AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್

ಎಐಎಡಿಎಂಕೆ ಬಂಡಾಯ ಶಾಸಕರ ವಿರುದ್ಧ ಪಳನಿಸ್ವಾಮಿ ದೊಡ್ಡ ಕ್ರಮ ಕೈಗೊಂಡಿದ್ದಾರೆ. ಸಿ.ವಿ. ಷಣ್ಮುಗಂ, ಎಸ್.ಪಿ. ವೇಲುಮಣಿ ಅವರನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಮತದಾನದ ವಿಚಾರದಲ್ಲಿ ಅಸಮಾಧಾನದಿಂದ ಎಐಎಡಿಎಂಕೆ ಸಿ.ವಿ ಷಣ್ಮುಗಂ ಮತ್ತು ಇತರರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದೆ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಇಂದು ಪಕ್ಷದ ನಾಯಕರಾದ ವೇಲುಮಣಿ ಮತ್ತು ಷಣ್ಮುಗಂ ಅವರನ್ನು ತಮ್ಮ ಹುದ್ದೆಗಳಿಂದ ವಜಾಗೊಳಿಸುವ ಮೂಲಕ ಚುರುಕು ಮುಟ್ಟಿಸಿದ್ದಾರೆ. ಇದರಿಂದಾಗಿ ತಮಿಳುನಾಡಿನಲ್ಲಿ ಎನ್​ಡಿಎ ಮಿತ್ರಪಕ್ಷವಾದ ಎಐಎಡಿಎಂಕೆ ಇಬ್ಭಾಗವಾದಂತಾಗಿದೆ.

ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್
EPS
ಸುಷ್ಮಾ ಚಕ್ರೆ
|

Updated on: May 13, 2026 | 9:44 PM

Share

ಚೆನ್ನೈ, ಮೇ 13: ತಮಿಳುನಾಡಿನಲ್ಲಿ ಒಂದೆಡೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಯಾಗಿದೆ. ಇನ್ನೊಂದೆಡೆ ಎಐಎಡಿಎಂಕೆ (AIADMK) ವಿಭಜನೆಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣವಾದಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಕೂಡ ಇಬ್ಭಾಗವಾಗಿದೆ. ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 25 ಎಐಎಡಿಎಂಕೆ ಶಾಸಕರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಬೆಂಬಲ ನೀಡಿತ್ತು. ಇದಾದ ನಂತರ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಬಂಡಾಯ ನಾಯಕರನ್ನು ವಜಾಗೊಳಿಸಿದ್ದಾರೆ. ಬಂಡಾಯ ನಾಯಕರು ಎಐಎಡಿಎಂಕೆ ನಾಯಕನ ಸ್ಥಾನದಿಂದ ಪಳನಿಸ್ವಾಮಿ ಅವರನ್ನು ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಪಳನಿಸ್ವಾಮಿಯೇ ಬಂಡಾಯ ನಾಯಕರನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ಶಾಕ್ ನೀಡಿದ್ದಾರೆ.

ಇದೀಗ ತಮಿಳುನಾಡಿನಲ್ಲಿ ಇನ್ನೊಂದು ಗೊಂದಲ ಉಂಟಾಗಿದೆ. ಟಿವಿಕೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಒಂದು ಷರತ್ತನ್ನು ವಿಧಿಸಿತ್ತು. ಬಿಜೆಪಿ ಅಥವಾ ಕೋಮು ಶಕ್ತಿಗಳನ್ನು ಸರ್ಕಾರದ ಮೈತ್ರಿಯಲ್ಲಿ ಸೇರಿಸಿಕೊಳ್ಳಬಾರದು ಎಂಬ ಏಕೈಕ ಷರತ್ತು ವಿಧಿಸಲಾಗಿತ್ತು. ಅದಕ್ಕೆ ವಿಜಯ್ ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಇದೀಗ ಬಹುಮತಕ್ಕೆ ಬೆಂಬಲ ನೀಡಿರುವ 25 ಎಐಎಡಿಎಂಕೆ ಶಾಸಕರು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ಇದಕ್ಕೆ ಕಾಂಗ್ರೆಸ್ ಒಪ್ಪಲಿದೆಯೇ? ಅಥವಾ ಎಐಎಡಿಎಂಕೆಯ ಬಂಡಾಯ ಬಣ ಎನ್​ಡಿಎ ಮೈತ್ರಿಕೂಟದಿಂದ ಹೊರಬರಲಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: 2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ

ತಮಿಳುನಾಡಿನಲ್ಲಿ 4 ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಟಿವಿಕೆ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದಿದೆ. ಎಐಎಡಿಎಂಕೆಯ 25 ಬಂಡಾಯ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ವಿಜಯ್ ಸದನದ ವಿಶ್ವಾಸ ಗಳಿಸಿದರು. 234 ಸ್ಥಾನಗಳ ವಿಧಾನಸಭೆಯಲ್ಲಿ 59 ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷ ಡಿಎಂಕೆ, ಪ್ರತಿಭಟಿಸಿ ಕಲಾಪದ ಸಮಯದಲ್ಲಿ ಸಭಾತ್ಯಾಗ ಮಾಡಿತು.

ಹೀಗಾಗಿ, ಎಐಎಡಿಎಂಕೆ ಪಕ್ಷದ ವಿಪ್‌ ಜಾರಿಯಲ್ಲಿದ್ದರೂ ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ಮತ ಚಲಾಯಿಸಿದ 25 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿರುವುದಾಗಿ ಎಐಎಡಿಎಂಕೆ ತಿಳಿಸಿದೆ. ಇದು ಇಪಿಎಸ್ ನಾಯಕತ್ವದಲ್ಲಿ ಪಕ್ಷದಲ್ಲಿನ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ. ಇದೀಗ 13 ಹಾಲಿ ಶಾಸಕರು ಸೇರಿದಂತೆ ಒಟ್ಟು 29 ಎಐಎಡಿಎಂಕೆ ನಾಯಕರನ್ನು ಜಿಲ್ಲಾ ಕಾರ್ಯದರ್ಶಿ ಸ್ಥಾನಗಳು ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಷಣ್ಮುಗಂ ಮತ್ತು ವೇಲುಮಣಿ ಅವರಲ್ಲದೆ, ಆರ್.ಕಾಮರಾಜ್, ಸಿ.ವಿಜಯಭಾಸ್ಕರ್, ತಂಗಮಣಿ, ಕೆ.ಪಿ.ಅನ್ಬಜಗನ್, ಕೆ.ಸಿ.ವೀರಮಣಿ ಮತ್ತು ಎಂ.ಆರ್.ವಿಜಯಭಾಸ್ಕರ್ ಸೇರಿದಂತೆ ಹಲವಾರು ಹಿರಿಯ ಎಐಎಡಿಎಂಕೆ ನಾಯಕರನ್ನು ಸಹ ಅವರ ಹುದ್ದೆಗಳಿಂದ ವಜಾಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us