ಪಂಜಾಬ್ ಸರ್ಕಾರದ ವಿರೋಧದ ನಡುವೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಶ್ವನಿ ಕುಮಾರ್ ಮಿಶ್ರಾ ಪ್ರಮಾಣವಚನ ಸ್ವೀಕಾರ

ಪಂಜಾಬ್ ಸರ್ಕಾರದ ವಿರೋಧದ ನಡುವೆಯೂ ಅಶ್ವನಿ ಕುಮಾರ್ ಮಿಶ್ರಾ ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಂಜಾಬ್ ಲೋಕ ಭವನದಲ್ಲಿ ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ ಮುಖ್ಯ ನ್ಯಾಯಮೂರ್ತಿಯಾಗಿ ಅಶ್ವನಿ ಕುಮಾರ್ ಮಿಶ್ರಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ, ಹರಿಯಾಣದ ರಾಜ್ಯಪಾಲ ಪ್ರೊ. ಅಸಿಮ್ ಕುಮಾರ್ ಘೋಷ್ ಮತ್ತು ಹರಿಯಾಣ ಮುಖ್ಯಮಂತ್ರಿ ನೈಬ್ ಸೈನಿ ಉಪಸ್ಥಿತರಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಈ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ಪಂಜಾಬ್ ಸರ್ಕಾರದ ವಿರೋಧದ ನಡುವೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಶ್ವನಿ ಕುಮಾರ್ ಮಿಶ್ರಾ ಪ್ರಮಾಣವಚನ ಸ್ವೀಕಾರ
Punjab Cm Bhagwant Mann And Justice Ashwani Kumar Mishra
Image Credit source: TV9

Updated on: Sep 07, 2026 | 3:33 PM

ಚಂಡೀಗಢ, ಸೆಪ್ಟೆಂಬರ್ 7: ಪಂಜಾಬ್ ಸರ್ಕಾರದ ತೀವ್ರ ಆಕ್ಷೇಪಣೆ ಹಾಗೂ ಪ್ರತಿಭಟನೆಯ ನಡುವೆಯೂ, ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜ್ಯಪಾಲರು ನೂತನ ಮುಖ್ಯನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪಂಜಾಬ್-ಹರಿಯಾಣ ಹೈಕೋರ್ಟ್‌ನ ಹೊಸ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯನ್ನು ಪಂಜಾಬ್ ಸರ್ಕಾರದ ಒಪ್ಪಿಗೆಯಿಲ್ಲದೆ ಮಾಡಲಾಗಿದೆ ಎಂಬ ಪೋಸ್ಟ್ ಅನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಹಂಚಿಕೊಂಡಿದ್ದರು.

ಪಂಜಾಬ್ ಸರ್ಕಾರದ ಸಚಿವ ಹರ್ಪಾಲ್ ಸಿಂಗ್ ಚೀಮಾ ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಅವರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಹಿಂದೆ ಅನುಸರಿಸಿದ ವಿಧಾನವನ್ನು ಕೇಂದ್ರ ಸರ್ಕಾರ ಅನುಸರಿಸಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಪಂಜಾಬ್‌ನಲ್ಲಿ ಎಸ್‌ಎಡಿ ಜೊತೆ ಮೈತ್ರಿ ವದಂತಿಗೆ ತೆರೆ: ಎಲ್ಲಾ 117 ಸ್ಥಾನಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ ಎಂದ ಬಿಎಲ್​ ಸಂತೋಷ್

ಈ ಹಿಂದೆ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಮತ್ತು ಪಂಜಾಬ್‌ಗೆ ಸೇರಿದ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದಾಗ, ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಅವರ ನೇಮಕಾತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಹರ್ಪಾಲ್ ಸಿಂಗ್ ಚೀಮಾ ಹೇಳಿದರು. ಇದಾದ ನಂತರ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೊಲಿಜಿಯಂ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಅವರನ್ನು ವರ್ಗಾವಣೆ ಮಾಡಿ ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ ಹೊಸ ಹುದ್ದೆಯನ್ನು ನೀಡಿತು ಎಂದು ಅವರು ಹೇಳಿದರು.

ಸರ್ಕಾರದ ವಿರೋಧಕ್ಕೆ ಕಾರಣ:

ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಅವರ ನೇಮಕಾತಿಗೆ ಸಂಬಂಧಿಸಿದಂತೆ ಪಂಜಾಬ್‌ನ ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕೊಲಿಜಿಯಂ ಶಿಫಾರಸಿನ ಪ್ರಕ್ರಿಯೆ ಹಾಗೂ ಹಿರಿಯತನದ ಆಧಾರದ ಕುರಿತು ಪಂಜಾಬ್ ಸರ್ಕಾರ ಕೆಲವು ಆಕ್ಷೇಪಣೆಗಳನ್ನು ಎತ್ತಿ, ಈ ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಪಂಜಾಬ್ ಸರ್ಕಾರದ ಈ ಪ್ರತಿಭಟನಾತ್ಮಕ ನಿಲುವಿನ ಹಿನ್ನೆಲೆಯಲ್ಲಿ, ಪಂಜಾಬ್ ಸರ್ಕಾರದ ಪ್ರಮುಖ ನಾಯಕರು ಹಾಗೂ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಶಮನಕ್ಕೆ ಸಚಿನ್ ಪೈಲಟ್ ಎಂಟ್ರಿ: ಬಾಘೇಲ್ ಅಸ್ಸಾಂಗೆ ಶಿಫ್ಟ್, ಸುರ್ಜೇವಾಲಾಗೆ ಗುಜರಾತ್ ಹೆಚ್ಚುವರಿ ಜವಾಬ್ದಾರಿ

ಪಂಜಾಬ್ ಸರ್ಕಾರದ ವಿರೋಧದ ಹೊರತಾಗಿಯೂ, ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸು ಹಾಗೂ ಕೇಂದ್ರ ಕಾನೂನು ಸಚಿವಾಲಯದ ಅನುಮೋದನೆಯ ಮೇರೆಗೆ ರಾಷ್ಟ್ರಪತಿಯವರ ಆದೇಶದಂತೆ ಈ ಸಂವಿಧಾನಾತ್ಮಕ ನೇಮಕಾತಿ ಪೂರ್ಣಗೊಂಡಿದೆ. ನ್ಯಾಯಮೂರ್ತಿ ಅಶ್ವನಿ ಮಿಶ್ರಾ ಅವರ ಈ ನೇಮಕಾತಿಯು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಪಂಜಾಬ್ ಮಟ್ಟದಲ್ಲಿ ಹೊಸ ರಾಜಕೀಯ ಮತ್ತು ಕಾನೂನಾತ್ಮಕ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Mon, 7 September 26

Loading...
Unable to load recommendations.
Follow Us