Literature: ನೆರೆನಾಡ ನುಡಿಯೊಳಗಾಡಿ; ಕಣ್ಣ, ನೀನು ಯಾವ ಬಾಗಿಲ ಮೂಲಕ ಒಳಗೆ ಬರುತ್ತೀಯಾ?
Indraneela Story by A. Vennila : ಕರೆಗಂಟೆ ಶಬ್ದ. ಮಾಲುಸಮೇತ ಸಿಕ್ಕಿಹಾಕಿಕೊಂಡ ಕಳ್ಳನಂತೆ ನಡುಗು, ಬೆವರು. ‘ಏನು ತಪ್ಪು ಮಾಡಿದೆ? ಯಾಕೆ ಹೆದರುತ್ತಿದ್ದೇನೇ?’ ಎಂದು ಸಮಾಧಾನ ಮಾಡಿಕೊಂಡೆ. ಎದೆಬಡಿತ ಕಡಿಮೆಯಾಗಲಿಲ್ಲ.

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮಕ್ಕಳು ಬರುವ ಮೊದಲು ಕಣ್ಣ ಬಂದರೆ ಚೆನ್ನಾಗಿರುತ್ತದೆ. ಕಾದಿಟ್ಟಿರುವ ಮುತ್ತನ್ನು ಕೊಡಬಹುದು. ನಾನಾಗಿ ಬಯಸಿ ಹೋಗಲು ಅವಕಾಶ ದೊರಕುವುದು. ಅರಳಿದ ದೇಹ ಹೇಗಿರುತ್ತದೆ ಎಂದು ಕಣ್ಣನ ಬಳಿ ಕೇಳಬೇಕು. ಆತುರವಿಲ್ಲದೇ ಅನುಭವಿಸಿ ಮಾಡಬೇಕು. ಕಣ್ಣ ಯಾವಾಗಲೂ ಎಂಟು ಗಂಟೆಗಲ್ಲವೇ ಬರುತ್ತಾನೆ. ಕಣ್ಣನನ್ನು ನೆನಪು ಮಾಡಿಕೊಂಡಾಗ ದೇಹದಲ್ಲಿ ಪುಳಕದ ಕಿರಣಗಳು ಹರಿದಾಡಿದವು. ಕುತ್ತಿಗೆಯವರೆಗೆ ಭಾವನೆಗಳ ಚೆಂಡು ಪುಟಿದು ನಿಂತವು. ಕಾಲುಗಳಲ್ಲಿ ಬಿಸಿ ಹರಡಿತು. ಆಲಿಂಗನಕ್ಕೆ ತವಕಿಸುವ ಮೊಲೆಗಳು ಚಿಮ್ಮಿ ನಿಂತವು. ಮುಖಕ್ಕೆ ಒಟ್ಟು ರಕ್ತವೂ ಹರಿದು ಬಲೂನಿನಂತೆ ಉಬ್ಬಿಕೊಂಡವು. ಕನ್ನಡಿಯಲ್ಲಿ ಮತ್ತೆ ನೋಡಿಕೊಂಡೆ. ದೇಹ ಮೊದಲು ನೋಡಿದಂತೆಯೇ ಇತ್ತು. ಹೊರಗೆ ಸಣ್ಣ ಸುಳಿವೂ ಕಾಣಿಸದಂತೆ, ಒಳೊಳಗೆ ಒಂದು ಜ್ವಾಲಾಮುಖಿ ಸ್ಪೋಟಿಸಿ ಕರಗಿ ಹರಿಯುತ್ತಿದೆಯಲ್ಲಾ! ಮನಸ್ಸು ದೇಹವನ್ನು ಸಿದ್ಧಗೊಳಿಸುತ್ತಿದೆಯೇ? ದೇಹ ತನ್ನಷ್ಟಕ್ಕೆ ಸಿದ್ಧವಾಗುತ್ತಿದೆಯೇ?
ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ
(ಭಾಗ 17)
ದೇಹ ತನ್ನಷ್ಟಕ್ಕೆ ಸಿದ್ಧವಾಗಲು ಸಾಧ್ಯವೇ? ಮೆದುಳೂ ಮನಸ್ಸೂ ಸೇರಿ ಕಟ್ಟಳೆಯಿಟ್ಟರಲ್ಲವೇ ಸಾಧ್ಯ? ಮನಸ್ಸು ದೇಹವನ್ನು ಕಟ್ಟಿಹಾಕುತ್ತಿದೆಯಲ್ಲಾ? ಇವೆಲ್ಲಾ ತಪ್ಪು ಎಂದು ತಲೆ ಮೇಲೆ ಕುಟ್ಟುತ್ತಿದೆಯಲ್ಲಾ? ಅವನ ಜತೆ ಬಯಸಿದಂತೆ ಇರಬೇಕೆಂಬುದು ತಪ್ಪೇ?
ನಾನು ಮತ್ತೆ ಮನಸ್ಸನ್ನು ಅನುಮತಿಸಲು ಬಿಡಲಿಲ್ಲ. ಕುದಿದು ಉಕ್ಕುವ ದೇಹವನ್ನು, ಆಲೋಚನೆಗಳು ನೀರು ಸುರಿದು ತಣ್ಣಗಾಗಿಸುತ್ತವೆ. ನನ್ನೊಳಗೆ ಉದ್ಭವಿಸುವ ಭಾವನೆಗಳೊಂದಿಗೆ ಇರಲು ಇಷ್ಟವಾಗುತ್ತದೆ. ಅಪೂರ್ವವಾಗಿ ಅರಳುವ ಹೂಗಳನ್ನು ಕೈಬೆರಳಿನ ಬಿಸಿ ಸಹ ಬಾಡಿಸುತ್ತದೆ. ಭಗವಂತನಿಗೆ ಸಮರ್ಪಿಸುವಂತೆ, ನನ್ನ ಅರಳುವಿಕೆಯನ್ನು ಹಾಗೆಯೇ ಒಪ್ಪಿಸಬೇಕು. ತಲೆಕೂದಲೂ ಸಹ ಕಾಮದಲ್ಲಿ ವಿಕಸಿಸಬೇಕು. ಪ್ರತಿ ಅಂಗಾಂಗವೂ ಅದರದರ ಸಂಪೂರ್ಣತೆಯೊಂದಿಗೆ ಅರಳಿವೆ. ಕಾಮವನ್ನು ಇಷ್ಟು ದಿನಗಳು, ಹಸಿವಿಗೆ ಅನ್ನದಂತೆ ಉಂಡಿದ್ದೇನೆ. ದೇವರಿಗೆ ಇಡುವ ಎಡೆಯಂತೆ, ಕಣ್ಣ ಬಂದರೆ ಎಡೆ ಹಾಕಿದ್ದೇನೆ. ಗರ್ಭಗುಡಿಯ ದರ್ಶನಕ್ಕಾಗಿ, ಗುಡಿಯ ಬಾಗಿಲುಗಳನ್ನು ತೆರೆದಿಡುವಂತೆ ದೇಹದ ಬಾಗಿಲುಗಳನ್ನು ತೆರೆದಿಟ್ಟಿದ್ದೇನೆ. “ಕಣ್ಣ ನೀನು ಯಾವ ಬಾಗಿಲ ಮೂಲಕ ಒಳಗೆ ಬರುತ್ತೀಯಾ?”
ಭಾಗ 14 :Literature: ನೆರೆನಾಡ ನುಡಿಯೊಳಗಾಡಿ; ಕುರುಂಜಿ ಅರಳುವ ಕಾಲದಂತೆ, ದೇಹಕ್ಕೆ ಕಾಮ ಅರಳುವ ಕಾಲ ಇದೆಯೋ?
ಕರೆಗಂಟೆ ಹೊಡೆಯಿತು. ಗಾಬರಿಯಾಯಿತು ಮನಸ್ಸು. ಮಾಲು ಸಮೇತ ಸಿಕ್ಕಿಹಾಕಿಕೊಂಡ ಕಳ್ಳನಂತೆ ನಡುಗುತ್ತಿದ್ದೆ. ಬೆವರುತ್ತಿದ್ದೆ. ‘ಏನು ತಪ್ಪು ಮಾಡಿದೆ? ಯಾಕೆ ಹೆದರುತ್ತಿದ್ದೇನೇ?’ ಎಂದು ಸಮಾಧಾನ ಮಾಡಿಕೊಂಡೆ. ಎದೆಬಡಿತ ಕಡಿಮೆಯಾಗಲಿಲ್ಲ. ಅಷ್ಟರಲ್ಲಿ ಎರಡನೆಯ ಸಲ ಗಂಟೆ ಬಾರಿಸಿತು. ಮುಖದಲ್ಲಿ ಏನಾದರೂ ಕಾಣುತ್ತಿದೆಯೇ ಎಂದು ಕನ್ನಡಿಯನ್ನು ನೋಡಿಕೊಂಡೆ. ಏನೂ ವ್ಯತ್ಯಾಸವಿಲ್ಲವೆಂದು ತೃಪ್ತಿಯಾದ ಮೇಲೆ ಸರಿಯಾಗಿದ್ದ ಉಡುಪನ್ನು ಮತ್ತೆ ಸರಿಮಾಡಿಕೊಂಡು ಬಾಗಿಲ ಕಡೆಗೆ ಓಡಿದೆ. ಚಿಲುಕ ತೆಗೆದಕೂಡಲೇ, ಮತ್ತೆ ದೇಹ ಸರ್ ಎಂದು ಗಾಳಿಯಲ್ಲಿ ಹಾರಿತು. ಕಣ್ಣ ನಿಂತಿದ್ದ. ದೇವರಗುಡಿಯ ಗಂಟೆ ಇಂಪಾಗಿ ಮನಸ್ಸಿನೊಳಗೆ ನಿನಾದಿಸಿತು. ಬಾಗಿಲಿಗೆ ಚಿಲುಕ ಹಾಕಿ ಹಿಂತಿರುಗಿದ ಕ್ಷಣ, ಕಣ್ಣನನ್ನು ಹಿಂದಿನಿಂದ ಹಾಗೆಯೇ ಬಿಗಿಯಾಗಿ ಅಪ್ಪಿಕೊಂಡೆ.
ಬೆವರಿಂದ ಅಂಗಿ ಬೆನ್ನಿನೊಂದಿಗೆ ಒದ್ದೆಯಾಗಿತ್ತು. ಬೆವರಿನ ವಾಸನೆ ಅವನನ್ನು ಮತ್ತಷ್ಟು ಬಿಗಿಯಾಗಿ ತಬ್ಬಿಕೊಳ್ಳುವಂತೆ ಮಾಡಿತು. ಸ್ವಲ್ಪವೂ ನಿರೀಕ್ಷಿಸದ ಕಣ್ಣ ಸ್ವಲ್ಪ ತತ್ತರಿಸಿದ. ಆಫೀಸಿನ ಚೀಲವನ್ನು ಒಂದು ಕೈಯಲ್ಲಿ ಹಿಡಿದುಕೊಂಡೇ, ಮತ್ತೊಂದು ಕೈಯಿಂದ ನನ್ನನ್ನು ಮುಂದಕ್ಕೆ ಎಳೆದುಕೊಂಡ. ಗಾಳಿಯ ಮೆಲ್ಲನೆಯ ಸೋಂಕಿಗೆ ಕಾದಿದ್ದು ಬಲಿತ ಹಣ್ಣಿನಂತೆ ಅವನ ಎದೆ ಮೇಲೆ ಒರಗಿಕೊಂಡೆ. ದೇಹದೊಳಗೆ ಧಗಧಗ ಎಂದು ಬೆಂಕಿ ಹರಡಿತು. ಕುತ್ತಿಗೆಯನ್ನು ಸುತ್ತಿಕೊಂಡ ಕೈಗಳು ಅವನನ್ನು ನನ್ನೊಳಗೆ ಸೆರೆಮಾಡಿತು. ತುಟಿಯನ್ನು ಕಚ್ಚಿ ಹಿಡಿದುಕೊಂಡೆ. ಎರಡೂ ತುಟಿಗಳನ್ನೂ ಸೇರಿಸಿ ಕಚ್ಚಿಕೊಂಡದ್ದರಿಂದ ಕಣ್ಣ ಉಸಿರಾಡಲು ತಿಣಕಾಡಿದ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 15 : Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 4:13 pm, Fri, 18 March 22




