ಕಿಡಿಗೇಡಿತನ; ಆರ್ಎಸ್ಎಸ್-ಬಿಜೆಪಿ ಕುರಿತ ದಿಗ್ವಿಜಯ ಸಿಂಗ್ ಹೊಗಳಿಕೆಗೆ ರಾಹುಲ್ ಗಾಂಧಿ ಅಸಮಾಧಾನ
ಆರ್ಎಸ್ಎಸ್-ಬಿಜೆಪಿ ಕುರಿತು ಹೊಗಳಿ ಪೋಸ್ಟ್ ಮಾಡುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ಉಂಟುಮಾಡಿದ್ದರು. ಈ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಬಿಜೆಪಿ ಮತ್ತು ಆರ್ಎಸ್ಎಸ್ನ ಸಂಘಟನಾತ್ಮಕ ಬಲವನ್ನು ಸಾರ್ವಜನಿಕವಾಗಿ ಹೊಗಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ಡಿಸೆಂಬರ್ 29: ಆರ್ಎಸ್ಎಸ್-ಬಿಜೆಪಿಯಿಂದ ನಮ್ಮ ಪಕ್ಷ ಕಲಿಯುವುದಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಹೈಕಮಾಂಡ್ನ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಮುಖಾಮುಖಿಯಾಗಿ ಭೇಟಿಯಾದರು.
ಮೂಲಗಳ ಪ್ರಕಾರ, ರಾಹುಲ್ ಗಾಂಧಿ ದಿಗ್ವಿಜಯ ಸಿಂಗ್ ಅವರೊಂದಿಗೆ ಕೈಕುಲುಕುತ್ತಾ, “ನೀವು ನಿನ್ನೆ ಕಿಡಿಗೇಡಿತನ ಮಾಡಿದ್ದೀರಿ” ಎಂದು ತಮಾಷೆಯಾಗಿ ಹೇಳಿದ್ದಾರೆ. ಇದು ದಿಗ್ವಿಜಯ ಸಿಂಗ್ ಸುತ್ತಲೂ ನಿಂತಿದ್ದ ನಾಯಕರಲ್ಲಿ ನಗು ಮೂಡಿಸಿತು. ಅವರಲ್ಲಿ ಸೋನಿಯಾ ಗಾಂಧಿ ಕೂಡ ಇದ್ದರು ಎನ್ನಲಾಗಿದೆ.
ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ
ಶನಿವಾರ ದಿಗ್ವಿಜಯ ಸಿಂಗ್ ಅವರು ಆರ್ಎಸ್ಎಸ್-ಬಿಜೆಪಿ ಮೈತ್ರಿಕೂಟವನ್ನು ಶ್ಲಾಘಿಸಿದ್ದರು. ಎಲ್.ಕೆ ಅಡ್ವಾಣಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದ ದಿಗ್ವಿಜಯ ಸಿಂಗ್ ಸಾಮಾನ್ಯ ಕಾರ್ಯಕರ್ತ ಉನ್ನತ ಹುದ್ದೆಗೇರಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ನಾನು ಈ ಫೋಟೋವನ್ನು ಗಮನಿಸಿದೆ. ಇದು ತುಂಬಾ ಪ್ರಭಾವಶಾಲಿ ಫೋಟೋ. ಒಬ್ಬ ತಳಮಟ್ಟದ ಆರ್ಎಸ್ಎಸ್ ಸ್ವಯಂಸೇವಕ ಮತ್ತು ಜನಸಂಘ, ಬಿಜೆಪಿ ಕಾರ್ಯಕರ್ತ ತನ್ನ ಪಕ್ಷದ ನಾಯಕರ ಪಾದಗಳ ಕೆಳಗೆ ನೆಲದ ಮೇಲೆ ಕುಳಿತು ಹೇಗೆ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾದರು ಎಂಬುದನ್ನು ನಾವು ಗಮನಿಸಬೇಕು. ಇದು ಸಂಘಟನೆಯ ಶಕ್ತಿ. ಜೈ ಸೀತಾ ರಾಮ್” ಎಂದು ದಿಗ್ವಿಜಯ ಸಿಂಗ್ ಪೋಸ್ಟ್ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




