Literature: ನೆರೆನಾಡ ನುಡಿಯೊಳಗಾಡಿ; ಮುತ್ತು ಎರಡು ರೆಕ್ಕೆಗಳಾಗಿ ಬದಲಾಗಿದ್ದವು, ತುಟಿಗಳು ಕಣ್ಣಿಂದ ಮರೆಯಾದವು
Indraneela Story by A. Vennila : ಜೀವ ತುಂಬಿಕೊಂಡು ದುಂಡಗೆ ತಿರುಗುವ ಭೂಮಿಯ ಚೆಂಡಿನ ನಾಲಿಗೆಯನ್ನು ನಾನು ಸವಿಯುತ್ತಿದ್ದೆ. ದೇಹದ ಕದಗಳು ತೆರೆಯುತ್ತಲೇ, ಪ್ರಪಂಚದ ಗರ್ಭಗುಡಿಯೊಳಗೆ ನುಸುಳಿದೆ.

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನಿಧಿ ತುಂಬಿರುವ ಗುಡಿಯ ಬೀಗದ ಕೀಲಿ ತುಟಿಯೊಳಗೆಯೇ ಇದೆ. ರಸ ಒಸರುವ ಹಣ್ಣಿನ ರುಚಿಯನ್ನದು ಸವಿಯಿತು. ಕಣ್ಣನ ಬಿಸಿಯುಸಿರನ್ನು ನನ್ನ ಉಸಿರು ಅನುಭವಿಸಿತು. ಅವನ ಉಸಿರನ್ನು ಕ್ರಮವಾಗಿಸಲು ನನ್ನ ಉಸಿರಿನ ಗಾಳಿಯನ್ನು ಅವನೊಳಗೆ ಕಳುಹಿಸಿದೆ. ಮುಚ್ಚಿ ತೆರೆದ ಕಣ್ಣುಗಳಲ್ಲಿ ಕೆಂಪು ನೀಲಿಯೂ ಬೆರೆತ ತುಣುಕುಗಳು ತೇಲಿದವು. ಮುತ್ತಿನ ತೇವದಲ್ಲಿ ಹೊಸ ಜೀವ ಮೊಳೆಯಿತು. ಕಾಡು, ಮೇಡು, ಕಡಲು, ಜಲಪಾತ ಎಲ್ಲವೂ ಕಾಲ ಕೆಳಗೆ ಜಾರಿದವು. ಆಕಾಶದಲ್ಲಿ ಹಾರಾಡಿದೆ. ಮುತ್ತು ಎರಡು ರೆಕ್ಕೆಗಳಾಗಿ ಬದಲಾಗಿದ್ದವು. ತುಟಿಗಳು ಕಣ್ಣಿಂದ ಮರೆಯಾದವು. ಜೀವ ತುಂಬಿಕೊಂಡು ದುಂಡಗೆ ತಿರುಗುವ ಭೂಮಿಯ ಚೆಂಡಿನ ನಾಲಿಗೆಯನ್ನು ನಾನು ಸವಿಯುತ್ತಿದ್ದೆ. ದೇಹದ ಕದಗಳು ತೆರೆಯುತ್ತಲೇ, ಪ್ರಪಂಚದ ಗರ್ಭಗುಡಿಯೊಳಗೆ ನುಸುಳಿದೆ.
ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ
(ಭಾಗ 18)
ಕಾಡು ಹೂಗಳ ಪರಿಮಳ ಬಂದಿತು. ಭೂಮಿಯಿಂದ ಅಗೆದು ತೆಗೆದ ಹಸಿಗೆಣಸುಗಳ ತೇವದ ಮಣ್ಣಿನ ವಾಸನೆ. ಕರೆದ ಹಾಲಿನ ಉಕ್ಕುವ ನೊರೆ. ಕಡಲ ನೀರಿನ ಉಪ್ಪು. ಚಿಲುಮೆ ನೀರಿನ ಸಿಹಿ. ಕೆಮ್ಮಣ್ಣು ಗುಡ್ಡೆಯ ಒಗರು. ಅಗಲ ತೆರೆದ ಕಣ್ಣನ ಬಾಯೊಳಗೆ ಸುತ್ತುವ ಪ್ರಪಂಚ. ಒಂದನ್ನೊಂದು ಕಚ್ಚಿಕೊಂಡು ಬಿಗಿಯಾಗಿ ಮುಚ್ಚಿಕೊಂಡ ನಾಲ್ಕು ತುಟಿಗಳೊಳಗೆ ತಿರುಗಿತು. ಪರ್ವಗಳನ್ನು ದಾಟಿದ ಪುಳಕ.
‘‘ಬಿಡೇ, ಉಸಿರು ಕಟ್ಟುತ್ತಿದೆ” ಎದೆ ಮೇಲೆ ಕೈಯಿಟ್ಟು ಮುಂದಕ್ಕೆ ನೂಕಿದ.
ಕಣ್ಣನ ತುಟಿಗಳನ್ನು ಬಿಡಲಾಗದೆ ಹಿಂದಕ್ಕೆ ಸರಿದೆ. ದೇಹ ತುಟಿಯಲ್ಲಿ ಕೇಂದ್ರಿತವಾಗಿತ್ತು. ಸಣ್ಣ ಚಲನೆಯೂ ದೇಹದಲ್ಲಿರಲಿಲ್ಲ.
“ಮ್ ಮ್ ಮ್. ತಿಕ್ಕಲು. ಏನಾಯ್ತು, ಬಿಡೇ” ವೇಗವಾಗಿ ಮುಖದ ಮೇಲೆ ಕೈಯಿಟ್ಟು ಅಗಲಿಸಿದ. ಮೊಲೆ ಹಾಲು ಕುಡಿಯುವ ಮಗುವಿನಿಂದ ಮೊಲೆ ತೊಟ್ಟನ್ನು ಬಿಡಿಸಿದರೆ, ಅರಚುವಂತೆ ಅಳು ಬಂದಿತು.
“ಕಣ್ಣ, ಪ್ಲೀಸ್.” ಮತ್ತೆ ತುಟಿಯನ್ನು ಕಚ್ಚಲು ಹೋದೆ. ಬಲವಾದ ಕೈಗಳಿಂದ ಹಿಂದಕ್ಕೆ ಎಳೆದು, ತೋಳಿನಲ್ಲಿ ನನ್ನನ್ನು ಅಡಗಿಸಿಕೊಂಡು, ಮಲಗುವ ಕೋಣೆಯ ಕಡೆಗೆ ನಡೆದ. ಚೀಲ ಅದೇ ಜಾಗದಲ್ಲಿ ಕೆಳಗೆ ಬಿದ್ದಿತ್ತು.
ಆಂಗಿಯನ್ನು ಕಳಚಲಿಲ್ಲ. ಪ್ಯಾಂಟನ್ನು ಮಾತ್ರ ಆತುರವಾಗಿ ಬಿಚ್ಚಿದ. ನನ್ನ ಬಟ್ಟೆಗಳನ್ನು ಕಣ್ಣ ಕಳಚುತ್ತಾನೆ ಎಂದು ಕಾದಿದ್ದೆ. ದೇಹದ ಪ್ರತಿ ಅಂಗಗಳೂ ಹೇಗೆ ಬದಲಾಗಿದೆ ಎಂದು ತೋರಿಸಲು ಬಯಸಿದೆ.
ಭಾಗ 16 : Literature: ನೆರೆನಾಡ ನುಡಿಯೊಳಗಾಡಿ; ಕಣ್ಣ, ನೀನು ಯಾವ ಬಾಗಿಲ ಮೂಲಕ ಒಳಗೆ ಬರುತ್ತೀಯಾ?
ಹೂವಲ್ಲಿ ತಂಗಿರುವ ಹಿಮದ ಹನಿಯನ್ನು ಸವಿಯುವುದು, ಹಣ್ಣಾದ ಹಣ್ಣಿನ ರಸವನ್ನು ಹೀರುವುದು, ನೀರಿನ ಆಳಕ್ಕೆ ಇಳಿದು ಸವಿನೀರನ್ನು ಕುಡಿಯುವುದು ಎಂದು ಪ್ರತಿ ಘಟ್ಟವನ್ನೂ ಅವನನ್ನು ದಾಟಿಸಬೇಕು. ಇದ್ದಕ್ಕಿದ್ದಂತೆ ನನ್ನ ಮೇಲೆ ಭಾರ ಇಳಿಯಿತು. ಕಣ್ಣ ಹರಡಿಕೊಂಡಿದ್ದ.
“ಕಣ್ಣ, ತಡಿ ತಡಿ” ಎಂದೇ. ಅಷ್ಟರಲ್ಲಿ ಅರ್ಧ ದಾಟಿದ್ದ. “ಸ್ವಲ್ಪ ತಡಿ, ಹೇಳೋದು ಕೇಳು.”
ಸೀರೆ ಸಹ ಜರುಗಿರಲಿಲ್ಲ. ಏದುರಿಸಿರು ಬಿಡುತ್ತಾ ಮೇಲೆ ಒರಗಿದ. ಕಣ್ಣನ ಬೆವರು ಅಂಟಂಟಾಗಿತ್ತು. ಬೆಟ್ಟ ಹತ್ತಲು ಪ್ರಾರಂಭವಾದ ಪಯಣ, ಪ್ರಸ್ಥಭೂಮಿಯಲ್ಲೇ ನಿಂತುಹೋಯಿತು. ಪ್ರೀತಿಯಿಂದ ಇರುವಾಗ ಕ್ಷಣವೂ ಕಾಣದ ದೇಹದ ಹೊರೆ ಈಗ ಹೆಚ್ಚಾಗಿ ಭಾರವಾಯಿತು.
ಬೆವರು ಅಡಗಿದ ಮೇಲೆ, ಟವಲಿನೊಂದಿಗೆ ಸ್ನಾನಕ್ಕೆ ಹೊರಟ.
ಯುದ್ಧಕ್ಕೆ ಕಹಳೆಯೂದಿ, ಸಿದ್ಧವಾಗಿದ್ದ ಸೈನ್ಯವನ್ನು ಚದುರಿಹೋಗಲು ಹೇಳುವಂತೆ ಮನಸ್ಸು ಕುಂದಿತು. ಅಮ್ಮನಿಗೆ ಅಭಿಷೇಕ ಮಾಡಲು ವಸ್ತುಗಳನ್ನು ಸಿದ್ಧವಾಗಿಟ್ಟು ಅಭಿಷೇಕ ಮಾಡದೆ, ಕರ್ಪೂರದ ಆರತಿ ಮಾತ್ರ ತೋರಿಸಿದಂತೆ ಶೂನ್ಯತೆ.
ಕಪ್ಪು ಪ್ರತಿಮೆಯ ದೇಹದಲ್ಲಿ ಎಣ್ಣೆಪಸೆಯ ಕಮಟು ವಾಸನೆ ಹರಡಿತು. “ಎದ್ದು, ಸರಿಯಾಗಿ ಮಲಗು” ಎಂದು ಕಣ್ಣ ಹೇಳಿ ಮುಖವನ್ನು ಒರೆಸಿಕೊಂಡು ಹೊರಗೆಹೋದ.
(ಮುಗಿಯಿತು)
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
ಇದನ್ನೂ ಓದಿ : Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ
Published On - 4:28 pm, Fri, 18 March 22