ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ವಿವಾದದ ಕುರಿತು ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಮೌನ ಮುರಿದಿದ್ದಾರೆ. ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಈ ಘಟನೆಗೆ ಕಠಿಣ ಕ್ರಮಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ. ಇಂದಿನ ಟ್ರಸ್ಟ್ ಸಭೆಯಲ್ಲಿ ರಾಜೀನಾಮೆ ಮತ್ತು ಎಸ್​ಐಟಿ ವರದಿ ಪರಿಶೀಲಿಸಿ, ದೇಣಿಗೆ ರಕ್ಷಣೆಗೆ ಹೊಸ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.

ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ
ರಾಮ ಮಂದಿರ

Updated on: Jul 06, 2026 | 3:13 PM

ಅಯೋಧ್ಯೆ, ಜುಲೈ 06: ಅಯೋಧ್ಯೆ ರಾಮ ಮಂದಿರ(Ram Mandir)ದ ದೇಣಿಗೆ ಕಳ್ಳತನದ ಆರೋಪ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲ್ ದಾಸ್ ಅವರು ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ. ಟ್ರಸ್ಟ್‌ನ ಹೈವೋಲ್ಟೇಜ್ ಸಭೆಗೆ ಕೆಲವೇ ಗಂಟೆಗಳ ಮುನ್ನ ಅವರು ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲೇನಿದೆ? ಪಾಪ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ
ದೇಣಿಗೆ ದುರುಪಯೋಗದ ಆರೋಪಗಳಿಂದ ತಮಗೆ ತೀವ್ರ ನೋವುಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿರುವ ಮಹಂತ್ ನೃತ್ಯ ಗೋಪಾಲ್ ದಾಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಮಲಲ್ಲಾ ಮಂದಿರದ ದೇಣಿಗೆಯಲ್ಲಿ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿ ನನಗೆ ತೀವ್ರ ದುಃಖವಾಗಿದೆ. ಇದು ಕೋಟ್ಯಂತರ ಭಕ್ತರ ನಂಬಿಕೆಯ ವಿಷಯ. ಈ ಪಾಪದ ಕೃತ್ಯ ಎಸಗಿದ ಯಾರಿಗಾದರೂ ಕಠಿಣ ಶಿಕ್ಷೆಯಾಗಬೇಕು. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ, ಅವರು ತಪ್ಪಿತಸ್ಥರನ್ನು ಬಿಡುವುದಿಲ್ಲ. ಭಗವಾನ್ ರಾಮನನ್ನು ಯಾರೂ ವೈಯಕ್ತಿಕ ಲಾಭಕ್ಕಾಗಲಿ ಅಥವಾ ರಾಜಕೀಯಕ್ಕಾಗಲಿ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

 ಟ್ರಸ್ಟ್‌ನ ಮಹತ್ವದ ಸಭೆ
ಅಯೋಧ್ಯೆಯ ಮಣಿರಾಮ್ ದಾಸ್ ಛವಾನಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಟ್ರಸ್ಟ್‌ನ ತುರ್ತು ಸಭೆ ಕರೆಯಲಾಗಿದೆ. ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಯ ಮಧ್ಯೆ ನಡೆಯುತ್ತಿರುವ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಸಭೆಯ ಪ್ರಮುಖ ಅಜೆಂಡಾಗಳು

ರಾಜೀನಾಮೆ ಅಂಗೀಕಾರ?: ಜೂನ್ 26 ರಂದು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು.

ಎಸ್‌ಐಟಿ ವರದಿ: ದೇಣಿಗೆ ಕಳ್ಳತನದ ಕುರಿತು ಎಸ್‌ಐಟಿ ಸಿದ್ಧಪಡಿಸಿರುವ ಮಧ್ಯಂತರ ವರದಿಯ ಪರಿಶೀಲನೆ.

ಹೊಸ ವ್ಯವಸ್ಥೆ: ಇನ್ಮುಂದೆ ದೇಣಿಗೆ ಪೆಟ್ಟಿಗೆಗಳ ಹಣ ಎಣಿಕೆ ಮತ್ತು ಸುರಕ್ಷತೆಗೆ ಕಟ್ಟುನಿಟ್ಟಾದ ಫೂಲ್‌ಪ್ರೂಫ್ ವ್ಯವಸ್ಥೆ ತರುವುದು.

ವಿವಾದದ ಹಿನ್ನೆಲೆ ಏನು?
ರಾಮ ಮಂದಿರದ ಕಾಣಿಕೆಯಲ್ಲಿದ್ದ ಸುಮಾರು 7 ರಿಂದ 7.5 ಕೋಟಿ ರೂ. ಹಣ ನಾಪತ್ತೆಯಾಗಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಮೊದಲು ಆರೋಪಿಸಿದ್ದರು. ಆರಂಭದಲ್ಲಿ ಟ್ರಸ್ಟ್ ಇದನ್ನು ಸುಳ್ಳು ಎಂದಿತ್ತಾದರೂ, ವಿರೋಧ ಪಕ್ಷಗಳ ಒತ್ತಾಯದ ನಂತರ ಯುಪಿ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತು. ತನಿಖೆ ವೇಳೆ ಅಕ್ರಮ ಪತ್ತೆಯಾಗಿದ್ದು, ಪೊಲೀಸರು ಈಗಾಗಲೇ 8 ಜನರನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ. ಇದಾದ ಬಳಿಕ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದರು. ಸದ್ಯ ಇಂದಿನ ಸಭೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us