ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ನೀಟ್ ಪ್ರತಿಭಟನೆಗಳಿಂದ ಖ್ಯಾತಿ ಗಳಿಸಿದ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ಆರ್‌ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ. ಅಭಿಜೀತ್ ಅವರ ದುಬಾರಿ ವಿದೇಶಿ ಶಿಕ್ಷಣದ ವೆಚ್ಚ ಮತ್ತು ಸಿಜೆಪಿ ಸಂಸ್ಥೆಯ ನಿಧಿ ಸಂಗ್ರಹಣೆಯ ಕುರಿತು ಚುನಾವಣಾ ಆಯೋಗ ಮತ್ತು ಜಿಎಸ್‌ಟಿ ಅಧಿಕಾರಿಗಳಿಂದ ತನಿಖೆಗೆ ಆಗ್ರಹಿಸಲಾಗಿದೆ. ನೋಂದಾಯಿತವಲ್ಲದ ಡಿಜಿಟಲ್ ವೇದಿಕೆಗಳ ಮೂಲಕ ಹಣ ಸಂಗ್ರಹಣೆಯ ಕಾನೂನುಬದ್ಧತೆ ಬಗ್ಗೆ ಚರ್ಚೆ ಶುರುವಾಗಿದೆ.

ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ
ಅಭಿಜೀತ್ ದೀಪ್ಕೆ

Updated on: Aug 02, 2026 | 2:56 PM

ನವದೆಹಲಿ, ಆಗಸ್ಟ್​ 02: ‘ನೀಟ್-ಯುಜಿ’ (NEET-UG) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿ ಪಡೆದ ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿದೇಶಿ ಶಿಕ್ಷಣದ ಖರ್ಚು ಹಾಗೂ ನಿಧಿ ಸಂಗ್ರಹಣೆಯ ಕುರಿತು ಆರ್‌ಟಿಐ (RTI) ಕಾರ್ಯಕರ್ತರೊಬ್ಬರು ಚುನಾವಣಾ ಆಯೋಗ ಮತ್ತು ಜಿಎಸ್‌ಟಿ (GST) ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಎಂಬುವವರು, ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್‌ರಾವ್ ದೀಪ್ಕೆ ಅವರ ಆರ್ಥಿಕ ಹಿನ್ನೆಲೆ ಹಾಗೂ ಸಿಜೆಪಿ ಸಂಸ್ಥೆಯ ನಿಧಿ ಸಂಗ್ರಹಣೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಯಾರೀ ಅಭಿಜೀತ್ ದೀಪ್ಕೆ? ಅವರ ಶಿಕ್ಷಣ ಮತ್ತು ಹಿನ್ನೆಲೆ
ಆಮ್ ಆದ್ಮಿ ಪಾರ್ಟಿಯಲ್ಲಿ ಕಾರ್ಯ: 2020 ರಿಂದ2023 ರವರೆಗೆ ಆಮ್ ಆದ್ಮಿ ಪಾರ್ಟಿಯ (AAP) ಡಿಜಿಟಲ್ ಹಾಗೂ ಮೀಮ್ಸ್ ಪ್ರಚಾರ ಪಡೆಗಳಲ್ಲಿ ಅಭಿಜೀತ್ ಕೆಲಸ ಮಾಡಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಪತ್ರಿಕೋದ್ಯಮ ಮುಗಿಸಿದ ನಂತರ, ಬೋಸ್ಟನ್ ವಿಶ್ವವಿದ್ಯಾಲಯದಿಂದ ‘ಸಾರ್ವಜನಿಕ ಸಂಪರ್ಕ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಲಡಾಖ್ ಮೂಲದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೊಂದಿಗೆ ‘ನೀಟ್’ ಪರೀಕ್ಷಾ ಅಕ್ರಮದ ವಿರುದ್ಧ ಜಂಟಿ ಆನ್‌ಲೈನ್ ಅಭಿಯಾನ ನಡೆಸಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರು.

ಆರ್‌ಟಿಐ ಕಾರ್ಯಕರ್ತನಿಂದ ಸಾಲು ಸಾಲು ದೂರುಗಳು
ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅಭಿಜೀತ್ ಅವರ ತಂದೆ, ತಮ್ಮ ಮಗನನ್ನು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದಿಸಲು ಭಾರಿ ವೆಚ್ಚ ಭರಿಸಿದ್ದು ಹೇಗೆ? ಅವರ ಆಸ್ತಿ ವಿವರ ತನಿಖೆಯಾಗಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ. ಸಿಜೆಪಿಯು ‘ಜನಪ್ರತಿನಿಧಿ ಕಾಯ್ದೆ 1951’ರ ಅಡಿಯಲ್ಲಿ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಮನವಿ ಮಾಡಲಾಗಿದೆ.

ಮತ್ತಷ್ಟು ಓದಿ: ಬಿಹಾರ, ಅಸ್ಸಾಂ ಬೆನ್ನಲ್ಲೇ ಪಶ್ಚಿಮ ಬಂಗಾಳದಿಂದಲೂ ನೀಟ್ ಪ್ರತಿಭಟನಾಕಾರರಿಗೆ ಅಭಯ: ಪ್ರಕರಣ ಹಿಂಪಡೆಯಲು ನಿರ್ಧಾರ, ಕ್ರಿಮಿನಲ್‌ಗಳಿಗೆ ಇಲ್ಲ ವಿನಾಯಿತಿ

ನೀಟ್ ಪ್ರತಿಭಟನಾಕಾರರ ಕಾನೂನು ಹೋರಾಟಕ್ಕಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು 1 ಕೋಟಿ ರೂ. ಕೊಡುಗೆ ನೀಡುವುದಾಗಿ ಘೋಷಿಸಿದ್ದರು. ಈ ಹಣಕ್ಕೆ ಶೇ. 18 ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆಯೇ ಎಂದು ಪರಿಶೀಲಿಸುವಂತೆ ಕೇಂದ್ರ ಜಿಎಸ್‌ಟಿ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮೀಮ್ಸ್‌ ಮತ್ತು ವಿಡಂಬನೆಯ ಮೂಲಕ ಯುವಜನತೆಯನ್ನು ತಲುಪುವುದು ಭಾರತೀಯ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ, ನೋಂದಾಯಿತವಲ್ಲದ ಇಂತಹ ಡಿಜಿಟಲ್ ವೇದಿಕೆಗಳು ‘ಕಾನೂನು ರಕ್ಷಣಾ ನಿಧಿ’ಹೆಸರಿನಲ್ಲಿ ಹಣ ಸಂಗ್ರಹಿಸುವುದು ಕಾನೂನು ಮತ್ತು ತೆರಿಗೆ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us