ವಾಲ್ಮೀಕಿ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಜಾಮೀನಿನ ಮೇಲೆ ಇರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದಿರಂದ ಮತ್ತೆ ಸಿದ್ದರಾಮ್ಯಯ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದ ನಾಗೇಂದ್ರಗೆ ರಾಜ್ಯಪಾಲರು ಬಿಗ್ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, (ಏಪ್ರಿಲ್ 09): ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ(Karnataka Valmiki scam Case) ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ (prosecution) ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಇಡಿ (Enforcement Directorate) ಮನವಿ ಮಾಡಿತ್ತು. ಅದರಂತೆ ಇಂದು (ಏಪ್ರಿಲ್ 09) ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (thawar chand gehlot) ಅವರು ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದರಿಂದ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಂದು ಸಚಿವರಾಗಿದ್ದ ನಾಗೇಂದ್ರ ಅವರ ಹೆಸರು ಕೇಳಿಬಂದಿತ್ತು. ಹೀಗಾಗಿ ನಾಗೇಂದ್ರ ಅವರು 2024ರ ಜೂನ್ 6ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ಜು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ನಂತರ ನಾಗೇಂದ್ರ ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದಿದ್ದು, ಮತ್ತೆ ಸಚಿವರಾಗಲು ಕಸರತ್ತು ನಡೆಸಿದ್ದರು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾಗೇಂದ್ರ ಅವರನ್ನು ಶೀಘ್ರವೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹೀಗಾಗಿ ನಾಗೇಂದ್ರ ಸಹ ಮತ್ತೆ ಸಚಿವರಾಗಲು ಉತ್ಸುಕರಾಗಿದ್ದರು. ಇದರ ಮಧ್ಯ ರಾಜ್ಯಪಾಲರು ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದರಿಂದ ನಾಗೇಂದ್ರಗೆ ಮತ್ತೆ ಇಡಿ ಆತಂಕ ಎದುರಾಗಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಆರಂಭವಾಗಿದ್ದು ಹೇಗೆ? ವಂಚನೆಗೆ ಹಾಕಿದ್ದ ಸ್ಕೆಚ್ನ ಸಂಪೂರ್ಣ ವಿವರ ಇಲ್ಲಿದೆ
4,970 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದ ಇಡಿ
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ತಲೆದಂಡವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ಇತ್ತೀಚೆಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. 187 ಕೋಟಿ ರೂಪಾಯಿ ಹಗರಣ ಸಂಬಂಧ 4ಸಾವಿರದ 970 ಪುಟಗಳ ಚಾರ್ಜ್ಶೀಟ್ ಜೊತೆಗೆ 144 ಪುಟಗಳ ದೂರು ಸಲ್ಲಿಸಿದ್ದರು. ಇಡಿ ಚಾರ್ಜ್ಶೀಟ್ನಲ್ಲಿ ಮಾಜಿ ಸಚಿವ ನಾಗೇಂದ್ರ A1 ಆಗಿದ್ದರು. ನಾಗೇಂದ್ರ ಮತ್ತು ಆತನ ಗ್ಯಾಂಗ್ ಅಕ್ರಮ ನಡೆಸಿರುವುದು ಇಡಿ ತನಿಖೆಯಲ್ಲಿ ದೃಢವಾಗಿತ್ತು. 187 ಕೋಟಿಯಲ್ಲಿ ರೂ. ಒಟ್ಟು 84 ಕೋಟಿ ರೂಪಾಯಿ ಅಕ್ರಮ ವಹಿವಾಟು ನಡೆಸಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅಕ್ರಮವಾಗಿ ಹಣ ಬಳಸಲು ನಾಗೇಂದ್ರ ಒಳಸಂಚು ಮಾಡಿದ್ದಾರೆ. ಜೊತೆಗೆ ಸಾಕ್ಷಿ ನಾಶ ಮಾಡಲು ಸಂಚು ರೂಪಿಸಿದ್ದಾರೆ ಅಂತಾ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿತ್ತು.
ಇನ್ನೂ ಬಳ್ಳಾರಿ ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಮಾಡಿರುವುದು ತನಿಖೆಯಿಂದ ಗೊತ್ತಾಗಿತ್ತು. ಪ್ರಕರಣದ ಎಂಟನೇ ಆರೋಪಿ ನಾಗೇಂದ್ರ ಪಿಎಂ ವಿಜಯ್ ಕುಮಾರ್ ಮೊಬೈಲ್ನಲ್ಲಿ ಚುನಾವಣೆಗೆ ಹಣ ಬಳಕೆ ಮಾಡಿದ ಸಂಬಂಧ ದಾಖಲೆ ಸಿಕ್ಕಿತ್ತು. 20 ಕೋಟಿ 19 ಲಕ್ಷ ರೂಪಾಯಿಯ ಹಣದ ಬಂಡಲ್ ಇರುವ ಫೋಟೋಗಳು ಮತ್ತು ಪ್ರತಿ ಬೂತ್ಗೂ ಹಣ ಹಂಚಿರುವ ಬಗ್ಗೆ ದಾಖಲೆ ಲಭ್ಯವಾಗಿದ್ದವು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Wed, 9 April 25