Chanakya Niti: ಈ ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ
ನಾವು ನಮ್ಮ ಜೀವನದಲ್ಲಿ ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ಅದಕ್ಕಾಗಿಯೇ ಒಳ್ಳೆಯವರ ಸಹವಾಸದಲ್ಲಿರಬೇಕು, ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಕೊಳ್ಳಬೇಕು ಎಂದು ಹಿರಿಯರು ಕಿವಿಮಾತು ಹೇಳೋದು. ಹೀಗೆ ಒಳ್ಳೆಯ ಅಭ್ಯಾಸಗಳು ನಮ್ಮ ಜೀವನ ವನ್ನು ಬೆಳಗುವಂತೆ ಕೆಲವೊಂದು ಅಭ್ಯಾಸಗಳು ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತನ್ನ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಶ್ರೀಮಂತಿಕೆ ಗಳಿಸುವುದು ಹೇಗೆ, ಯಶಸ್ಸನ್ನು ಸಾಧಿಸಲು ಏನು ಮಾಡಬೇಕು, ದಾಂಪತ್ಯ ಜೀವನ ಸುಖಕರವಾಗಿರಲು ಏನು ಮಾಡಬೇಕು, ಎಂತಹ ಸ್ನೇಹಿತರನ್ನು ಆಯ್ಕೆ ಮಾಡಬೇಕು ಹೀಗೆ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಅವರು ವ್ಯಕ್ತಿಯ ಈ ಕೆಲವೊಂದು ಅಭ್ಯಾಸಗಳು ಆತನ ಜೀವನವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದಿದ್ದಾರೆ. ಹಾಗಿದ್ರೆ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ, ಯಶಸ್ಸನ್ನು ಸಾಧಿಸಲು ಯಾವೆಲ್ಲಾ ಅಭ್ಯಾಸಗಳನ್ನು ಬದಲಾಯಿಸಬೇಕು ಎಂಬುದನ್ನು ನೋಡೋಣ ಬನ್ನಿ.
ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಅಭ್ಯಾಸಗಳು:
ಸೋಮಾರಿತನ: ಆಚಾರ್ಯ ಚಾಣಕ್ಯರ ಪ್ರಕಾರ ಸೋಮಾರಿತನವು ವ್ಯಕ್ತಿಯ ದೊಡ್ಡ ಶತ್ರುವಾಗಿದ್ದು, ಇದು ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಸೋಮಾರಿತನವಿದ್ದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ಈ ಒಂದು ಅಭ್ಯಾಸದಿಂದ ಸಂಪೂರ್ಣ ಜೀವನವೇ ಹಾಳಾಗುತ್ತದೆ. ಆದ್ದರಿಂದ, ಜೀವನವನ್ನು ಹಾಳು ಮಾಡುವ ಈ ಅಭ್ಯಾಸವನ್ನು ತ್ಯಜಿಸಿ. ಸೋಮಾರಿತನವನ್ನು ಬದಿಗಿಟ್ಟು, ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ.
ಯೋಚಿಸದೆ ವರ್ತಿಸುವುದು: ಯಾವುದೇ ಕೆಲಸವನ್ನು ಸಹ ಯೋಚಿಸದೆ ಕೈಗೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಯೋಚಿಸದೆ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ, ಯೋಚಿಸದೆ ಯಾವುದೇ ಕಾರ್ಯವನ್ನು ಕೈಗೊಳ್ಳುವುದರಿಂದ ಅದರಿಂದ ತೊಂದರೆಗಳಾಗುವುದೇ ಹೆಚ್ಚು. ಇದು ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಎಂದಿಗೂ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಇದನ್ನೂ ಓದಿ: ಈ ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ
ಕೆಟ್ಟವರ ಸಹವಾಸ: ಕೆಟ್ಟವರ ಸಹವಾಸ ಒಳ್ಳೆಯದಲ್ಲ. ಈ ಸಹವಾಸ ದೋಷವು ಜೀವನವನ್ನು ಸರ್ವನಾಶ ಮಾಡುತ್ತದೆ. ಹೌದು ಕೆಟ್ಟವರ ಜೊತೆ ಸೇರಿದಾಗ ಅವರ ಕೆಟ್ಟ ಅಭ್ಯಾಸಗಳನ್ನೇ ನಾವು ಅಳವಡಿಸಿಕೊಳ್ಳುತ್ತೇವೆ. ಇದರಿಂದ ಜೀವನದಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಾಗಿ ಕೆಟ್ಟವರ ಸಹವಾಸದಿಂದ ದೂರವಿರಿ, ಒಳ್ಳೆಯರು ಹಾಗೂ ಸಕಾರಾತ್ಮಕ ಮನೋಭಾವವಿರುವ ಜನರೊಂದಿಗೆ ಬೆರೆಯಿರಿ.
ಸಮಯ ವ್ಯರ್ಥ ಮಾಡುವುದು: ಸಮಯ ವ್ಯರ್ಥ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ಚಾಣಕ್ಯ. ಕಠಿಣ ಪರಿಶ್ರಮದ ಮೂಲಕ ಕಳೆದುಹೋದ ಹಣವನ್ನು ಮರುಪಡೆಯಬಹುದು, ಆದರೆ ಒಮ್ಮೆ ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯ ವ್ಯರ್ಥ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಅಭ್ಯಾಸವಿರುವವರ ಸಂಪೂರ್ಣ ಜೀವನವೇ ಹಾಳಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:16 pm, Mon, 27 July 26




