ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ

ತಮ್ಮ ರಾಜೀನಾಮೆಯ ಬೆನ್ನಲ್ಲೇ ಅಣ್ಣಾಮಲೈ ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ಪಕ್ಷ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. "ಇಂದು ನಾವು ಹೊಸದೊಂದು ಚಳುವಳಿಯನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ರಾಜೀನಾಮೆಯ ನಂತರ ರಚನೆಯಾಗುವ ರಾಜಕೀಯ ಪಕ್ಷವು ತಮಿಳುನಾಡಿನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ" ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಅಣ್ಣಾಮಲೈ ಈ ನಿರ್ಧಾರ ಘೋಷಿಸುತ್ತಿದ್ದಂತೆ ಲಕ್ಷಾಂತರ ಜನರು ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ
Nainar Nagendran
Image Credit source: x

Updated on: Jun 06, 2026 | 7:21 PM

ಚೆನ್ನೈ, ಜೂನ್ 6: ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಮಾಜಿ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಮರುದಿನವೇ ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ತೀವ್ರ ಆಪಾದನೆ ಮಾಡಿದ್ದಾರೆ. ಅಣ್ಣಾಮಲೈ ಬಿಜೆಪಿಯ ಕೆಲವು ಸದಸ್ಯರ ಬ್ರೈನ್‌ವಾಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮಾಜಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಜೀನಾಮೆಯ ನಂತರ ಯಾರೊಬ್ಬರಿಗೂ ಪಕ್ಷ ತೊರೆಯಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈನಾರ್ ನಾಗೇಂದ್ರನ್, ಬಿಜೆಪಿ ಕಾರ್ಯಕರ್ತರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು. “ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಅದನ್ನು ಪಕ್ಷವು ಅಂಗೀಕರಿಸಿದೆ. ಆದರೆ, ತಮಗೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಆಶೀರ್ವಾದವಿದೆ ಎಂದು ಹೇಳಿಕೊಂಡು ರಾಜೀನಾಮೆ ನೀಡುವಂತೆ ನಮ್ಮ ಪಕ್ಷದ ಕೆಲವು ಸದಸ್ಯರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಆದರೆ, ಯಾರೊಬ್ಬರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ

ಬಿಜೆಪಿ ಕಾರ್ಯಕರ್ತರು ಯಾರ ಮಾತಿಗೂ ಮರುಳಾಗದೆ ರಾಜೀನಾಮೆ ನೀಡುವುದರಿಂದ ದೂರವಿರಬೇಕು ಎಂದು ನಾಗೇಂದ್ರನ್ ಮನವಿ ಮಾಡಿದ್ದಾರೆ. “ಬೇರೆ ಯಾವುದೇ ಮೂವ್‌ಮೆಂಟ್ ಅಥವಾ ಪಕ್ಷದ ಭಾಗವಾಗುವವರು ಬಿಜೆಪಿಯ ಸದಸ್ಯರಾಗಿ ಮುಂದುವರಿಯಲು ಸಾಧ್ಯವಿಲ್ಲ. ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಬಿಜೆಪಿ ಮುಖಂಡ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಅವರು ಇಷ್ಟು ವರ್ಷಗಳ ಕಾಲ ತಮಗೆ ಬೆಂಬಲ ನೀಡಿದ ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ತಮಿಳುನಾಡಿನ ಹಿತಾಸಕ್ತಿಗಳ ಕುರಿತು ಪಕ್ಷದೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯಗಳೇ ತಾವು ಪಕ್ಷದಿಂದ ಹೊರಬರಲು ಪ್ರಮುಖ ಕಾರಣ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us