Deepavali: ಸಂಭ್ರಮದ ಜೊತೆ ಮುನ್ನೆಚ್ಚರಿಕೆಯೂ ಇರಲಿ; ಸುರಕ್ಷಿತ ದೀಪಾವಳಿ ನಿಮ್ಮದಾಗಲಿ!

ದೀಪಾವಳಿ ಬೆಳಕಿನ ಹಬ್ಬ. ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ದೀಪಾವಳಿ ಹಬ್ಬವನ್ನು ಆಚರಿಸುವಾಗ ಮುನ್ನೆಚ್ಚರಿಕೆ ವಹಿಸುವುದು ಕೂಡ ಅಷ್ಟೇ ಮುಖ್ಯ. ದೀಪಾವಳಿ ಹಬ್ಬ ಆಚರಿಸುವಾಗ ಪಟಾಕಿ ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣಿಗೆ ಮಾತ್ರವಲ್ಲದೆ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

Deepavali: ಸಂಭ್ರಮದ ಜೊತೆ ಮುನ್ನೆಚ್ಚರಿಕೆಯೂ ಇರಲಿ; ಸುರಕ್ಷಿತ ದೀಪಾವಳಿ ನಿಮ್ಮದಾಗಲಿ!
Firecrackers

Updated on: Oct 18, 2025 | 9:56 PM

ಬೆಂಗಳೂರು, ಅಕ್ಟೋಬರ್ 18: ದೇಶಾದ್ಯಂತ ದೀಪಾವಳಿ (Deepavali) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರ ಬದುಕಲ್ಲೂ ಬೆಳಕನ್ನು ತರುವ ದೀಪಗಳ ಹಬ್ಬವಾದ ದೀಪಾವಳಿ ವೇಳೆ ಸಣ್ಣ ನಿರ್ಲಕ್ಷ್ಯ ಹಾಗೂ ಬೇರೆಯವರ ತಪ್ಪಿನಿಂದ ಬಹಳಷ್ಟು ಜನರ ಬದುಕಲ್ಲಿ ಕರಾಳ ಹಬ್ಬವಾದ ಉದಾಹರಣೆಗಳೂ ಇವೆ. ಪಟಾಕಿ ಇಲ್ಲದೇ ದೀಪಾವಳಿ ಸಂಪನ್ನ ಆಗುವುದಿಲ್ಲ. ಹಾಗಂತ ಅಪಾಯವನ್ನು ಆಹ್ವಾನಿಸಲು ಆಗುವುದಿಲ್ಲ. ಹೀಗಾಗಿ ಸುರಕ್ಷಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸುವುದು ಬಹಳ ಮುಖ್ಯ.

ದೀಪಾವಳಿ ಹಬ್ಬ ಆಚರಿಸುವಾಗ ಪಟಾಕಿ ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣಿಗೆ ಮಾತ್ರವಲ್ಲದೆ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸುರಕ್ಷಿತ ದೀಪಾವಳಿ ಆಚರಣೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತುನಿಗಾ ಘಟಕದ ಮುಖ್ಯಸ್ಥರಾದ ಡಾ. ಶ್ರುತಿ ಭಾಸ್ಕರನ್ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸಿದರೆ ನಿಮ್ಮ ದೀಪಾವಳಿ ಸುರಕ್ಷಿತವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ದೀಪಾವಳಿ ದೀಪೋತ್ಸವ; ದೆಹಲಿಯ ಕರ್ತವ್ಯ ಪಥದಲ್ಲಿ ಬೆಳಗಿದ ಒಂದೂವರೆ ಲಕ್ಷ ಹಣತೆಗಳು

ಸುರಕ್ಷಿತ ದೀಪಾವಳಿಗಾಗಿ ಜನರು ಯಾವ್ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಹೀಗಿವೆ. ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿರುವುದರಿಂದ ಜನ ಹಸಿರು ಪಟಾಕಿಗಳನ್ನೇ ಖರೀದಿಸಬೇಕು. ಬಹಳಷ್ಟು ಜನ ಮನೆಯ ಕಾಂಪೌಂಡ್‌ ಒಳಗಡೆ ಅಥವಾ ಹೆಚ್ಚು ಜನರು ಇರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಪಟಾಕಿಗಳನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಸಿಡಿಸಬೇಕು. ಮಕ್ಕಳು ಸ್ವತಂತ್ರವಾಗಿ ಪಟಾಕಿಗಳನ್ನು ಸಿಡಿಸಲು ಬಿಡಬೇಡಿ, ಈ ವೇಳೆ ಪಾಲಕರು ಅಥವಾ ಹಿರಿಯರು ಮಕ್ಕಳ ಜೊತೆ ಇರಿ. ದೀಪಾವಳಿ ದೀಪಗಳ ಹಬ್ಬ ಆಗಿರುವುದರಿಂದ ದಹಿಸುವ ವಸ್ತುಗಳನ್ನು ದೀಪಗಳಿಂದ ದೂರವಿಡಿ ಎಂದು ಡಾ. ಶ್ರುತಿ ಭಾಸ್ಕರನ್‌ ಸಲಹೆ ನೀಡಿದ್ದಾರೆ.

ಪಟಾಕಿ ಸಿಡಿಸುವುದು ಶ್ವಾಸಕೋಶದ ಕಾಯಿಲೆಯಿಂದ ಬಳಲುವವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು. ಜೊತೆಗೆ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ದೀಪಾವಳಿ ವೇಳೆ ಏನಾದರೂ ಬೆಂಕಿ ಅವಘಡ ಉಂಟಾದರೆ, ಗಾಯ ಆದ ಜಾಗಕ್ಕೆ ಸುಮಾರು 15 ನಿಮಿಷಗಳ ಕಾಲ ತಂಪಾದ ನೀರನ್ನು ಹಾಕಿ. ಬೆಣ್ಣೆ, ಎಣ್ಣೆ ಅಥವಾ ಇತರೆ ಮನೆಮದ್ದುಗಳನ್ನು ಬಳಸಬೇಡಿ. ಚರ್ಮಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ತೆಗೆಯಬೇಡಿ. ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ ಎಂದು ವೈದ್ಯರು ಸೂಚಿಸಿದ್ದಾರೆ.

ಇದನ್ನೂ ಓದಿ: Deepavali 2025: ದೀಪಾವಳಿ ಶಾಪಿಂಗ್‌ ಮಾಡುವಾಗ ನೀವು ಯಾವ ವಸ್ತುಗಳನ್ನು ಖರೀದಿ ಮಾಡೋದು ಬೆಸ್ಟ್‌ ಗೊತ್ತಾ?

ದೀಪಾವಳಿ ವೇಳೆ ಸಾಮಾನ್ಯವಾಗಿ ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ಜನ ಹಾಗೂ ಮಕ್ಕಳು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅನೇಕರಿಗೆ ಕಣ್ಣಿನ ಗಾಯಗಳು ಆಗಿರುತ್ತವೆ. ಒಂದು ವೇಳೆ ಪಟಾಕಿಯ ಮದ್ದು ಕಣ್ಣಿಗೆ ಬಿದ್ದರೆ, ಕಣ್ಣನ್ನು ತೊಳೆಯಲು ಶುದ್ಧ ನೀರನ್ನು ಬಳಸಬೇಕು. ಆದರೆ, ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜಬಾರದು. ಗಾಯಾಳುಗಳು ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯಬೇಕು. ಒಂದು ವೇಳೆ ಅಲರ್ಜಿಯಿಂದ ಉಸಿರಾಟ ಸಮಸ್ಯೆ ಉಂಟಾದರೆ ವೈದ್ಯರು ಸೂಚಿಸಿರುವ ಇನ್‌ಹೇಲರ್‌ಗಳನ್ನು ಬಳಸಬಹುದು. ಮತ್ತು ಚೆನ್ನಾಗಿ ಗಾಳಿಯಾಡುವ ಕೋಣೆಗೆ ಹೋಗಿ ಅಥವಾ ಉತ್ತಮ ಗಾಳಿಗಾಗಿ ವಾಯು ಶುದ್ಧೀಕಾರಕವನ್ನು ಬಳಸಿ. ಆದರೆ, ಉಸಿರಾಟದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಹಾಯವನ್ನು ಪಡೆಯಿರಿ.

ಇನ್ನು, ದೀಪಾವಳಿ ಸಮಯದಲ್ಲಿ, ಪಟಾಕಿಗಳನ್ನು ಸಿಡಿಸುವಾಗ ಬರುವ ಭಾರೀ ಶಬ್ಧಗಳು ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಪಟಾಕಿ ಶಬ್ಧದಿಂದ ಯಾರಿಗಾದರೂ ಸಮಸ್ಯೆಯಾದ್ರೆ ಅವರನ್ನು ನಿಶಬ್ಧ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕುಡಿಯಲು ನೀರು ಕೊಡಿ. ನಂತರ ಅವರ ಒತ್ತಡವನ್ನು ಕಡಿಮೆ ಮಾಡಲು ಅವರಿಗೆ ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಮಾಡಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿ.

ಈ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಹಬ್ಬದ ಋತುವಿನಲ್ಲಿಯೂ ಸಹ ಸುರಕ್ಷಿತ ಮತ್ತು ಸಮೃದ್ಧ ದೀಪಾವಳಿಯನ್ನು ಆಚರಿಸಿ ಎಂದು ಡಾ. ಶ್ರುತಿ ಭಾಸ್ಕರನ್‌ ಸಲಹೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ