
ನವದೆಹಲಿ, ಸೆಪ್ಟೆಂಬರ್ 18: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಇಂದು ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು. ದೂರವಾಣಿ ಸಂಭಾಷಣೆಯ ವೇಳೆ, ನವದೆಹಲಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಭಾರತದ ಬ್ರಿಕ್ಸ್ ಅಧ್ಯಕ್ಷತೆಗಾಗಿ ಯುಎಇ ಅಧ್ಯಕ್ಷರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು. ಅಲ್ಲದೆ, ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಅವರಿಗೆ ಶುಭಾಶಯ ಕೋರಿದರು.
ಸೆಪ್ಟೆಂಬರ್ 11 ಮತ್ತು 12ರಂದು ನವದೆಹಲಿಯಲ್ಲಿ ನಡೆದ 2 ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಯುಎಇ ಕ್ರೌನ್ ಪ್ರಿನ್ಸ್ ಖಾಲಿದ್ ಅವರು ಭಾಗವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಯುಎಇ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: ಇರಾನ್ ಜತೆಗಿನ ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತಗೊಳಿಸಿದ ಯುಎಇ
ಈ ದೂರವಾಣಿ ಸಂಭಾಷಣೆಯ ನಂತರ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, “ನನ್ನ ಸಹೋದರ, ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು. ನಮ್ಮ ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಕ್ರಮಗಳ ಕುರಿತು ನಾವು ಚರ್ಚಿಸಿದೆವು. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಪ್ರಯತ್ನಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು” ಎಂದು ಬರೆದುಕೊಂಡಿದ್ದಾರೆ.
Grateful to my brother, the President of UAE, HH Sheikh Mohamed bin Zayed Al Nahyan, for his call and birthday wishes.
We discussed measures to further deepen our bilateral Comprehensive Strategic Partnership and exchanged views on efforts to promote regional peace, security…
— Narendra Modi (@narendramodi) September 18, 2026
ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಎದುರಾಗಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಪರಸ್ಪರ ಸಹಕಾರ ಮತ್ತು ಸಮನ್ವಯವನ್ನು ಮುಂದುವರಿಸಲು ಎರಡೂ ದೇಶಗಳು ಬದ್ಧವಾಗಿವೆ ಎಂದು ಪುನರುಚ್ಚರಿಸಿದವು.
ಇದನ್ನೂ ಓದಿ: ಮೋದಿ ಹುಟ್ಟುಹಬ್ಬಕ್ಕೆ ಇತಿಹಾಸ ನಿರ್ಮಾಣ; ಉಜ್ಜಯಿನಿಯಲ್ಲಿ ಬೆಳಗಿದ 33 ಲಕ್ಷ ದೀಪ, ಮಧ್ಯಪ್ರದೇಶದಲ್ಲಿ 3.55 ಕೋಟಿ ದೀಪ!
ಇತ್ತೀಚಿನ ಬ್ರಿಕ್ಸ್ ಶೃಂಗಸಭೆಯ ವೇಳೆ ಯುಎಇ ಪ್ರಿನ್ಸ್ ಖಾಲಿದ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ರಕ್ಷಣೆ, ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಪ್ರಮುಖ ಖನಿಜಗಳು, ಇಂಧನ, ಆಹಾರ ಭದ್ರತೆ, ಬಂಡವಾಳ ಹೂಡಿಕೆ ಹಾಗೂ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ ಸಂಪರ್ಕ ಜಾಲದಂತಹ ಆಯಕಟ್ಟಿನ ಕ್ಷೇತ್ರಗಳಲ್ಲಿ ಭವಿಷ್ಯದ ಭಾರಿ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ