ನಿಮ್ಮ ಬೆಳಗಿನ ದಿನಚರಿ ಹೀಗಿದ್ದರೆ ಒತ್ತಡದ ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗೋದಂತೂ ಗ್ಯಾರಂಟಿ
ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯ ಸಮಸ್ಯೆಗಳಾಗಿದ್ದು, ಅನೇಕ ಜನರ ಮೇಲೆ ಇದು ಋಣಾತ್ಮಕ ಪರಿಣಾಮ ಬೀರುತ್ತಿದೆ. ಈ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸದಿದ್ದರೆ ನಂತರದಲ್ಲಿ ಅದು ಗಂಭೀರವಾಗಬಹುದು. ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಒತ್ತಡವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ನಿಮಗೂ ಕೂಡ ಒತ್ತಡದಿಂದ ಮುಕ್ತಿ ಬೇಕಾ? ಹಾಗಿದ್ರೆ ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಇತ್ತೀಚಿನ ಬಿಡುವಿಲ್ಲದ ಜೀವನಶೈಲಿಯ ಕಾರಣ ಮಾನಸಿಕ ಒತ್ತಡ (stress), ಕಿರಿಕಿರಿ, ಆಯಾಸ ಮತ್ತು ಆತಂಕವು ಜೀವನದ ಒಂದು ಭಾಗವಾಗುತ್ತಿವೆ. ಈಗಿನ ಜನರಂತೂ ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚು ಸ್ಟ್ರೆಸ್ ತೆಗೆದುಕೊಳ್ಳುತ್ತಾರೆ. ಅತಿಯಾದ ಒತ್ತಡದ ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ತುಂಬಾನೇ ಮುಖ್ಯ. ದೈನಂದಿನ ಜೀವನದಲ್ಲಿ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಒತ್ತಡ ಕಡಿಮೆ ಮಾಡಿ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಇದೇ ರೀತಿ ನೀವು ಸಹ ಒತ್ತಡದಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಮಾನಸಿಕ ಶಾಂತಿಯನ್ನು ಪಡೆಯಲು ಬೆಳಗ್ಗಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಒತ್ತಡವನ್ನು ಕಡಿಮೆ ಮಾಡಲು ಬೆಳಗಿನ ದಿನಚರಿ ಹೀಗಿರಲಿ:
ನೀರು ಕುಡಿಯಿರಿ: ರಾತ್ರಿಯ ನಿದ್ರೆಯ ಸಮಯದಲ್ಲಿ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಹಾಗಾಘಿ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ದೇಹ ಮತ್ತು ಮೆದುಳಿನಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಜಲಸಂಚಯನವು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ದಿನವಿಡೀ ನೀವು ಉಲ್ಲಾಸದಾಯಕವಾಗಿರಲು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ಪಾಲಿಸಿ.
ಧ್ಯಾನ ಮತ್ತು ಆಳವಾದ ಉಸಿರಾಟದ ವ್ಯಾಯಾಮ ಮಾಡಿ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತಾ ಟೈಂ ವೇಸ್ಟ್ ಮಾಡುವ ಬದಲು ಕೆಲವು ನಿಮಿಷಗಳ ಕಾಲ ಧ್ಯಾನ ಮಾಡಿ, ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಿ, ಯೋಗಭ್ಯಾಸ ಮಾಡಿ ಖಂಡಿತವಾಗಿಯೂ ಇವೆಲ್ಲವೂ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ, ನಿಮ್ಮ ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸಮಯ ಸಿಕ್ಕರೆ ನೀವು ಸಕಾರಾತ್ಮಕತೆಯನ್ನು ಹೆಚ್ಚಿಸುವ ಪುಸ್ತಕಗಳನ್ನು ಸಹ ಓದಬಹುದು.
ದೈಹಿಕ ಚಟುವಟಿಕೆಗೆ ಗಮನ ನೀಡಿ: ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ, ವಾಕಿಂಗ್ನಂತಹ ದೈಹಿಕ ಚಟುವಟಿಕೆಗಳನ್ನು ಅಭ್ಯಾಸ ಮಾಡಿ, ಇದು ದೈಹಿಕ ಮಾತ್ರವಲ್ಲದೆ ಮಾನಸಿ ಆರೋಗ್ಯಕ್ಕೂ ತುಂಬಾನೇ ಮುಖ್ಯ. ಬೆಳಗ್ಗೆ ಬೇಗ ಎದ್ದು ವಾಕಿಂಗ್ ಮಾಡುತ್ತಾ ಪ್ರಕೃತಿಯೊಂದಿಗೆ ಸಮಯ ಕಳೆಯಿರಿ, ಇಲ್ಲವೆ ಯೋಗ, ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದು ಇದು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಇದು ನಿಮ್ಮ ಮನಸ್ಸಿಗೆ ಖುಷಿಯನ್ನು ನೀಡುವ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹಭರಿತರಾಗಿರುತ್ತೀರಿ
ಆರೋಗ್ಯಕರ ಉಪಹಾರ ಸೇವಿಸಿ: ಬೆಳಗಿನ ಉಪಾಹಾರವು ದಿನವಿಡೀ ನಿಮ್ಮ ಮೆದುಳಿಗೆ ಶಕ್ತಿ ನೀಡುತ್ತದೆ. ಆದ್ದರಿಂದ, ನಿಮ್ಮ ಉಪಾಹಾರದಲ್ಲಿ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಿ. ಬಿ ಜೀವಸತ್ವಗಳು, ಸಿ ಜೀವಸತ್ವಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಆಹಾರವು ನಿಮ್ಮ ಸ್ಮರಣೆಯನ್ನು ಬಲಪಡಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಬಾದಾಮಿ, ವಾಲ್ನಟ್ಸ್, ಚಿಯಾ ಬೀಜಗಳು, ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವನೆ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








