Special Food : ಈ ಮಳೆಗೆ ಗಂಜಿ ಜತೆ ಏಡಿ ಸುಕ್ಕ ಸೂಪರ್​​​​ ಕಾಂಬಿನೇಷನ್, ಇದು ಕರಾವಳಿ-ಮಲೆನಾಡು ಯುವಕರಿಗೆ ಹಬ್ಬ

ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಆರಂಭವಾಗುತ್ತಿದ್ದಂತೆ ನರ್ತೆ (ಶಂಕುಹುಳು), ಅಣಬೆ, ಗದ್ದೆ ಹಳ್ಳ ಕೊಳ್ಳದಲ್ಲಿ ಸಿಗುವ ಏಡಿ ಮೀನುಗಳು, ಕಳಲೆ ಸೇರಿದಂತೆ ಸುತ್ತ ಮುತ್ತಲಿನ ಪರಿಸರದಲ್ಲೇ ಸಿಗುವುದನ್ನೇ ಆಹಾರವಾಗಿ ಸೇವಿಸುತ್ತಾರೆ. ಅದರಲ್ಲಿಯು ಏಡಿ ಹಾಗೂ ಮೀನಿನ ಬೇಟೆ ಇಲ್ಲಿಯವರಿಗೆ ಅಚ್ಚು ಮೆಚ್ಚು. ಬೇಟೆಯಾಡಿ ತಂದ ಕಲ್ಲೇಡಿಯನ್ನು ಸಾಂಬಾರು ಮಾಡಿ ಸವಿದರೆ ಬೇರೆ ಯಾವುದೇ ಅಡುಗೆ ಇದರ ರುಚಿಗೆ ಸಮನಾಗುವುದಿಲ್ಲ. ಹಾಗಾದ್ರೆ ಕರಾವಳಿ ಹಾಗೂ ಮಲೆನಾಡಿಗರ ಏಡಿ ಬೇಟೆಯ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

Special Food : ಈ ಮಳೆಗೆ ಗಂಜಿ ಜತೆ ಏಡಿ ಸುಕ್ಕ ಸೂಪರ್​​​​ ಕಾಂಬಿನೇಷನ್, ಇದು ಕರಾವಳಿ-ಮಲೆನಾಡು ಯುವಕರಿಗೆ ಹಬ್ಬ
ಏಡಿ ಸುಕ್ಕ
Edited By:

Updated on: Jun 27, 2024 | 12:48 PM

ಜೂನ್ ಜುಲೈ ತಿಂಗಳಿನಲ್ಲಿ ಮಳೆಯು ಆರಂಭವಾಗುತ್ತಿದ್ದಂತೆ ಇತ್ತ ಪ್ರಕೃತಿಯು ತನ್ನ ಸೌಂದರ್ಯದಿಂದ ಕಂಗೊಳಿಸುತ್ತವೆ. ರೈತರು ಕೃಷಿಕಾಯಕದೊಂದಿಗೆ, ಮಲೆನಾಡು ಹಾಗೂ ಕರಾವಳಿಯ ಜನರು ಏಡಿ ಮೀನುಗಳ ಬೇಟೆಗೆ ಸಿದ್ಧವಾಗುತ್ತಾರೆ. ಮಳೆಗಾಲದಲ್ಲಿ ಹರಿಯುವ ಹಳ್ಳ ಕೊಳ್ಳಗಳಲ್ಲಿ, ಗದ್ದೆಗಳಲ್ಲಿ ನೀರು ತುಂಬಿಕೊಳ್ಳುವ ಕಾರಣ ಏಡಿಗಳೂ, ಮೀನುಗಳೂ ಹೆಚ್ಚಾಗಿ ಕಾಣಸಿಗುತ್ತವೆ. ಹೀಗೆ ನೀರಿನಲ್ಲಿ ಬಂದ ಮೀನು ಹಾಗೂ ಏಡಿಯನ್ನು ಹಿಡಿಯುವುದೆಂದರೆ ಈ ಭಾಗದ ಜನರಿಗೆ ಸಿಗುವ ಖುಷಿಯೇ ಬೇರೆ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಗಾಲದ ರಾತ್ರಿಯಲ್ಲಿ ಯುವಕರು ಹಳ್ಳ, ಕೊಳ್ಳ, ಗದ್ದೆಗಳಲು ಏಡಿ, ಮೀನುಗಳನ್ನು ಹಿಡಿಯಲು ಹೊರಟು ನಿಲ್ಲುತ್ತಾರೆ. ರಾಜಾರೋಷವಾಗಿ ಯುವಕರ ತಂಡವೊಂದು ರಾತ್ರಿಯ ವೇಳೆ ಏಡಿ ಬೇಟೆಗೆ ಹೊರಟು ನಿಂತರೆ, ಮನೆಯ ಮಂದಿಯೆಲ್ಲ ಅವರು ಬರುವ ದಾರಿಯನ್ನೇ ಕಾಯುತ್ತಿರುತ್ತಾರೆ. ಹೀಗಾಗಿ ರಾತ್ರಿಯ ವೇಳೆ ಸಂದಿಯಿಂದ ಹೊರ ಬರುವ ಕಲ್ಲೇಡಿಗಳನ್ನು ಹಿಡಿದು ತಂದರೆ ಮರುದಿನ ಭರ್ಜರಿ ಭೋಜನ.

ಹೌದು, ಕೆಸರಿನಲ್ಲಿ ಅವಿತುಕೊಂಡಿದ್ದ ಏಡಿಗಳು, ಮೀನುಗಳು ರಾತ್ರಿಯ ವೇಳೆ ಆಹಾರ ಅರಸುತ್ತ ಹೊರಗೆ ಬರುತ್ತವೆ. ಈ ವೇಳೆ ಒಬ್ಬರು ಟಾರ್ಚ್ ಹಾಕಿದರೆ ಮತ್ತೊಬ್ಬರು ಕೈಯಲ್ಲಿಯೇ ಜೀವಂತ ಏಡಿಗಳನ್ನು ಹಿಡಿದು ಗೋಣಿಚೀಲದೊಳಗೆ ತುಂಬಿಸಿಕೊಳ್ಳುತ್ತಾರೆ. ಬೇಟೆಯ ವೇಳೆ ಸ್ವಲ್ಪ ಎಚ್ಚರ ಆ ಕಡೆ ಈ ಕಡೆಯಾದರೂ ಏಡಿಗಳು ತಪ್ಪಿಸಿಕೊಳ್ಳುತ್ತವೆ.

ಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೂ ಏಡಿಗಳು ತನ್ನ ಚೂಪಾದ ಕಾಲುಗಳಿಂದ ಕಚ್ಚಿ ಕೈಗೆ ಗಾಯಗಳಾಗುವುದಿದೆ. ಆದರೆ ಮೀನನ್ನು ಹಿಡಿಯಲು ಮಾತ್ರ ಕತ್ತಿ ಸೇರಿದಂತೆ ಇನ್ನಿತ್ತರ ಪರಿಕರಗಳನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಅಪಾಯವೇ ಹೆಚ್ಚು. ಬೇಟೆಯು ತ್ರಾಸದಾಯಕವಾಗಿದ್ದರೂ ಬೇಟೆಯ ವೇಳೆ ಸ್ನೇಹಿತರ ಜೊತೆಯಲ್ಲಿ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಶಿಕಾರಿ ಮುಗಿಸಿದ ಖುಷಿಯಲ್ಲಿ ಮರುದಿನಕ್ಕೆ ಭರ್ಜರಿ ಭೋಜನವಂತೂ ಸಿದ್ಧವಾಗಿರುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಕರಾವಳಿಗರ ಅಡುಗೆ ಮನೆಯಲ್ಲಿ ‘ನರ್ತೆ’ ಘಮ

ಈ ಏಡಿ ಹಾಗೂ ಮೀನುಗಳನ್ನು ಎತ್ತರದ ಪಾತ್ರೆಗೆ ಹಾಕಿ, ನೀರು ತುಂಬಿಸಿ ಮುಚ್ಚಿಡಲಾಗುತ್ತದೆ. ಮುಚ್ಚಿಡುವ ವೇಳೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು, ಏಡಿಗಳು ಓಡಿ ಹೋಗುತ್ತವೆ. ಮರುದಿನ ಈ ಏಡಿ ಸಾಂಬಾರನ್ನು ತಯಾರಿಸುತ್ತಾರೆ. ಘಮ್ ಎನ್ನುವ ಸಾಂಬಾರಿನೊಂದಿಗೆ ಅನ್ನ, ನೀರ್ ದೋಸೆ, ಅಕ್ಕಿ ರೊಟ್ಟಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ಮಳೆಗಾಲದಲ್ಲಿ ಸಿಗುವ ಕಲ್ಲೇಡಿಯ ಸಾಂಬಾರ್ ರುಚಿಯನ್ನು ಸವಿದವರೇ ಬಲ್ಲರು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us