ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಪರಿಪೂರ್ಣ ಒಂದು ವರ್ಷ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2024ರಲ್ಲಿ ಅಂದರೆ ಕಳೆದ ವರ್ಷ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಮಾರ್ಚ್‌ನಲ್ಲಿ ಪ್ರಾರಂಭವಾದ ವಿವಾಹಪೂರ್ವ ಸಂಭ್ರಮಾಚರಣೆಯ ಬಳಿಕ ಅವರಿಬ್ಬರೂ ಜುಲೈ 12ರಂದು ರಾತ್ರಿ ಅಧಿಕೃತವಾಗಿ ವಿವಾಹವಾಗಿದ್ದರು. ಇವರ ಮದುವೆಯನ್ನು ಈ ಶತಮಾನದ ಅತ್ಯಂತ ಅದ್ದೂರಿ ಮದುವೆ ಎಂದೂ ಕೂಡ ಕರೆಯಲಾಗಿತ್ತು. ಇದೀಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಪರಿಪೂರ್ಣ ಒಂದು ವರ್ಷವಾಗಿದೆ.

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಪರಿಪೂರ್ಣ ಒಂದು ವರ್ಷ
ಅಂಬಾನಿ ಕುಟುಂಬ
Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2025 | 2:23 PM

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ (Anant Ambani- Radhika Merchant) ಅವರ ವಿವಾಹ ದೇಶ ಮಾತ್ರವಲ್ಲ, ಜಗತ್ತೆ ಹುಬ್ಬೇರಿಸಿ ನೋಡಿದಂತಹ ಸಮಾರಂಭವಾಗಿತ್ತು. 2024 ರಲ್ಲಿ ಅವರ ವಿವಾಹ ಕೇವಲ ಒಂದು ಸಾಮಾಜಿಕ ಕಾರ್ಯಕ್ರಮವಲ್ಲದೆ ಒಂದು ರೀತಿಯ ಸಾಂಸ್ಕೃತಿಕ ವಿದ್ಯಮಾನದಂತೆ ನಡೆದಿತ್ತು. ಲಕ್ಷಾಂತರ ಜನ ಮನಮೋಹಕ ಮತ್ತು ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗಿದ್ದರು. ಇದು ಒಂದು ವಿವಾಹ ಮಾತ್ರವಲ್ಲ, ಸಂಪ್ರದಾಯ, ಹಿಂದೂ ಆಚರಣೆಗಳಿಗೆ ನೀಡಿದ ಒಂದು ಗೌರವಾಗಿತ್ತು. ಈಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಪರಿಪೂರ್ಣ ಒಂದು ವರ್ಷವಾಗಿದೆ.

ಹಿಂದೂ ವಿವಾಹದ ಮಹತ್ವ

ನಮ್ಮ ಹಿಂದೂ ಸಂಪ್ರದಾಯದಲ್ಲಿ, ವಿವಾಹ ಎಂಬುದು ಕೇವಲ ಒಂದು ಒಪ್ಪಂದವಲ್ಲ ಅದೊಂದು ಪವಿತ್ರ ಬಂಧನ, ಅದೊಂದು ಬದ್ಧತೆ ಹಾಗಾಗಿ ನಾವು ಅದನ್ನು ಪೂಜಿಸಿ, ಗೌರವಿಸಲಾಗುತ್ತದೆ. ಇವರ ಮದುವೆ ಕೂಡ ಇಬ್ಬರು ವ್ಯಕ್ತಿಗಳು, ಅವರ ಕುಟುಂಬಗಳು ಮತ್ತು ಸಮುದಾಯಗಳ ನಡುವಿನ ದೈವಿಕ ಒಕ್ಕೂಟವನ್ನು ಪ್ರತಿನಿಧಿಸುತ್ತದೆ. ಹಿಂದೂ ವಿವಾಹ ವೈಯಕ್ತಿಕ ಉದ್ದೇಶವನ್ನು ಮೀರಿದಂತಹ, ಧಾರ್ಮಿಕ ಕರ್ತವ್ಯಗಳನ್ನು (ಧರ್ಮ) ಪೂರೈಸುವುದನ್ನು ಒಳಗೊಂಡಿರುತ್ತದೆ. ಆದರೆ ಇಂದಿನ ಆಧುನಿಕ ಪ್ರಯೋಗಗಳಿಂದ ವಿವಾಹಗಳಲ್ಲಿ ಪ್ರಾಚೀನ ಆಚರಣೆಗಳನ್ನು ಪಾಲನೆ ಮಾಡುವುದನ್ನೇ ಮರೆಯುತ್ತಾರೆ. ಆದರೆ ಯುವ ಅಂಬಾನಿ ದಂಪತಿ ಪ್ರತಿಯೊಂದು ಭಾರತೀಯ ಸಂಪ್ರದಾಯ ಮತ್ತು ಪದ್ಧತಿಯನ್ನು ಅನುಸರಿಸಿದರು. ಈ ಪದ್ಧತಿಗಳ ಬಗ್ಗೆ ಅವರಿಗಿದ್ದ ಗೌರವ ಇದಕ್ಕೆಲ್ಲಾ ಸಾಕ್ಷಿಯಾಯಿತು.

ಭಾರತದ ಜಾಗತಿಕ ಇಮೇಜ್ ವೃದ್ಧಿ

ಭಾರತವು ವಿಶ್ವ ವೇದಿಕೆಯಲ್ಲಿ ಹಣಕಾಸು, ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಸಮಾರಂಭ ನಡೆದಿದ್ದು ನಮ್ಮ ಭಾರತದ ಇಮೇಜ್ ಅನ್ನು ಮತ್ತಷ್ಟು ಹೆಚ್ಚಿಸಿತು. ಗೌರವಾನ್ವಿತ ವ್ಯಕ್ತಿಗಳ ಉಪಸ್ಥಿತಿಯು ಭಾರತದ ಆರ್ಥಿಕ, ರಾಜಕೀಯ, ಬೌದ್ಧಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದೆ, ಮಾತ್ರವಲ್ಲ ಈ ಮದುವೆಯನ್ನು ನೇರವಾಗಿ ಕಣ್ಣತುಂಬಿಕೊಳ್ಳಲು ಹಲವಾರು ಅಂತಾರಾಷ್ಟ್ರೀಯ ದಿಗ್ಗಜರು ಕೂಡ ಹಾಜರಿದ್ದರು. ದ್ವಾರಕೆಯ ಸ್ವಾಮಿ ಸದಾನಂದ ಸರಸ್ವತಿ, ಶಂಕರಾಚಾರ್ಯ, ಜೋಶಿಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಶಂಕರಾಚಾರ್ಯ, ಇಸ್ಕಾನ್ ನ ಗೌರಂಗ್ ದಾಸ್ ಪ್ರಭು, ಸನ್ಯಾಸಿ ಗೌರ್ ಗೋಪಾಲ್ ದಾಸ್ ಹೀಗೆ ಸಾವಿರಾರು ಸ್ವಾಮೀಜಿಗಳು, ಭಾರತದ ಹಲವಾರು ರಾಜಕಾರಣಿಗಳು ಮತ್ತು ಮಂತ್ರಿಗಳ ಜೊತೆಗೆ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಾನವೀಯತೆ ಮತ್ತು ಸಂಪ್ರದಾಯ

ಅಂಬಾನಿ ಕುಟುಂಬ ತಮ್ಮ ಮನೆಯ ಸಮಾರಂಭವಾದರೂ ಕೂಡ ಮಾನವೀಯತೆ ಮೆರೆದು ಜನರ ಸೇವೆ ಮಾಡಿರುವುದು ಶ್ಲಾಘನೀಯ. ಮಾನವನ ಸೇವೆಯೇ ಮಾಧವನ ಸೇವೆ ಎಂಬುದನ್ನು ಅಕ್ಷರಶಃ ಪಾಲಿಸಿದ್ದಾರೆ. ಮದುವೆಯ ಸಮಯದಲ್ಲಿ ನವಿ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ 50 ಬಡ ದಂಪತಿಗಳಿಗೆ ಸಾಮೂಹಿಕ ವಿವಾಹ ದೊಂದಿಗೆ ವಿವಾಹ ಆಚರಣೆಯನ್ನು ಪ್ರಾರಂಭಿಸಿದ್ದರು. ಮಾತ್ರವಲ್ಲ ಎಲ್ಲಾ ಅಂಬಾನಿ ಕುಟುಂಬ ಸದಸ್ಯರು ನವವಿವಾಹಿತರಿಗೆ ಉಡುಗೊರೆಗಳನ್ನು ನೀಡಿದ್ದರು. ಇದಲ್ಲದೆ, ಪ್ರತಿದಿನ 1,000 ಕ್ಕೂ ಹೆಚ್ಚು ಜನರಿಗೆ ಭೋಜನವನ್ನು ನೀಡುವ ಭಂಡಾರವನ್ನು ಆಯೋಜಿಸಿದ್ದರು.

ವಿವಿಧ ರೀತಿಯ ವಿವಾಹ ಆಚರಣೆಗಳು ಹಲವಾರು ದಿನಗಳ ವರೆಗೆ ನಡೆದವು, ಸಣ್ಣ ಆಚರಣೆಗಳಾದರೂ ಕೂಡ ಅದಕ್ಕಿರುವ ಆಳವಾದ ಮಹತ್ವ ಅರಿತು ಆ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಜೊತೆಗೆ ಬಂದ ಅತಿಧಿಗಳನ್ನು ಮನರಂಜಿಸಲು ಸಂಗೀತ ಸಮಾರಂಭ ನಡೆಸಿದರು. ಮದುವೆಗೆ ಯಾವುದೇ ಅಡೆತಡೆ ಬರದಂತೆ ತಡೆಯಲು ಗ್ರಹ ಶಾಂತಿ ನಡೆಸಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಅಂಬಾನಿ ಮನೆಯ ಎಲ್ಲಾ ಸಿಬ್ಬಂದಿಗೆ ಒಂದು ಸಮಾರಂಭವನ್ನು ಆಯೋಜಿಸಿ ಉಡುಗೊರೆಗಳನ್ನು ನೀಡಿದ್ದರು.

ಇದನ್ನೂ ಓದಿ: Radhika Merchant: ಭಾವಿ ಸೊಸೆಗೆ ಅಂಬಾನಿ ಕುಟುಂಬ ನೀಡಿರುವ ವಿಶೇಷ ಗಿಫ್ಟ್​​​ ಏನು ಗೊತ್ತಾ?

ಬನಾರಸ್‌ ನ ಮಹತ್ವ ತಿಳಿಸಲು ಒಂದು ದಿನ ಬಟ್ಟೆ, ಊಟ ಎಲ್ಲವೂ ಅಲ್ಲಿನ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು. ಮಾತ್ರವಲ್ಲ ಮದುವೆ ಸಮಾರಂಭದಲ್ಲಿ ಭಾರತೀಯ ಡ್ರೆಸ್ ಕೋಡ್ ಮರೆಯಲಿಲ್ಲ. ಹಾಗಾಗಿ ಎಲ್ಲಾ ಗಣ್ಯರು ಮತ್ತು ಅತಿಥಿಗಳು ಇದನ್ನು ಅನುಸರಿಸಿದರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅದ್ಭುತ ಪ್ರದರ್ಶನ ನೀಡಿದರು. ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿಯವರ ವಿವಾಹವು ಕೇವಲ ಒಂದು ಹೆಣ್ಣು, ಗಂಡು ಒಂದಾಗುವ ಆಚರಣೆಯಾಗಿರಲಿಲ್ಲ, ಬದಲಾಗಿ ಸಂಪ್ರದಾಯ, ಜಾಗತಿಕ ಸಂಪರ್ಕ ಮತ್ತು ಆಳವಾದ ಆಧ್ಯಾತ್ಮಿಕತೆಯ ಎಳೆಗಳಿಂದ ಹೆಣೆಯಲ್ಪಟ್ಟ ಒಂದು ಭವ್ಯವಾದ ಕಾರ್ಯಕ್ರಮವಾಗಿತ್ತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Sat, 12 July 25