ಯಾದಗಿರಿ: ಮತ್ತೆ ವಕ್ಕರಿಸಿದ ಚರ್ಮಗಂಟು ರೋಗ, ಒಂದೇ ವಾರದಲ್ಲಿ 5 ಜಾನುವಾರುಗಳ ಸಾವು

| Updated By: ವಿವೇಕ ಬಿರಾದಾರ

Updated on: Oct 14, 2024 | 8:18 AM

ಯಾದಗಿರಿ ಜಿಲ್ಲೆಯ ರೈತರು ನಿರಂತರ ಮಳೆಯಿಂದಾಗಿ ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡಿದ್ದಾರೆ. ತೊಂದರೆಯಲ್ಲಿ ಸಿಲುಕಿರುವ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ. ಜಾನುವಾರುಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರೈತರಿಗೆ ಸಂಕಷ್ಟ ಶುರುವಾಗಿದೆ.

ಯಾದಗಿರಿ: ಮತ್ತೆ ವಕ್ಕರಿಸಿದ ಚರ್ಮಗಂಟು ರೋಗ, ಒಂದೇ ವಾರದಲ್ಲಿ 5 ಜಾನುವಾರುಗಳ ಸಾವು
ಚರ್ಮಗಂಟು ರೋಗ
Follow us on

ಯಾದಗಿರಿ, ಅಕ್ಟೋಬರ್​ 14: ಲಂಪಿ ಸ್ಕಿನ್ (ಚರ್ಮಗಂಟು) ರೋಗ (Lumpy skin disease) ಜಾನುವಾರುಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಚರ್ಮಗಂಟು ರೋಗದಿಂದ ಯಾದಗಿರಿ (Yadgir) ಜಿಲ್ಲೆಯಲ್ಲಿ ಜಾನುವಾರುಗಳ ಮಾರಣಹೋಮವೇ ನಡೆಯುತ್ತಿದೆ.

ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡದ ಜಾನುವಾರುಗಳಿಗೆ ಚರ್ಮಗಂಟು ರೋಗ ವಕ್ಕರಿಸಿಕೊಂಡಿದ್ದು ಅನ್ನದಾತರು ಕಂಗಲಾಗಿದ್ದಾರೆ. ಕಂಚಗಾರಹಳ್ಳಿ ತಾಂಡದ ರೈತ ಸೋಮು ರಾಠೋಡ ಎಂಬುವರ ನಾಲ್ಕು ಕರುಗಳು ಚರ್ಮಗಂಟು ರೋಗದಿಂದ ಬಲಿಯಾಗಿವೆ. ಒಂದೇ ವಾರದಲ್ಲಿ ನಾಲ್ಕು ಕರುಗಳನ್ನು ಕಳೆದುಕೊಂಡು ರೈತ ಕಂಗಲಾಗಿದ್ದಾನೆ. ಸೋಮು ರಾಠೋಡ 70ಕ್ಕೂ ಅಧಿಕ ಹಸುಗಳನ್ನ ಸಾಕಿದ್ದಾರೆ. ಹಸುಗಳನ್ನು ನಂಬಿಕೊಂಡು ಜೀವನ ಸಾಗಿತ್ತಿದ್ದಾರೆ. ಆದರೆ, ಚರ್ಮಗಂಟು ರೋಗದಿಂದ ನಾಲ್ಕು ಕರುಗಳು ಮೃತಪಟ್ಟಿವೆ.

ಲಂಪಿ ಸ್ಕಿನ್ ರೋಗ ಮೊದಲು ಒಂದು ಕರುವಿಗೆ ಬಂದಿದೆ. ದೇಹದ ತುಂಬೆಲ್ಲ ಚರ್ಮ ಗಂಟು ಗಂಟಾಗಿದೆ. ರೈತ ಸೋಮು ಪಶು ವೈದ್ಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಿದರೂ, ಗುಣಮುಖವಾಗಿಲ್ಲ. ಬದಲಿಗೆ ರೋಗಕ್ಕೆ ತುತ್ತಾಗಿರುವ ಕರುವಿನಿಂದ ಇನ್ನೂ ಮೂರು ಕರುಗಳಿಗೆ ರೋಗ ಹರಡಿದೆ. ಹೀಗಾಗಿ ಒಂದೇ ವಾರದಲ್ಲಿ ರೋಗಕ್ಕೆ ತುತ್ತಾಗಿದ್ದ ನಾಲ್ಕು ಕರುಗಳು ಪ್ರಾಣ ಕಳೆದುಕೊಂಡಿವೆ. ರೋಗ ಹರಡುತ್ತಿದೆ.

ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಮಳೆ; ಹಾಳಾಯ್ತು ಬಂಗಾರದಂತ ತೊಗರಿ ಬೆಳೆ

ಮತ್ತೆ ನಾಲ್ಕೈದು ಕರುಗಳಿಗೆ ರೋಗ ಹರಡಿದೆ. ಹೀಗಾಗಿ ನಾಲ್ಕೈದು ಕರುಗಳು ಚರ್ಮಗಂಟು ರೋಗದಿಂದ ಬಳಲುತ್ತಿವೆ. ಪಶು ವೈದ್ಯರು ಬಂದು ಪರಿಶೀಲನೆ ನಡೆಸಿ ಚಿಕಿತ್ಸೆ ಕೊಟ್ಟಿದ್ದಾರೆ. ಆದರೆ, ವೈದ್ಯರು ಚಿಕಿತ್ಸೆಗೆ ರೋಗ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದರಿಂದ ಇನ್ನೊಂದು ಕರುವಿಗೆ ರೋಗ ಹರಡುತ್ತಿದ್ದು, ಮತ್ತಷ್ಟು ಕರುಗಳು ಪ್ರಾಣ ಕಳೆದುಕೊಳ್ಳುವ ಆತಂಕ ರೈತನಿಗೆ ಕಾಡುತ್ತಿದೆ.

ರೋಗ ಹೇಗೆ ಹರಡುತ್ತದೆ.

ಈ ಚರ್ಮಗಂಟು ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಅತಿ ವೇಗವಾಗಿ ಹರಡುತ್ತದೆ. ರೋಗ ಬಂದ ಹಸುವಿನ ಜೊತೆಗೆನೇ ಎಲ್ಲ ಹಸುಗಳನ್ನು ಮೇಯಿಸುವುದು, ಒಂದೇ ಕೊಟ್ಟಿಗೆಯಲ್ಲಿ ಕಟ್ಟುವುದರಿಂದ ರೋಗ ಒಂದರಿಂದ ಒಂದಕ್ಕೆ ಅತಿ ವೇಗವಾಗಿ ಹರಡುತ್ತಿದೆ. ರೋಗ ಅಂಟಿಕೊಂಡರೇ ಜಾನುವಾರಿನ ದೇಹದ ತುಂಬೆಲ್ಲ ಗಂಟು ಗಂಟುಗಳು ಆಗುತ್ತವೆ.

ಹಸು, ಕರುಗಳನ್ನ ಕಳೆದುಕೊಂಡ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಜೊತೆಗೆ ಪಶು ವೈದ್ಯರು ಕೂಡಲೇ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು ಎಂದು ತಾಂಡದ ರೈತರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ