
ಸುಂದರ ಸುಖಿ ದಾಂಪತ್ಯ ಜೀವನ, ಒಂದೊಳ್ಳೆ ಸಂಗಾತಿಯನ್ನು (life partner) ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಈ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಹೌದು ನೂರು ಕಾಲ ಸುಖವಾಗಿ ಸಂಸಾರ ಮಾಡಬೇಕೆಂದು ದಾಂಪತ್ಯ ಜೀವನಕ್ಕೆ ಖುಷಿ ಖುಷಿಯಾಗಿ ಕಾಲಿಟ್ಟವರು ಒಂದಷ್ಟು ಕಾರಣಗಳಿಂದ ಬೇರೆ ಬೇರೆಯಾಗುತ್ತಾರೆ. ಹೀಗಾಗಬಾರದೆಂದರೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿ ಜೊತೆಗಿದ್ದರೆ ಮಾತ್ರ ದಾಂಪತ್ಯ ಜೀವನ ಸುಂದರವಾಗಿರುತ್ತದೆ. ಆಚಾರ್ಯ ಚಾಣಕ್ಯರು ಸಹ ಸಂಗಾತಿಯನ್ನು ಆಯ್ಕೆ ಮಾಡುವಾಗ ಬರೀ ಅಂದ ಚೆಂದವನ್ನು ನೋಡುವುದು ಮಾತ್ರವಲ್ಲ, ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಹೀಗಿರುವಾಗ ನೀವು ಸಹಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.
ಬಾಹ್ಯ ಸೌಂದರ್ಯಕ್ಕಿಂತ ಗುಣಗಳ ಮೇಲೆ ಗಮನ ಹರಿಸಿ: ಅನೇಕ ಜನರು ಕೇವಲ ಬಾಹ್ಯ ಸೌಂದರ್ಯವನ್ನು ನೋಡಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಕೇವಲ ಸೌಂದರ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ದಾಂಪತ್ಯ ಜೀವನ ಯಶಸ್ವಿಯಾಗುವುದಿಲ್ಲ. ಸೌಂದರ್ಯದ ಹೊರತಾಗಿ ಗುಣ ನಡತೆಯನ್ನು ಸಹ ಪರಿಗಣಿಸಬೇಕು.
ಕುಟುಂಬ ಮೌಲ್ಯ: ಮದುವೆಗೂ ಮುನ್ನ ನೀವು ಆಯ್ಕೆ ಮಾಡುವ ಸಂಗಾತಿ ಕುಟುಂಬಕ್ಕೆ ಎಷ್ಟು ಮೌಲ್ಯ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಹೌದು ಕುಟುಂಬ ಸದಸ್ಯರಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ, ಕುಟುಂಬ ಸದಸ್ಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಹಿರಿಯರಿಗೆ ಗೌರವ ನೀಡುತ್ತಾರೆಯೇ ಇತ್ಯಾದಿ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ತಾಳ್ಮೆ ಇದೆಯೇ ಎಂಬುದನ್ನು ಪರೀಕ್ಷಿಸಿ: ತಾಳ್ಮೆ ಇರುವ ವ್ಯಕ್ತಿ ಜೀವನದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹ ಎದುರಿಸಬಲ್ಲ ಮತ್ತು ತಾಳ್ಮೆ ಇರುವವರು ಎಲ್ಲೂ ವಿಚಲಿತರಾಗದೆ ಪರಿಸ್ಥಿಯನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ನಿಮ್ಮ ಸಂಗಾತಿಗೆ ತಾಳ್ಮೆ ಇದೆಯೇ ಎಂಬುದನ್ನು ಪರೀಕ್ಷಿಸಿ
ಉತ್ತಮ ನಡತೆ: ಎಲ್ಲರನ್ನೂ ಗೌರವಿಸುತ್ತಾರೆಯೇ, ಸಂಬಂಧಗಳಿಗೆ ಬೆಲೆ ಕೊಡುತ್ತಾರೆಯೇ ಎಂಬುದನ್ನು ಗಮನಿಸಬೇಕು. ಏಕೆಂದರೆ ಮೌಲ್ಯಗಳ ಕೊರತೆಯ ವ್ಯಕ್ತಿಯನ್ನು ದುರಹಂಕಾರಿಯನ್ನಾಗಿ ಮಾಡುತ್ತದೆ ಮತ್ತು ಅಂತಹವರು ತಮ್ಮ ಸಂಗಾತಿಯನ್ನು ಸಹ ಗೌರವಿಸಲಾರರು ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬಾರದಂತೆ
ಮುಂಗೋಪದ ಬಗ್ಗೆ ಪರೀಕ್ಷಿಸಿ: ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಮುಂಗೋಪವನ್ನು ಹೊಂದಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಮರೆಯದಿರಿ. ಆಚಾರ್ಯ ಚಾಣಕ್ಯರ ಪ್ರಕಾರ, ಕೋಪದ ಸ್ವಭಾವದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ದಾಂಪತ್ಯ ಜೀವನವು ತೊಂದರೆಗೊಳಗಾಗುತ್ತದೆ ಮತ್ತು ಇದು ಅತೃಪ್ತಿಗೆ ಕಾರಣವಾಗಬಹುದು. ಹಾಗಾಗಿ ತಾಳ್ಮೆಯಿಂದ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವಂತಹ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.
ದಯಾಳು ಮತ್ತು ಸಹಿಷ್ಣು ಸ್ವಭಾವ: ಆಚಾರ್ಯ ಚಾಣಕ್ಯರ ಪ್ರಕಾರ, ದಯಾಳು ಸ್ವಭಾವದ ವ್ಯಕ್ತಿಯು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಅದೇ ರೀತಿ ಅವರು ತಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುತ್ತಾರ. ಇದಲ್ಲದೆ, ಸಹಿಷ್ಣು ಸ್ವಭಾವದವರು ಜೀವನದ ಏರಿಳಿತಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ. ಆದ್ದರಿಂದ ಇಂತಹ ಗುಣಗಳಿರುವ ಸಂಗಾತಿಯನ್ನೇ ಆಯ್ಕೆ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ