮೇಲೆ ಶಿವರಾಂ ಹೆಬ್ಬಾರ್ ಅವರು ಕೃಷ್ಣನ ಕಟ್ಟಿಗೆಯ ಮೂರ್ತಿ ಕೊಟ್ಟು ಸಿದ್ದರಾಮಯ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಇದಕ್ಕೂ ಮುನ್ನ ಜಿಲ್ಲಾಡಳಿತದ ವತಿಯಿಂದ ಸಚಿವ ಮಂಕಾಳು ವೈದ್ಯ ಅವರು ಗಣೇಶನ ವಿಗ್ರಹ ಕೊಟ್ಟು ಸನ್ಮಾನಿಸಿದರು.

ಕದಂಬೋತ್ಸವದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೋಗಳಿದ ಹೆಬ್ಬಾರ್, ಬನವಾಸಿಯಲ್ಲಿ ಪ್ರಾಧಿಕಾರ ಮಾಡಬೇಕು ಎನ್ನುವುದು ಹಲವು ವರ್ಷದ ಬೇಡಿಕೆಯಾಗಿತ್ತು. ಸಿದ್ದರಾಮಯ್ಯ ಅವರು ಪ್ರಾಧಿಕಾರ ಮಾಡಿದರು. ನಾನು ಏನಾದರು ಮಾತನಾಡಿದರೆ ಮಾಧ್ಯಮದವರು ಬೇರೆ ಬೇರೆ ವಿಶ್ಲೇಷಣೆ ಮಾಡುತ್ತಾರೆ. ಆದರೆ‌ ಸಿಎಂ ಮಾಡಿದ ಕೆಲಸ ಹೇಳದೆ ಇದ್ದರೆ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟದ ನಡುವೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಿವರಾಮ್ ಹೆಬ್ಬಾರ್

ವರದಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಅನುದಾನ ಕೊಟ್ಟರು. ಅವರು ಅಂದು ಅನುದಾನ ಕೊಟ್ಟ ಪರಿಣಾಮ ಈ ಭಾಗದ ಅನೇಕ ರೈತರಿಗೆ ಅನಕೂಲ ಆಗಿದೆ. ಪ್ರಾಧಿಕಾರ ರಚನೆಯಿಂದ ಬನವಾಸಿ ಸಾಕಷ್ಟು ಅಭಿವೃದ್ಧಿ ಆಗಿದೆ. ಬನವಾಸಿ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ ಎಂದರು.

ರಾಜ್ಯದಲ್ಲಿ ಸೇರಿದಂತೆ ನಮ್ಮ ತಾಲೂಕಿನಲ್ಲೂ ಬರಗಾಲ ಇದೆ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ. ನಾನು ಮೊದಲೇ ಕೆಲವು ವಿಚಾರವನ್ನ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಆ ವಿಚಾರವನ್ನ ಭಾಷಣದಲ್ಲಿ ಪ್ರಸ್ತಾಪ ಮಾಡುವುದಿಲ್ಲ. ನಾನು ಅವರಿಗೆ ಕೇಳಿದ ಮನವಿಯನ್ನ ಈಡೇರಿಸಬೇಕಂತ ಕೇಳಿಕೊಳ್ಳುತ್ತೇನೆ. ಬೆಂಗಳೂರು ಹೊದ ಬಳಿಕ ಮುಖ್ಯಮಂತ್ರಿ ಅವರು ಇದರ ಬಗ್ಗೆ ನಿರ್ಧಾರ ಮಾಡುವ ವಿಶ್ವಾಸ ಇದೆ ಎಂದರು.

ನಾನು ಮಾಡಿದ ಮನವಿಯಲ್ಲಿ ಸಮಗ್ರ ಬನವಾಸಿಯ ಅಭಿವೃದ್ದಿ ಅಡಗಿದೆ. ನಿಮ್ಮ ಕೈಯಿಂದ ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಸಿಎಂಗೆ ಮನವಿ ಮಾಡಿಕೊಂಡ ಹೆಬ್ಬಾರ್, ಸಿದ್ದರಾಮಯ್ಯ ಸಿಎಂ ಅಗಿ ಕ್ಷೇತ್ರದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕಾರ್ಣಿಕರ್ತರಾಗಿದ್ದೀರಿ. ಮೂರನೆ ಬಾರಿ ಕದಂಬೋತ್ಸವಕ್ಕೆ ಬಂದಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us