AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sam Pitroda resigns: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ

ಭಾರತದ ಪೂರ್ವದ ಜನರು ಚೀನಾದವರಂತೆ, ಪಶ್ಚಿಮದವರು ಅರಬ್​​ನವರಂತೆ, ಉತ್ತರ ಭಾರತದ ಜನರು ಬಿಳಿಯರಂತೆ ಮತ್ತು ದಕ್ಷಿಣ ಭಾರತೀಯರು ಆಫ್ರಿಕದವರಂತೆ ಕಾಣುತ್ತಾರೆ. ಭಾರತದಂಥಾ ವೈವಿಧ್ಯಮ ದೇಶದಲ್ಲಿ ಮಾತ್ರ ಹೀಗೆ ಎಲ್ಲರನ್ನೂ ಒಟ್ಟಾಗಿ ಕಾಣಲು ಸಾಧ್ಯ ಎಂದು ಹೇಳಿ ವಿವಾದಕ್ಕೀಡಾಗಿದ್ದ ಸ್ಯಾಮ್ ಪಿತ್ರೋಡಾ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Sam Pitroda resigns: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ
ಸ್ಯಾಮ್ ಪಿತ್ರೋಡಾ
ರಶ್ಮಿ ಕಲ್ಲಕಟ್ಟ
|

Updated on:May 08, 2024 | 8:02 PM

Share

ದೆಹಲಿ ಮೇ 08: ಸ್ಯಾಮ್ ಪಿತ್ರೋಡಾ (Sam Pitroda) ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ (Indian Overseas Congress) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಅಂಗೀಕರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಅವರ ಸ್ವಂತ ಇಚ್ಛೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ದೇಶದ ವೈವಿಧ್ಯತೆಯನ್ನು ವಿವರಿಸುವಾಗ, ಭಾರತದ ಪೂರ್ವದ ಜನರು ಚೀನಾದವರಂತೆ, ಪಶ್ಚಿಮದವರು ಅರಬ್ನವರಂತೆ, ಉತ್ತರ ಭಾರತದ ಜನರು ಬಿಳಿಯರಂತೆ ಮತ್ತು ದಕ್ಷಿಣ ಭಾರತೀಯರು ಆಫ್ರಿಕದವರಂತೆ ಕಾಣುತ್ತಾರೆ. ಭಾರತದಂಥಾ ವೈವಿಧ್ಯಮಯ ದೇಶದಲ್ಲಿ ಮಾತ್ರ ಹೀಗೆ ಎಲ್ಲರನ್ನೂ ಒಟ್ಟಾಗಿ ಕಾಣಲು ಸಾಧ್ಯ ಎಂದು ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ ಹೇಳಿದ್ದರು. ಆದರೆ ಭಾರತೀಯರ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ್ದು ವಿವಾದಕ್ಕೀಡಾಗಿದೆ. ಪ್ರಧಾನಿ ಮೋದಿ ಪಿತ್ರೋಡಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು. 2004 ರ ಚುನಾವಣೆಯಲ್ಲಿ ಯುಪಿಎ ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ಆಹ್ವಾನಿಸಿದರು. 2009 ರಲ್ಲಿ, ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು.

ಸ್ಯಾಮ್ ಪಿತ್ರೋಡಾ ಅವರಿಗೆ ವಿವಾದಗಳೇನೂ ಹೊಸತಲ್ಲ, ಆದರೆ ಈ ಬಾರಿ ಅವರ ಕಾಂಗ್ರೆಸ್ ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು ಅವರ ಹೇಳಿಕೆ ದುರದೃಷ್ಟಕರ ಎಂದಿದೆ.

ಸ್ಯಾಮ್ ಪಿತ್ರೋಡಾ ವಿವಾದಿತ ಹೇಳಿಕೆಗಳು

ಪಿತ್ರಾರ್ಜಿತ ತೆರಿಗೆ: ಕಳೆದ ತಿಂಗಳು, ಸ್ಯಾಮ್ ಪಿತ್ರೋಡಾ ಅಮೆರಿಕಾದಲ್ಲಿ ಚಾಲ್ತಿಯಲ್ಲಿರುವ ಪಿತ್ರಾರ್ಜಿತ ತೆರಿಗೆಯ ಪರಿಕಲ್ಪನೆಯ ಬಗ್ಗೆ ಮಾತನಾಡುವಾಗ ಇವುಗಳು ಚರ್ಚಿಸಬೇಕಾದ ವಿಷಯಗಳಾಗಿವೆ ಎಂದು ಹೇಳಿದ್ದರು. “ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ ಅಮೆರಿಕನ್ ಡಾಲರ್  ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಮತ್ತು ಅವನು ಸತ್ತಾಗ ಅವನು ಕೇವಲ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು, 55 ಪ್ರತಿಶತವನ್ನು ಸರ್ಕಾರವು ದೋಚುತ್ತದೆ. ಅದು ಆಸಕ್ತಿದಾಯಕ ಕಾನೂನು. ಅದು ಏನು ಹೇಳುತ್ತದೆ ಅಂದರೆ, ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ನೀವು ಈಗ ಹೋಗುತ್ತಿದ್ದೀರಿ, ನೀವು ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು, ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನನಗೆ ನ್ಯಾಯೋಚಿತವಾಗಿದೆ, ”ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು. ಆದರೆ ಈ ಹೇಳಿಕೆಗಳು ವಿವಾದಕ್ಕೆ ಕಾರಣವಾದ ನಂತರ ಪಿತ್ರೋಡಾ ಅವರು ಯುಎಸ್‌ನಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿರುವುದಾಗಿ  ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದರು.

ರಾಮಮಂದಿರ ವಿವಾದ: ಜೂನ್ 2023 ರಲ್ಲಿ, ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯು ನಡುವೆ, ಸ್ಯಾಮ್ ಪಿತ್ರೋಡಾ ಅವರು ನಿರುದ್ಯೋಗ, ಹಣದುಬ್ಬರ, ಶಿಕ್ಷಣ ಮತ್ತು ಆರೋಗ್ಯದಂತಹ ಭಾರತದ ಪ್ರಮುಖ ಸಮಸ್ಯೆಗಳನ್ನು ದೇವಾಲಯಗಳು ಪರಿಹರಿಸುವುದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

1984 ಸಿಖ್ ವಿರೋಧಿ ದಂಗೆಗಳು: ಮೇ 2019 ರಲ್ಲಿ, ಸ್ಯಾಮ್ ಪಿತ್ರೋಡಾ ಅವರು 1984 ರ ಸಿಖ್-ವಿರೋಧಿ ದಂಗೆಗಳ ಬಗ್ಗೆ ಪ್ರಶ್ನಿಸಿದಾಗ “ಹುವಾ ತೋ ಹುವಾ” (ಆಗಿದ್ದು ಆಗಿ ಹೋಯ್ತು ) ಎಂದು ಹೇಳಿ ವಿವಾದಕ್ಕೀಡಾಗಿದ್ದರು.

ಪುಲ್ವಾಮಾ ದಾಳಿಯ ಹೇಳಿಕೆಗಳು: ಫೆಬ್ರವರಿ 2019 ರಲ್ಲಿ ಪುಲ್ವಾಮಾ ದಾಳಿಯ ನಂತರ, ಸ್ಯಾಮ್ ಪಿತ್ರೋಡಾ ಅವರು ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ಪ್ರತೀಕಾರದ ವೈಮಾನಿಕ ದಾಳಿಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಅವರ ಹೇಳಿಕೆಗಳು ಭಯೋತ್ಪಾದಕ ಘಟನೆಗಳಿಗೆ ಭಾರತದ ಪ್ರತಿಕ್ರಿಯೆ ಮತ್ತು ಅಂತಹ ಬಿಕ್ಕಟ್ಟುಗಳಿಗೆ ಸೂಕ್ತವಾದ ರಾಜತಾಂತ್ರಿಕ ವಿಧಾನದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದವು.

ಇದನ್ನೂ ಓದಿ: ಭಾರತೀಯರ ಬಗ್ಗೆ ಸ್ಯಾಮ್ ಪಿತ್ರೋಡಾ ಹೇಳಿಕೆ; ಕಾಂಗ್ರೆಸ್​​ನೊಂದಿಗಿನ ಮೈತ್ರಿ ಮುರಿದುಕೊಳ್ಳುತ್ತೀರಾ ಎಂದು ಸ್ಟಾಲಿನ್​​ಗೆ ಮೋದಿ ಸವಾಲು

ಸಂವಿಧಾನದ ಕುರಿತು ನೆಹರು ವರ್ಸಸ್ ಅಂಬೇಡ್ಕರ್: ಸುಧೀಂದ್ರ ಕುಲಕರ್ಣಿ ಅವರ ಲೇಖನವನ್ನು ಉಲ್ಲೇಖಿಸಿದ ಸ್ಯಾಮ್ ಪಿತ್ರೋಡಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಜವಾಹರಲಾಲ್ ನೆಹರು ಅವರು ಸಂವಿಧಾನ ರಚನೆಗೆ ಬಿಆರ್ ಅಂಬೇಡ್ಕರ್ ಅವರಿಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Wed, 8 May 24