ಗಣೇಶನ ವಿಸರ್ಜನೆ ವೇಳೆ ಲೇಸರ್ ಬೆಳಕು ಬಿದ್ದು 6 ಯುವಕರ ಕಣ್ಣಲ್ಲಿ ರಕ್ತಸ್ರಾವ
ಲೇಸರ್ ಬೆಳಕು ಕಣ್ಣುಗಳಿಗೆ ತಾಗಿದ ನಂತರ ಈ ಯುವಕರಿಗೆ ಮೊದಲು ದೃಷ್ಟಿ ಮಸುಕಾಯಿತು. ಹೀಗಾಗಿ, ಅವರು ಕಣ್ಣುಗಳನ್ನು ಉಜ್ಜಿಕೊಂಡರು. ಆದರೆ, ಕಣ್ಣು ಉಜ್ಜಿಕೊಂಡಾಗ ಅವರ ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ನೇತ್ರ ತಜ್ಞರು ಅವರನ್ನು ತಪಾಸಣೆ ನಡೆಸಿದಾಗ ಈ ಯುವಕರ ಕಣ್ಣುಗಳಲ್ಲಿ ಸುಟ್ಟ ಗಾಯಗಳು ಕಂಡುಬಂದಿವೆ.

ಮುಂಬೈ: ಇತ್ತೀಚೆಗೆ ಅತಿಯಾದ ಶಬ್ದದಿಂದ ಡಿಜೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿ ಗಣೇಶನ ವಿಗ್ರಹದ ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ-ಲೇಸರ್ ಲೈಟ್ಗಳನ್ನು ನೋಡಿದ ಪರಿಣಾಮವಾಗಿ 6 ಜನರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಈ 6 ಮಂದಿ ಯುವಕರೂ ನಾಸಿಕ್ ಮೂಲದವರು. ಧುಲೆ, ಮುಂಬೈ ಮತ್ತು ಥಾಣೆಯಲ್ಲಿ ಕೂಡ ಇದೇ ರೀತಿಯ ದೃಷ್ಟಿ ಕಳೆದುಕೊಂಡ ರೋಗಿಗಳು ದಾಖಲಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಡಿಜೆ ಮತ್ತು ಲೇಸರ್ ಬೆಳಕು ಕಣ್ಣುಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಆತಂಕ ವ್ಯಕ್ತವಾಗುತ್ತಿದೆ.
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಹಾಕುವುದನ್ನು ನಿಷೇಧಿಸಲಾಗಿದೆ. ಆದರೆ, 8 ವರ್ಷಗಳ ಬಳಿಕ ನಾಸಿಕ್ನಲ್ಲಿ ಡಿಜೆ ಹಾಕಲು ಅನುಮತಿ ನೀಡಲಾಯಿತು. ಹಾಗಾಗಿ, ಈ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದ್ದರು. ಈ ಮೆರವಣಿಗೆಗಳಲ್ಲಿ ಲೇಸರ್ ಲೈಟ್ಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಈ ಡಿಜೆ-ಲೇಸರ್ ಬೆಳಕನ್ನು ನೇರವಾಗಿ ನೋಡಿದ 6 ಯುವಕರ ದೃಷ್ಟಿಯ ಮೇಲೆ ಭೀಕರ ಪರಿಣಾಮ ಬೀರಿದೆ.
ಇದನ್ನೂ ಓದಿ: Viral Video: ಗಣೇಶ ವಿಸರ್ಜನೆ ವೇಳೆ ಭರ್ಜರಿ ಸ್ಟೆಪ್ ಹಾಕಿದ ಹೈದರಾಬಾದ್ ಪೊಲೀಸ್; ವಿಡಿಯೋ ವೈರಲ್
ಲೇಸರ್ ಬೆಳಕು ಕಣ್ಣುಗಳಿಗೆ ತಾಗಿದ ನಂತರ ಈ ಯುವಕರಿಗೆ ಮೊದಲು ದೃಷ್ಟಿ ಮಸುಕಾಯಿತು. ಹೀಗಾಗಿ, ಅವರು ಕಣ್ಣುಗಳನ್ನು ಉಜ್ಜಿಕೊಂಡರು. ಆದರೆ, ಕಣ್ಣು ಉಜ್ಜಿಕೊಂಡಾಗ ಅವರ ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ಇದರಿಂದ ಯುವಕರಿಗೆ ಭಯವಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ನೇತ್ರ ತಜ್ಞರು ಅವರನ್ನು ತಪಾಸಣೆ ನಡೆಸಿದಾಗ ಈ ಯುವಕರ ಕಣ್ಣಿಗೆ ಗಾಯವಾಗಿರುವುದು ಕಂಡು ಬಂದಿದೆ. ಕೆಲವರ ಕಣ್ಣುಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಂಡಿವೆ. ಕೆಲವರ ಕಣ್ಣಿನ ರೆಪ್ಪೆಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಕೆಲವು ಯುವಕರ ಕಣ್ಣುಗಳಲ್ಲಿ ಸುಟ್ಟ ಗಾಯಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಣ್ಣಿನ ದೃಷ್ಟಿಶಕ್ತಿ ವೃದ್ಧಿಸಿಕೊಳ್ಳಲು ಪ್ರತಿದಿನ ಈ ಪುಡಿಯನ್ನು ತಿನ್ನಿ.. ಕನ್ನಡಕ ಪಕ್ಕಕ್ಕೆ ಇಟ್ಟುಬಿಡಿ
ಸಾಮಾನ್ಯವಾಗಿ ವೆಲ್ಡಿಂಗ್ ಕೆಲಸವನ್ನು ಮಾಡಿದರೆ ಕಣ್ಣುಗಳಲ್ಲಿ ಕಡಿತ ಅಥವಾ ಸುಟ್ಟಗಾಯಗಳು ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಈ ಯುವಕರು ವೆಲ್ಡಿಂಗ್ ಕೆಲಸವನ್ನು ಮಾಡಿರಲಿಲ್ಲ ಅಥವಾ ವೆಲ್ಡಿಂಗ್ ಆಗುವಾಗ ಅತ್ತ ಹೋಗಿರಲೂ ಇಲ್ಲ. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಈ ಯುವಕರು ಕುಣಿಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಮೆರವಣಿಗೆಗಳಲ್ಲಿ ಡಿಜೆ ಮತ್ತು ಲೇಸರ್ ದೀಪಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಹೀಗಾಗಿ, ಆ ಲೇಸರ್ ಬೆಳಕೇ ಆ ಯುವಕರ ಕಣ್ಣಿನ ದೃಷ್ಟಿಯ ತೊಂದರೆಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಈ ಯುವಕರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ.