ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಅಯೋಧ್ಯೆ ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ ಕುರಿತು ಸಿಬಿಐ ತನಿಖೆಗೆ ಕೋರಿದ್ದ ಪಿಐಎಲ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇದೇ ವಿಷಯ ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ದೇಣಿಗೆ ದುರುಪಯೋಗ ಆರೋಪದ ಮೇಲೆ SIT ತನಿಖೆ ನಡೆಯುತ್ತಿದ್ದು, ನಾಲ್ವರು ಉದ್ಯೋಗಿಗಳನ್ನು ವಶಕ್ಕೆ ಪಡೆಯಲಾಗಿದೆ. ರಾಮ ಮಂದಿರ ಟ್ರಸ್ಟ್ ಆರೋಪಗಳನ್ನು ನಿರಾಕರಿಸಿದೆ.

ಲಕ್ನೋ, ಜುಲೈ 06: ಅಯೋಧ್ಯೆಯ ರಾಮ ಮಂದಿರ(Ram Mandir)ಕ್ಕೆ ಭಕ್ತರು ನೀಡಿರುವ ದೇಣಿಗೆ ದುರುಪಯೋಗವಾಗಿದೆ ಎಂಬ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಸ್ವೀಕರಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿರುವುದರಿಂದ, ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಅರ್ಜಿಯಲ್ಲೇನಿತ್ತು? ವಕೀಲ ಮೋಹಿತ್ ಅಶೋಕ್ ಎಂಬುವವರು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠಕ್ಕೆ ಈ ಅರ್ಜಿ ಸಲ್ಲಿಸಿದ್ದರು. ರಾಮ ಮಂದಿರದ ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣವನ್ನು ಟ್ರಸ್ಟ್ನ ಕೆಲವು ನೌಕರರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಕೇಂದ್ರ ತನಿಖಾ ದಳದಿಂದ (ಸಿಬಿಐ) ನಿಷ್ಪಕ್ಷಪಾತ ಹಾಗೂ ಕಾಲಮಿತಿಯ ತನಿಖೆಯಾಗಬೇಕು, ರಾಮ ಮಂದಿರ ಟ್ರಸ್ಟ್ನ ಖಾತೆಗಳನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರಿಂದ ವಿಶೇಷ ತನಿಖಾ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಮತ್ತಷ್ಟು ಓದಿ: ರಾಮ ಮಂದಿರ ಟ್ರಸ್ಟ್ಗೆ ಬಿಕ್ಕಟ್ಟು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ
ಹೈಕೋರ್ಟ್ ಹೇಳಿದ್ದೇನು? ನ್ಯಾಯಮೂರ್ತಿ ರಾಜನ್ ರಾಯ್ ಮತ್ತು ನ್ಯಾಯಮೂರ್ತಿ ಮಂಜಿವೆ ಶುಕ್ಲಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಅವರು ಇದೇ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸ್ವತಂತ್ರ ತನಿಖೆಗೆ ಆಗ್ರಹಿಸಿರುವುದನ್ನು ಕೋರ್ಟ್ ಗಮನಿಸಿತು. ಒಂದೇ ವಿಷಯದ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಅರ್ಜಿ ಇರುವಾಗ, ಇಲ್ಲಿ ಮತ್ತೊಂದು ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅದನ್ನು ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ ಮತ್ತು ಸದ್ಯದ ಪರಿಸ್ಥಿತಿ ದೇಣಿಗೆ ದುರುಪಯೋಗದ ಆರೋಪ ಕೇಳಿಬಂದ ತಕ್ಷಣ, ಯುಪಿ ಸರ್ಕಾರವು ಜೂನ್ 13 ರಂದು ಲಕ್ನೋ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಸದ್ಯ ತನಿಖೆ ನಡೆಯುತ್ತಿದೆ.
ಈಗಾಗಲೇ ಟ್ರಸ್ಟ್ನ ನಾಲ್ವರು ಶಂಕಿತ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ. ಹಾಗೂ ಇತ್ತೀಚಿನ ದಾಳಿಯಲ್ಲಿ ಸುಮಾರು 77 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ರಾಮ ಮಂದಿರ ಟ್ರಸ್ಟ್ ನೀಡಿದ ದೂರಿನ ಮೇರೆಗೆ ರಾಮಶಂಕರ್ ಯಾದವ್, ಮನೀಶ್ ಯಾದವ್ ಸೇರಿದಂತೆ ಒಟ್ಟು 8 ಉದ್ಯೋಗಿಗಳ ವಿರುದ್ಧ ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪದಡಿ ಅಯೋಧ್ಯೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ನಡುವೆ, ದೇಣಿಗೆ ದುರುಪಯೋಗದ ಆರೋಪಗಳನ್ನು ರಾಮ ಮಂದಿರ ಟ್ರಸ್ಟ್ ಸಂಪೂರ್ಣವಾಗಿ ನಿರಾಕರಿಸಿದೆ. ಭಕ್ತರು ನೀಡುವ ಪ್ರತಿಯೊಂದು ರೂಪಾಯಿ ಮತ್ತು ಆಭರಣಗಳನ್ನು ಕಟ್ಟುನಿಟ್ಟಾದ ನಿಯಮಗಳ ಪ್ರಕಾರ ಎಣಿಕೆ ಮಾಡಿ, ಬ್ಯಾಂಕ್ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




