
ನವದೆಹಲಿ, ಆಗಸ್ಟ್ 29: 1984ರ ಸಿಖ್ ವಿರೋಧಿ ದಂಗೆ ಪ್ರಕರಣದ ಅಪರಾಧಿ, ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ (Sajjan Kumar) ನಿಧನದ ನಂತರ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಅವರ ಮನೆಗೆ ಭೇಟಿ ನೀಡಿದ್ದ ದೆಹಲಿಯ ಮೂವರು ಬಿಜೆಪಿ ಸಂಸದರನ್ನು ಪಕ್ಷದ ಅಧ್ಯಕ್ಷ ನಿತಿನ್ ನವೀನ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಸ್ಟ್ 20ರಂದು ಮೃತಪಟ್ಟ ಸಜ್ಜನ್ ಕುಮಾರ್ 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ನಡೆದ ಸಿಖ್ಖರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಜೀವಾವಧಿ ಶಿಕ್ಷೆಗಳನ್ನು ಅನುಭವಿಸುತ್ತಿದ್ದರು.
ಬಿಜೆಪಿ ಸಂಸದರ ಈ ಭೇಟಿಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವರ್ಷದ ಏಪ್ರಿಲ್ನಲ್ಲಿ ಬಿಜೆಪಿಗೆ ಸೇರಿದ ಹಿರಿಯ ನಾಯಕ ಹಾಗೂ 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಪರ ಕಾನೂನು ಹೋರಾಟ ನಡೆಸಿದ್ದ ಹೆಚ್.ಎಸ್. ಫೂಲ್ಕಾ ಅವರು ಬಿಜೆಪಿ ಸಂಸದರ ಈ ನಡೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣ; ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ಗೆ ಜೀವಾವಧಿ ಶಿಕ್ಷೆ
“ಸಾಮೂಹಿಕ ಹಂತಕ ಸಜ್ಜನ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲು ಅವರ ನಿವಾಸಕ್ಕೆ ಮೂವರು ಸಂಸದರು ಭೇಟಿ ನೀಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಭೇಟಿ ತೀರಾ ಆಕ್ಷೇಪಾರ್ಹ. ಸೌಹಾರ್ದತೆ ಮತ್ತು ಸಾಂತ್ವನವೇನಿದ್ದರೂ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಇರಬೇಕು. ಈ ಮೂವರು ಸಂಸದರನ್ನು ಬಹಿಷ್ಕರಿಸುವಂತೆ ನಾನು ಕರೆ ನೀಡುತ್ತೇನೆ” ಎಂದು ಫೂಲ್ಕಾ ಹೇಳಿದ್ದಾರೆ.
ಸಜ್ಜನ್ ಕುಮಾರ್ ಮನೆಗೆ ಭೇಟಿ ನೀಡಿದ್ದ ಸಂಸದರ ವಿವರ:
ರಾಮ್ವೀರ್ ಸಿಂಗ್ ಬಿಧೂರಿ: ದಕ್ಷಿಣ ದೆಹಲಿ ಸಂಸದರು
ಕಮಲ್ಜೀತ್ ಸೆಹ್ರಾವತ್: ಪಶ್ಚಿಮ ದೆಹಲಿ ಸಂಸದರು
ಯೋಗೇಂದ್ರ ಚಂದೋಲಿಯಾ: ವಾಯುವ್ಯ ದೆಹಲಿ ಸಂಸದರು
ಈ ಮೂರೂ ಲೋಕಸಭಾ ಕ್ಷೇತ್ರಗಳು ಈ ಹಿಂದೆ ಸಜ್ಜನ್ ಕುಮಾರ್ ಕಾಂಗ್ರೆಸ್ ಸಂಸದರಾಗಿ ಪ್ರತಿನಿಧಿಸುತ್ತಿದ್ದ ‘ಹೊರ ದೆಹಲಿ’ ಕ್ಷೇತ್ರದಿಂದ ರಚನೆಯಾದವುಗಳಾಗಿವೆ. ದೆಹಲಿಯ ರಾಜ್ ನಗರ್ ಪ್ರದೇಶದಲ್ಲಿ 1984ರ ದಂಗೆಯ ವೇಳೆ ಇಬ್ಬರು ಸಿಖ್ಖರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅಪರಾಧಿಯಾಗಿದ್ದರು ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಇದರೊಂದಿಗೆ ಮತ್ತೊಂದು ದಂಗೆ ಪ್ರಕರಣದಲ್ಲೂ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ಇದನ್ನೂ ಓದಿ: Sajjan Kumar: 1984ರ ಸಿಖ್ ವಿರೋಧಿ ಗಲಭೆ ಅಪರಾಧಿ, ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ ಕುಮಾರ್ ತಿಹಾರ್ ಜೈಲಿನಲ್ಲಿ ನಿಧನ
ಬಿಜೆಪಿ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ, ಮೂವರೂ ಸಂಸದರು ವೈಯಕ್ತಿಕ ಸಾಮರ್ಥ್ಯದಲ್ಲಿ ಭೇಟಿ ನೀಡಿದ್ದಾರೆಯೇ ಹೊರತು ಪಕ್ಷದ ಪ್ರತಿನಿಧಿಗಳಾಗಿ ಅಲ್ಲ ಎಂದು ಸ್ಪಷ್ಟಪಡಿಸಿದೆ. “ಮೂವರು ಸಂಸದರು ಸಜ್ಜನ್ ಕುಮಾರ್ ಅವರ ಮನೆಗೆ ಹೋಗಿರುವುದು ತಮ್ಮ ವೈಯಕ್ತಿಕ ವಿಚಾರಕ್ಕಾಗಿಯೇ ಹೊರತು ಪಕ್ಷದ ನಾಯಕರಾಗಿ ಅಲ್ಲ” ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ತಿಳಿಸಿದ್ದಾರೆ.
ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಮಾಜಿ ಲೋಕಸಭಾ ಸಂಸದರಾಗಿದ್ದರು. 1980ರಲ್ಲಿ ಹೊರ ದೆಹಲಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಅವರು, 1984ರ ಸಿಖ್ ದಂಗೆಯ ನಂತರವೂ 1991 ಮತ್ತು 2004ರಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆಲುವು ಸಾಧಿಸಿದ್ದರು. 2010ರಲ್ಲಿ ದಂಗೆಯ ವೇಳೆ ಪ್ರಚೋದನಾಕಾರಿ ಭಾಷಣ, ಕೊಲೆ, ಗಲಭೆ ಮತ್ತು ಅಪರಾಧ ಸಂಚು ರೂಪಿಸಿದ ಆರೋಪ ಎದುರಿಸಿದ್ದರು. ಸಿಖ್ ದಂಗೆಯಲ್ಲಿ ಐವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 80 ವರ್ಷದ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್, ತೀವ್ರ ರಕ್ತದೊತ್ತಡ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ನಿಧನರಾಗಿದ್ದರು. ಹೂಡಾ ಸೇರಿದಂತೆ ಹರಿಯಾಣದ ಕೆಲವು ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಕ್ಕಾಗಿ ಪಕ್ಷದಿಂದ ಕೆಂಗಣ್ಣಿಗೆ ಗುರಿಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ