
ನವದೆಹಲಿ, ಏಪ್ರಿಲ್ 15: ಪ್ರಸ್ತಾವಿತ ಸೀಮಾ ನಿರ್ಣಯದ (Delimitation) ಕುರಿತಾದ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚುತ್ತಿರುವ ಪ್ರತಿರೋಧವನ್ನು ಎದುರಿಸುತ್ತಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಕ್ಷೇತ್ರ ಮರು ವಿಂಗಡಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ತಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿವೆ. ಈ ಸೀಮಾ ನಿರ್ಣಯ ಜಾರಿಯಾದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಆಗುವ ಪರಿಣಾಮಗಳೇನು?
ಜನಸಂಖ್ಯೆ ಆಧಾರಿತ ಸೀಮಾ ನಿರ್ಣಯವು ಉತ್ತರದ ರಾಜ್ಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ದಕ್ಷಿಣದ ರಾಜ್ಯಗಳ ನಾಯಕರು ವಾದಿಸುತ್ತಿದ್ದಾರೆ. ಅಲ್ಲಿ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿದೆ. ಹೀಗಾಗಿ, ಆ ಭಾಗಕ್ಕೆ ಹೆಚ್ಚು ಸ್ಥಾನಗಳು ಸಿಗುತ್ತವೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಅವರ ವಾದ.
ಹಾಗಾದರೆ, ದಕ್ಷಿಣದ ರಾಜ್ಯಗಳ ನಾಯಕರ ಆರೋಪ ನಿಜವೇ? ಸೀಮಾ ನಿರ್ಣಯ ಜಾರಿಯಾದರೆ ದಕ್ಷಿಣ ಭಾರತದ ಯಾವ ರಾಜ್ಯಗಳ ಸ್ಥಾನ ಎಷ್ಟಕ್ಕೆ ಏರಿಕೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ. ಈ ಮಾಹಿತಿಗಳನ್ನು ಕೇಂದ್ರ ಸರ್ಕಾರದ ಮೂಲಗಳು ನೀಡಿವೆ.
ಇದನ್ನೂ ಓದಿ: ಒಗ್ಗಟ್ಟಿನಿಂದ ನಿಲ್ಲುತ್ತೇವೆ; ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಒಂದಾದ ದಕ್ಷಿಣ ಭಾರತ
ತಮಿಳುನಾಡು ಪ್ರಸ್ತುತ 39 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದರೆ ಅದು 49 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 59 ಸ್ಥಾನಗಳನ್ನು ಹೊಂದಲಿದೆ.
ಕೇರಳ ಪ್ರಸ್ತುತ 20 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 23 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 30 ಸ್ಥಾನಗಳನ್ನು ಹೊಂದಲಿದೆ.
ಆಂಧ್ರಪ್ರದೇಶ ಪ್ರಸ್ತುತ 25 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ ಅದು 33 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರದ ಸೂತ್ರದ ಪ್ರಕಾರ, ಅದು ಈಗ 37 ಸ್ಥಾನಗಳನ್ನು ಹೊಂದಲಿದೆ.
ಒಡಿಶಾ ಪ್ರಸ್ತುತ 21 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 28 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು 31 ಸ್ಥಾನಗಳನ್ನು ಹೊಂದಲಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವೇದಿಕೆ ಸಜ್ಜು; ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಲು ಮೋದಿ ಸರ್ಕಾರ ಪ್ರಸ್ತಾಪ
ತೆಲಂಗಾಣ ಪ್ರಸ್ತುತ 17 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರವಾಗಿಯೇ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 24 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು 25 ಸ್ಥಾನಗಳನ್ನು ಹೊಂದುತ್ತದೆ.
ಕರ್ನಾಟಕ ಪ್ರಸ್ತುತ 28 ಸ್ಥಾನಗಳನ್ನು ಹೊಂದಿದೆ. ಕೇವಲ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 41 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 42 ಸ್ಥಾನಗಳನ್ನು ಹೊಂದಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕ್ಷೇತ್ರ ಪುನರ್ ವಿಂಗಡಣೆ ಎಂದರೇನು?:
ಪುನರ್ ವಿಂಗಡಣೆ ಎಂದರೆ ಜನಸಂಖ್ಯಾ ಬದಲಾವಣೆಗಳ ಆಧಾರದ ಮೇಲೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಪರಿಶೀಲಿಸಿ ಬದಲಾಯಿಸುವ ಪ್ರಕ್ರಿಯೆ. ಪ್ರತಿ ಕ್ಷೇತ್ರದ ಜನಸಂಖ್ಯೆಯು ಸರಿಸುಮಾರು ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಜನಗಣತಿಯ ನಂತರ ನಡೆಸಲಾಗುತ್ತದೆ. ಭಾರತದಲ್ಲಿ ಕೊನೆಯದಾಗಿ ಸಂಪೂರ್ಣ ಪುನರ್ವಿಂಗಡಣೆ 2002ರಲ್ಲಿ ನಡೆಸಲಾಯಿತು. ಪ್ರಸ್ತುತ, 2026ರ ನಂತರ ಮತ್ತೆ ಕ್ಷೇತ್ರ ಪುನರ್ವಿಂಗಡಣೆಯಾಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Wed, 15 April 26