ವಿದ್ಯಾಕಾಶಿಯಲ್ಲಿ ರಾಶಿ ರಾಶಿ ತ್ಯಾಜ್ಯ.. ಕಸಕ್ಕೆ ಇಟ್ಟ ಬೆಂಕಿ ಕಾಳ್ಗಿಚ್ಚು ಆಗಿ ಧಗಧಗಿಸುತ್ತಿದೆ ಪ್ರಜ್ಞಾವಂತರ ನಾಡು!
ಕೆಲವು ಪ್ರದೇಶಗಳಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವ ಕೆಲಸವೂ ಶುರುವಾಯಿತು. ಈ ಹೊಸ ಬಗೆಯ ಹುಚ್ಚುತನವೇ ಇದೀಗ ಸಸ್ಯಕಾಶಿಯ ಜೀವಕ್ಕೆ ಅಪಾಯ ತಂದೊಡ್ಡಿದೆ.

ಧಾರವಾಡ: ಒಂದು ಕಾಲಕ್ಕೆ ಧಾರವಾಡ ಅಂದರೆ ಕವಿಗಳ ನಾಡು, ಸಂಗೀತಕಾರರ ಬೀಡು, ಪ್ರಜ್ಞಾವಂತರ ನಾಡು ಎಂಬ ಹೆಗ್ಗಳಿಕೆಯ ಜೊತೆಗೆ ಸುಂದರ ಹಾಗೂ ಸ್ವಚ್ಛ ನಗರಿ ಅನ್ನೋ ಕೀರ್ತಿಗೂ ಪಾತ್ರವಾಗಿತ್ತು. ವರ್ಷಗಳು ಉರುಳಿದಂತೆ ಈ ಹೆಸರಿಗೆ ಬೆಂಕಿ ಹಾಕುವ ಕುಕೃತ್ಯಗಳು ಆರಂಭವಾದವು.
ಒಂದು ಕಡೆ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸತೊಡಗಿದರೆ, ಮತ್ತೆ ಕೆಲವು ಕಡೆಗಳಲ್ಲಿ ತೆಗ್ಗು ಪ್ರದೇಶಗಳು ಚರಂಡಿ ನೀರು ಶೇಖರಣೆ ಆಗುವ ಪ್ರದೇಶಗಳಾಗಿ ಮಾರ್ಪಾಡಾದವು. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವ ಕೆಲಸವೂ ಶುರುವಾಯಿತು. ಈ ಹೊಸ ಬಗೆಯ ಹುಚ್ಚುತನವೇ ಇದೀಗ ಸಸ್ಯಕಾಶಿಯ ಜೀವಕ್ಕೆ ಅಪಾಯ ತಂದೊಡ್ಡಿದೆ.
ವಿನಾಯಕ ನಗರ ಆಯ್ತು ಕಸದ ಆಗರ ವಿನಾಯಕ ನಗರ ಬಡಾವಣೆಯಿಂದ ಕೆಲಗೇರಿ ಬಡಾವಣೆಗೆ ಹಾದು ಹೋಗುವ ಮುಖ್ಯ ರಸ್ತೆಯ ಅರ್ಧ ಕಿ.ಮೀ ಉದ್ದಕ್ಕೂ ಎರಡೂ ಬದಿಗೆ ತಿಪ್ಪೆ ಗುಂಡಿಗಳೇ ಕಾಣಸಿಗುತ್ತವೆ. ಇದು ಜನರೇ ಸೃಷ್ಟಿಸಿದ್ದು ಎಂದು ಹೇಳಿದರೂ ಅದು ತಪ್ಪಾಗಲಾರದು. ಕಟ್ಟಡ ತ್ಯಾಜ್ಯ, ಒಡೆದ ಸೌರ ವಿದ್ಯುತ್ ಫಲಕಗಳು ಮತ್ತು ಗಾಜಿನ ಕೊಳವೆಗಳು ಸೇರಿದಂತೆ ಪ್ಯಾಕಿಂಗ್ನಲ್ಲಿ ಬರುವ ಹೈ-ಡೆನ್ಸಿಟಿ ಥರ್ಮಾಕೋಲ್ ಮತ್ತು ರಟ್ಟಿನ ಬಾಕ್ಸ್ಗಳು, ಒಡೆದ ಸ್ಯಾನಿಟರಿವೇರ್, ಜಾಹಿರಾತಿನ ಫಲಕ – ಹೀಗೆ ಬಗೆಬಗೆಯ ತ್ಯಾಜ್ಯ ರಸ್ತೆ ಬದಿಗೆ ಬಂದು ಬೀಳುತ್ತಿವೆ.
ಟ್ರ್ಯಾಕ್ಟರ್ನಲ್ಲಿ ಲೋಡ್ ಮಾಡಿಕೊಂಡು ಬರೋ ಜನರು ಅವುಗಳನ್ನು ಕ್ಷಣಾರ್ಧದಲ್ಲಿ ಇಲ್ಲಿ ಬಿಸಾಡಿ ಪರಾರಿಯಾಗಿ ಬಿಡುತ್ತಾರೆ. ಒಂದು ಬಾರಿ ಹೀಗೆ ರಸ್ತೆ ಬದಿಗೆ ಕಸದ ರಾಶಿ ಬಂದು ಬಿತ್ತೋ, ಅಲ್ಲಿಗೆ ಅದು ತಿಪ್ಪೆಯಾಗಿ ಬದಲಾಗಲು ಬಹಳ ಸಮಯ ಹಿಡಿಯೋದೇ ಇಲ್ಲ. ಜನರು ಅದನ್ನು ತಿಪ್ಪೆಯೆಂದೇ ಭಾವಿಸಿ ಮತ್ತುಷ್ಟು ಕಸ ಸೇರಿಸಲು ಶುರುಮಾಡುತ್ತಾರೆ.
ಯಾವಾಗ ತಿಪ್ಪೆಯ ಗಾತ್ರ ದೊಡ್ಡದಾಗುತ್ತಾ ಸಾಗುತ್ತೋ ಆಗಲೇ ನೋಡಿ ಸಮಸ್ಯೆ ಶುರುವಾಗುವುದು. ಜನರು ಕಸ ಎಸೆದು ಹೋಗೋವಾಗ ತ್ಯಾಜ್ಯಕ್ಕೆ ಬೆಂಕಿ ಇಟ್ಟು ಹೋಗಿಬಿಡುತ್ತಾರೆ. ಅದರ ಪರಿಣಾಮ ನೇರವಾಗಿ ಆಗುವುದು ಅಕ್ಕಪಕ್ಕದ ಗಿಡಗಳ ಮೇಲೆ. ಕೆಲವು ಕಡೆ ಗಿಡಗಳ ಬುಡದಲ್ಲಿಯೇ ಕಸ ಬಿಸಾಡಿ ಅಲ್ಲೇ ಬೆಂಕಿ ಹಚ್ಚುವುದರಿಂದ ಅವುಗಳು ಸಂಪೂರ್ಣವಾಗಿ ಸುಟ್ಟು ಹೋಗುತ್ತಿವೆ. ನಿತ್ಯವೂ ಇಂಥ ಕೃತ್ಯದಿಂದ ಹತ್ತಾರು ಗಿಡ-ಮರಗಳು ಬಲಿಯಾಗುತ್ತಿವೆ. ಗಿಡ-ಮರಗಳು ನಾಶವಾಗುವುದರಿಂದ ಅವುಗಳನ್ನು ಆಶ್ರಯಿಸಿ ಬದುಕುವ ಪ್ರಾಣಿ, ಪಕ್ಷ ಸಂಕುಲವೂ ಸಂಕಷ್ಟಕ್ಕೆ ಸಿಲುಕುತ್ತಿದೆ.
ನಾವು ವಾಸಿಸುವ ಪರಿಸರ ಸ್ವಚ್ಛವಾಗಿರಬೇಕೆಂದರೆ ಅದಕ್ಕೆ ಹೆಚ್ಚು ಶ್ರಮಪಡಬೇಕೆಂದಿಲ್ಲ. ನಾವು ಮಾಡಬಾರದ ಕೆಲಸಗಳನ್ನು ಬಿಟ್ಟರೆ ಸಾಕು. ಮಹಾನಗರ ಪಾಲಿಕೆ ನಿತ್ಯವೂ ಮನೆಗಳ ಮುಂದೆ ತನ್ನ ವಾಹನಗಳನ್ನು ಕಳಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಅದನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಇನ್ನು, ಕಟ್ಟಡ ತ್ಯಾಜ್ಯವನ್ನು ಗುಂಡಿಗಳು ಇರುವ ಪ್ರದೇಶದಲ್ಲಿ ಹಾಕಿದರೆ ಸಮಸ್ಯೆಯನ್ನು ಮತ್ತಷ್ಟು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ, ಸಾರ್ವಜನಿಕರು ಪ್ರಯತ್ನಪಟ್ಟಾಗ ಮಾತ್ರ ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡು, ಪರಿಸರವನ್ನು ಕಾಪಾಡಬಹುದು. -ನರಸಿಂಹ ಮೂರ್ತಿ ಪ್ಯಾಟಿ
ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ