ವಿಜಯಪುರ: ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಲ್ಲೇ ನಕಲಿ ಫೇಸ್ಬುಕ್ ಖಾತೆ! ಲಕ್ಷ ಲಕ್ಷ ಪೀಕಿದ್ದ ಕಿಲಾಡಿ ಅಂದರ್
ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಪಿಡಬ್ಲ್ಯೂಡಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ 5 ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿದ್ದ ಬೆಳಗಾವಿ ಮೂಲದ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗೋಗಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ.

ವಿಜಯಪುರ, ಜೂನ್ 8: ವಿಜಯಪುರ (Vijayapura) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಅವರ ಹೆಸರಿನಲ್ಲೇ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಸಾರ್ವಜನಿಕರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಅಂತರಜಿಲ್ಲಾ ಸೈಬರ್ ವಂಚಕನನ್ನು ವಿಜಯಪುರ ಸಿಇಎನ್ (CEN) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ.
ಮುಖ್ಯಾಂಶಗಳು
- ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಐಡಿ ಸೃಷ್ಟಿಸಿ ವಂಚನೆ.
- ಪಿಡಬ್ಲ್ಯೂಡಿ ನೌಕರಿಯ ಆಮಿಷವೊಡ್ಡಿ ಹಣ ಪೀಕಿದ್ದ ಕಿಲಾಡಿ.
- ಆರೋಪಿಯನ್ನು ಬಂಧಿಸಿದ ಸಿಇಎನ್ ಸೈಬರ್ ಪೊಲೀಸರು.
ಎಸ್ಡಿಎ ಹುದ್ದೆಯ ಆಮಿಷ: 5 ಲಕ್ಷ ರೂ.ಗೂ ಅಧಿಕ ಹಣ ಪಡೆದು ವಂಚನೆ
ಬಂಧಿತ ಹಣಮಂತ ಭಜಂತ್ರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ನಿವಾಸಿ ಸುರೇಶ್ ಅಥಣಿ ಎಂಬುವವರಿಗೆ ಲೋಕೋಪಯೋಗಿ ಇಲಾಖೆಯಲ್ಲಿ (PWD) ಎಸ್ಡಿಸಿ (SDA) ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಸುರೇಶ್ ಅವರಿಂದ ಹಂತ ಹಂತವಾಗಿ ಒಟ್ಟು 5,04,600 ರೂಪಾಯಿ ಹಣವನ್ನು ಪಡೆದು ವಂಚಿಸಿದ್ದ. ವರ್ಷಗಳೇ ಕಳೆದರೂ ಕೆಲಸವೂ ಸಿಗದೆ, ಹಣವೂ ವಾಪಸ್ ಬರದೇ ಇದ್ದಾಗ ತಾನು ವಂಚನೆಗೆ ಒಳಗಾಗಿರುವುದು ಸುರೇಶ್ಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಮೇಲ್ ಬಳಸಿ ನಕಲಿ ಖಾತೆ ಸೃಷ್ಟಿ
ಪ್ರಕರಣ ದಾಖಲಿಸಿಕೊಂಡು ಸೈಬರ್ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಹಣಮಂತ, ವಿಜಯಪುರ ಎಸ್ಪಿಯವರ ಹೆಸರನ್ನೇ ಬಳಸಿಕೊಂಡು nimbaragilakshman29@gmail.com ಎಂಬ ನಕಲಿ ಇಮೇಲ್ ಐಡಿ ಸೃಷ್ಟಿಸಿದ್ದ. ಅದರ ಮೂಲಕ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ. ಜಿಲ್ಲೆಯ ಅತ್ಯುನ್ನತ ಪೊಲೀಸ್ ಅಧಿಕಾರಿಯ ಅಧಿಕೃತ ಖಾತೆ ಇರಬಹುದೆಂದು ನಂಬಿ ಸಾರ್ವಜನಿಕರು ಆತನ ಜಾಲಕ್ಕೆ ಬಲಿಯಾಗುತ್ತಿದ್ದರು.
ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಆರೋಪಿ
ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಇದೇ ಮಾದರಿಯಲ್ಲಿ ರಾಜ್ಯದ ಇತರ ಪ್ರಭಾವಿ ಅಧಿಕಾರಿಗಳು ಅಥವಾ ರಾಜಕಾರಣಿಗಳ ಹೆಸರನ್ನು ಬಳಸಿ ಬೇರೆಯವರಿಗೂ ವಂಚಿಸಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಭರ್ಜರಿ ಬೇಟೆ: ಬ್ಯಾಂಕಾಕ್ನಿಂದ ತಂದಿದ್ದ 2.33 ಕೋಟಿ ಮೌಲ್ಯದ ಗಾಂಜಾ ಜಪ್ತಿ!
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನಕಲಿ ಖಾತೆಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




