
ರಕ್ಷಾ ಬಂಧನ (Raksha Bandhan) ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದ್ದು, ಈ ಬಾರಿ ಆಗಸ್ಟ್ 9 ರಂದು ರಕ್ಷಾ ಬಂಧನ ಹಬ್ಬ ಬಂದಿದೆ. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯ ನೂಲ ಹುಣ್ಣಿಮೆ ಹಬ್ಬದ್ದು. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಅಣ್ಣ ತಂಗಿಯರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಸಹೋದರಿಯರು ಅಣ್ಣನೋ, ತಮ್ಮನಿಗೋ ರಕ್ಷಾದಾರವನ್ನು ಕಟ್ಟುವ ಮೂಲಕ ರಕ್ಷಣೆಯ ಭರವಸೆಯನ್ನು ಪಡೆಯುತ್ತಾರೆ. ಈಗಾಗಲೇ ಹೆಣ್ಣು ಮಕ್ಕಳು, ಮಹಿಳೆಯರು ತಮ್ಮ ಪ್ರೀತಿ ಅಣ್ಣನಿಗೂ ಅಥವಾ ಅಣ್ಣನ ಸ್ಥಾನದಲ್ಲಿರುವ ಸ್ನೇಹಿತನಿಗೂ ರಾಖಿ ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಅದಕ್ಕೂ ಮುನ್ನ ಕೈಗೆ ರಕ್ಷೆಯನ್ನು ಯಾರು ಯಾರಿಗೆ ಕಟ್ಟಬೇಕೆಂದು ನೀವು ತಿಳಿದುಕೊಳ್ಳುವುದು ಸೂಕ್ತ.
ಇದು ಸಹೋದರ ಸಹೋದರಿಯರ ಹಬ್ಬ
ರಕ್ಷಾ ಬಂಧನ ಎಂದ ತಕ್ಷಣವೇ ನೆನಪಿಗೆ ಬರುವುದೇ ಅಣ್ಣ ತಂಗಿಯರು. ಎಲ್ಲರಿಗೂ ತಿಳಿದಿರುವಂತೆ ಇದೊಂದು ಸಹೋದರ ಸಹೋದರಿಯರ ಬಾಂಧವ್ಯ ಸಾರುವ ಹಬ್ಬವಾಗಿದೆ. ತನ್ನ ಸಹೋದರನಿಗೆ ರಾಖಿ ಕಟ್ಟಿ ಅಣ್ಣನಿಗೆ ಒಳ್ಳೆಯದು ಆಗಲಿ, ಆರೋಗ್ಯ, ಆಯುಷ್ಯ ಸಿಗಲಿ ಎಂದು ತಂಗಿಯಾದವಳು ಪ್ರಾರ್ಥಿಸುತ್ತಾಳೆ. ಅಣ್ಣನು ಏನೇ ಸಮಸ್ಯೆಗಳು ಬರಲಿ, ನಿನ್ನ ರಕ್ಷಣೆಗೆ ಸದಾ ನಿಲ್ಲುವೆ ಎಂದು ಹೇಳುವ ಮೂಲಕ ಇಬ್ಬರ ನಡುವಿನ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗುತ್ತದೆ.
ಇದನ್ನೂ ಓದಿ:Raksha Bandhan 2025: ರಾಖಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ ಗೊತ್ತಾ?
ಈ ದಿನ ಯಾರಿಗೆ ಯಾರು ರಾಖಿ ಕಟ್ಟಬಹುದು?
ರಕ್ಷಾ ಬಂಧನವನ್ನು ಸಹೋದರ ಸಹೋದರಿಯರೇ ಆಚರಿಸಬೇಕೆಂದಿಲ್ಲ. ನಮ್ಮ ಮನಸ್ಸಿಗೆ ಯಾರು ಅಣ್ಣನ ಸ್ಥಾನದಲ್ಲಿ ಹತ್ತಿರವಾಗುತ್ತಾರೆ ಅವರಿಗೂ ಕೂಡ ರಕ್ಷೆಯನ್ನು ಕಟ್ಟಿ ಹಬ್ಬ ಆಚರಿಸಬಹುದಾಗಿದೆ. ಹೀಗಾಗಿ ರಕ್ತಸಂಬಂಧ ಹೊಂದಿಲ್ಲವಿದ್ದರೂ ಅಣ್ಣನ ಸ್ಥಾನದಲ್ಲಿ ಯಾರು ಇರುತ್ತಾರೋ ಅವರಿಗೆ ರಾಖಿ ಕಟ್ಟಬಹುದು. ಇನ್ನು ಸ್ನೇಹಿತರು ಪರಸ್ಪರರು ರಕ್ಷೆಯನ್ನು ಕಟ್ಟಿಕೊಳ್ಳುವ ಮೂಲಕ ಸ್ನೇಹ ಸಂಬಂಧದೊಂದಿಗೆ ಸದಾ ರಕ್ಷಣೆಯನ್ನು ಸ್ನೇಹಿತನಾಗಿ ನೀಡುವೆನು ಎಂದೇಳಬಹುದು. ಇನ್ನು ಅಣ್ಣನ ಸ್ಥಾನದಲ್ಲಿರುವ ದೂರದ ಸೋದರಸಂಬಂಧಿಗೆ ಹಾಗೂ ಗುರುವಿಗೆ ಶಿಷ್ಯನು ಈ ರಕ್ಷೆಯನ್ನು ಕಟ್ಟಬಹುದು ಎನ್ನಲಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ