78 ವರ್ಷ ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಬೇಕಿತ್ತು; ಸದ್ಗುರು ಅಭಿಮತ
"ಜಗತ್ತಿನಲ್ಲಿ ಯಾವುದೇ ಬೇರೆ ಬೇರೆ ರಾಷ್ಟ್ರಗಳಿಲ್ಲದಿದ್ದರೆ, ಜಗತ್ತಿನಲ್ಲಿ ಯಾವುದೇ ಗಡಿಗಳಿಲ್ಲದಿದ್ದರೆ ಅದು ಅದ್ಭುತವಾಗುತ್ತಿತ್ತು. ಆದರೆ ನಾವು ಇನ್ನೂ ಗಡಿಯ ಅಸ್ತಿತ್ವದ ಮಟ್ಟದಲ್ಲಿದ್ದೇವೆ. ಇದ್ದಕ್ಕಿದ್ದಂತೆ, ನಾಳೆ ನಾವು ಎಲ್ಲರನ್ನೂ ಅಪ್ಪಿಕೊಂಡು ಅದ್ಭುತವಾಗಿ ಬದುಕುತ್ತೇವೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಅದು ಈಗ ಒಂದು ಮೂರ್ಖತನದ ಚಿಂತನೆಯಾಗಿದೆ" ಎಂದು ಸದ್ಗುರು ಹೇಳಿದ್ದಾರೆ. ಸಿಲಿಗುರಿ ಕಾರಿಡಾರ್ ವಿವಾದದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಡಿಸೆಂಬರ್ 29: ಬಾಂಗ್ಲಾದೇಶದ ಬೆದರಿಕೆಗಳ ನಡುವೆಯೇ ಸಿಲಿಗುರಿ ಕಾರಿಡಾರ್ ಬಗ್ಗೆ ಇಶಾ ಫೌಂಡೇಶನ್ನ (Isha Foundation) ಸಂಸ್ಥಾಪಕ ಸದ್ಗುರು (Sadhguru) ಪ್ರತಿಕ್ರಿಯೆ ನೀಡಿದ್ದಾರೆ. “78 ವರ್ಷಗಳಷ್ಟು ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಿಕೊಂಡಿದ್ದರೆ ಈ ಬಿಕ್ಕಟ್ಟು ಎದುರಾಗುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ. ಇದನ್ನು ದಶಕಗಳ ಹಿಂದೆಯೇ ಸರಿಪಡಿಸಬೇಕಾಗಿತ್ತು. ಚಿಕನ್ ನೆಕ್ ಎಂದು ಕರೆಯಲ್ಪಡುವ ಈ ಜಾಗವನ್ನು ಆನೆಯ ಕುತ್ತಿಗೆಯಾಗಿ ಮಾಡಬೇಕಿದೆ ಎಂದಿದ್ದಾರೆ.
ಸಿಲಿಗುರಿ ಕಾರಿಡಾರ್ ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೀಡಿದ ಹೇಳಿಕೆಗಳ ಕುರಿತು ಬೆಂಗಳೂರಿನಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಎಕ್ಸ್ನಲ್ಲಿ ತಮ್ಮ ಸಂವಾದದ ವಿಡಿಯೋವನ್ನು ಹಂಚಿಕೊಂಡ ಸದ್ಗುರು, “ಸಿಲಿಗುರಿ ಕಾರಿಡಾರ್ ಭಾರತದ ವಿಭಜನೆಯಿಂದ ಸೃಷ್ಟಿಸಲ್ಪಟ್ಟ 78 ವರ್ಷಗಳಷ್ಟು ಹಳೆಯದಾದ ಅಸಂಗತತೆಯಾಗಿದ್ದು, ಇದನ್ನು 1971ರಲ್ಲಿಯೇ ಸರಿಪಡಿಸಬೇಕಾಗಿತ್ತು. ಈಗ ಅದರಿಂದ ಭಾರತ ದೇಶದ ಸಾರ್ವಭೌಮತ್ವಕ್ಕೆ ಬಹಿರಂಗವಾಗಿ ಬೆದರಿಕೆ ಉಂಟಾಗಿದೆ. ಚಿಕನ್ ಅನ್ನು ಪೋಷಿಸಿ ಅದನ್ನು ಆನೆಯಾಗಿ ವಿಕಸನಗೊಳಿಸುವ ಸಮಯ ಬಂದಿದೆ” ಎಂದು ಸದ್ಗುರು ಹೇಳಿದ್ದಾರೆ.
Siliguri Corridor is a 78-year-old anomaly created by Bharat’s partition, which should have been corrected in 1971. Now that there is an open threat to the nation’s sovereignty, it is time to nourish the chicken and allow it to evolve into an elephant. -Sg pic.twitter.com/oHyhZ03y4l
— Sadhguru (@SadhguruJV) December 28, 2025
ಇದನ್ನೂ ಓದಿ: ಅಂಗವಿಕಲರಿಗಾಗಿ ಮಿರಾಕಲ್ ಆಫ್ ಮೈಂಡ್ ಧ್ಯಾನ ಪರಿಚಯಿಸಿದ ಸದ್ಗುರುವಿನ ಇಶಾ ಫೌಂಡೇಷನ್
“ಬಹುಶಃ 1946-47ರಲ್ಲಿ ನಮಗೆ ಗಡಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿರಲಿಲ್ಲ. ಆದರೆ 1972ರಲ್ಲಿ ನಮಗೆ ಅಧಿಕಾರವಿತ್ತು. ಆದರೂ ನಾವು ಅದನ್ನು ಸರಿ ಮಾಡಲಿಲ್ಲ. ಈಗ, ಜನರು ಅದರ ಬಗ್ಗೆ ಚರ್ಚಿಸುವಂತಾಗಿದೆ, ಬೇರೆ ದೇಶ ನಮಗೆ ಬೆದರಿಕೆ ಹಾಕುವಂತಾಗಿದೆ” ಎಂದು ಅವರು ಹೇಳಿದ್ದಾರೆ.
“ಈ ಅಸಂಗತತೆ ಕೇವಲ 78 ವರ್ಷಗಳ ಹಿಂದೆ ಸಂಭವಿಸಿದೆ. ಅದಕ್ಕೆ ಕೆಲವು ತಿದ್ದುಪಡಿ ಅಗತ್ಯವಿದೆ. ತಿದ್ದುಪಡಿ ಆಗಬೇಕು. ನಾವು ಕೋಳಿಗೆ ಚೆನ್ನಾಗಿ ಆಹಾರ ನೀಡಬೇಕು ಮತ್ತು ಅದನ್ನು ಆನೆಯನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಕೋಳಿಗಿಂತಲೂ ಆನೆಯ ಕುತ್ತಿಗೆಯನ್ನು ನಿಭಾಯಿಸುವುದು ಸುಲಭ” ಎಂದು ಸದ್ಗುರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




