ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ
ಇದು ವಿಶ್ವದ ಅತ್ಯಂತ ದೊಡ್ಡ ಏತ ನೀರಾವರಿ ಯೋಜನೆ ಎಂದು ಪ್ರೊಮೊ ವಿವರಿಸಿದೆ. ಇಷ್ಟು ಬೃಹತ್ ಸಾಮರ್ಥ್ಯದ ಪಂಪ್ಗಳನ್ನು ಬೇರೆಲ್ಲೂ ಸ್ಥಾಪಿಸಿಲ್ಲ ಅಥವಾ ಕಾರ್ಯನಿರ್ವಹಿಸಲು ಅಳವಡಿಸಿಲ್ಲ ಎಂದು ಪ್ರೊಮೊ ಹೇಳುತ್ತದೆ.

ಹೈದರಾಬಾದ್: ‘ಮ್ಯಾನ್ ಅಂಡ್ ಮಿಷಿನ್ ಜಾಯಿನ್ ಫೋರ್ಸಸ್’ ಶೀರ್ಷಿಕೆಯ ಸಾಕ್ಷ್ಯಚಿತ್ರದ 30 ಸೆಕೆಂಡ್ಗಳ ಪ್ರೊಮೊ ತೆಲಂಗಾಣದಲ್ಲಿ ಕುತೂಹಲ ಉಂಟು ಮಾಡಿದೆ. ಗೋದಾವರಿ ನದಿ ನೀರಿನ ಸದುಪಯೋಗಕ್ಕಾಗಿ ರೂಪಿಸಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆ (Kaleshwaram Lift Irrigation Scheme – KLIS) ಕುರಿತ ಈ ಪ್ರೊಮೊ ಹಲವು ಸಾಮಾಜಿಕ ವೇದಿಕೆಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು, ವೈರಲ್ ಆಗಿದೆ.
ಜೂನ್ 25ರಂದು ರಾತ್ರಿ 8 ಗಂಟೆಗೆ ಈ ಸಾಕ್ಷ್ಯಚಿತ್ರವು ಡಿಸ್ಕವರಿ ಸಮೂಹದ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ. ಇದು ವಿಶ್ವದ ಅತ್ಯಂತ ದೊಡ್ಡ ಏತ ನೀರಾವರಿ ಯೋಜನೆ ಎಂದು ಪ್ರೊಮೊ ವಿವರಿಸಿದೆ. ಇಷ್ಟು ಬೃಹತ್ ಸಾಮರ್ಥ್ಯದ ಪಂಪ್ಗಳನ್ನು ಬೇರೆಲ್ಲೂ ಸ್ಥಾಪಿಸಿಲ್ಲ ಅಥವಾ ಕಾರ್ಯನಿರ್ವಹಿಸಲು ಅಳವಡಿಸಿಲ್ಲ ಎಂದು ಪ್ರೊಮೊ ಹೇಳುತ್ತದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಈ ಯೋಜನೆಯನ್ನು ಜೂನ್ 21, 2019ರಂದು ದೇಶಕ್ಕೆ ಸಮರ್ಪಿಸಿದ್ದರು.
ತೆಲಂಗಾಣದ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಈ ಪ್ರೊಮೊ ಕುತೂಹಲ ಹುಟ್ಟುಹಾಕಿದೆ. ರಾಜ್ಯದ ಮುಖ್ಯ ಎಂಜಿನಿಯರ್ರಿಂದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ವರೆಗೂ ಹಲವು ಹಂತದ ಸಿಬ್ಬಂದಿ ಈ ಪ್ರೊಮೊ ಲಿಂಕ್ ಫಾರ್ವರ್ಡ್ ಮಾಡುತ್ತಿದ್ದಾರೆ. ಸಾಕ್ಷ್ಯಚಿತ್ರ ನೋಡಲು ತಮ್ಮ ಆತ್ಮೀಯರನ್ನು ವಿನಂತಿಸುತ್ತಿದ್ದಾರೆ.
ನನಗೆ ನಿನ್ನೆಯಿಂದಲೂ ವಾಟ್ಸ್ಯಾಪ್ನಲ್ಲಿ ಸಾಕಷ್ಟು ಮೆಸೇಜ್ಗಳು ಬರುತ್ತಿವೆ. ನಾವೂ ಈ ಶುಕ್ರವಾರ ಸಾಕ್ಷ್ಯಚಿತ್ರ ನೋಡಲು ಉತ್ಸುಕರಾಗಿದ್ದೇವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ನೀರಾವರಿ ಇಲಾಖೆ ಸಿಬ್ಬಂದಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದನ್ನು ಈ ಸಾಕ್ಷ್ಯಚಿತ್ರ ಸಾರಿಹೇಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
Save The Date! “Lifting A River” A @Discovery Channel exclusive documentary on #KaleshwaramProject on June 25, at 8 PM. Don’t miss! @KTRTRS pic.twitter.com/kZwZUp755C
— Telangana Digital Media Wing (@DigitalMediaTS) June 19, 2021
ಈ ಸಾಕ್ಷ್ಯಚಿತ್ರ ರೂಪಿಸುವ ಕೆಲಸವನ್ನು ಡಿಸ್ಕವರಿ ಚಾನೆಲ್ ಕಳೆದ 2017ರಿಂದಲೇ ಆರಂಭಿಸಿತ್ತು. ಯೋಜನೆಯ ಹಲವು ಸ್ಥಳಗಳಲ್ಲಿ ಚಾನೆಲ್ನ ಸಿಬ್ಬಂದಿ ಶೂಟಿಂಗ್ ನಡೆಸಿದರು. ತೆಲಂಗಾಣಕ್ಕೆ ಈ ಯೋಜನೆಯ ಪ್ರಾಮುಖ್ಯತೆ ಏನು ಎಂಬ ಬಗ್ಗೆ ನೀರಾವರಿ ವಿಭಾಗದ ಮುಖ್ಯ ಎಂಜಿನಿಯರ್ ರಾಮಗುಂಡಮ್ ನಲ್ಲಾ ವೆಂಕಟೇಶ್ವರಲು ವಿವರಿಸಿದ್ದರು. ಸಾಕ್ಷ್ಯಚಿತ್ರ ನೋಡಲು ನನಗೂ ಕುತೂಹಲವಿದೆ ಎಂದು ವೆಂಕಟೇಶ್ವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಾರಿ ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾಳೇಶ್ವರಂ ಯೋಜನೆ ಮೊದಲ ನಿರ್ಮಾಣವಾದ ಲಕ್ಷ್ಮೀ (ಮಾದಿಗಡ್ಡ) ಬ್ಯಾರೇಜ್ಗೆ ಪ್ರಾಣಿಹಿತಾ ನದಿಯಿಂದ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ನದಿಯಲ್ಲಿ ಜುಲೈ ತಿಂಗಳಲ್ಲಿ ನೀರಿನ ಹರಿವು ಹೆಚ್ಚಾಗುವುದು ವಾಡಿಕೆ.

ಕಾಳೇಶ್ವರಂ ಪ್ರಾಜೆಕ್ಟ್ನ ವಿಹಂಗಮ ನೋಟ
ಜೂನ್ 25ಕ್ಕೆ ಪ್ರಸಾರ ವಿಶ್ವವಿಖ್ಯಾತ ಫಿಲಂ ಮೇಕರ್ ರಾಜೇಂದ್ರ ಕೊಂಡಪಲ್ಲಿ ರೂಪಿಸಿರುವ ಚಿತ್ರ ಜೂನ್ 25ರ ಶುಕ್ರವಾರ ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಯೋಜನೆಯ ವಿವರಗಳೊಂದಿಗೆ ಜನರಿಗೆ ಈ ಯೋಜನೆ ಎಷ್ಟು ಉಪಯುಕ್ತ ಎಂಬ ಮಾಹಿತಿಯನ್ನೂ ಈ ಸಾಕ್ಷ್ಯಚಿತ್ರ ಪ್ರಸ್ತುತಪಡಿಸಲಿದೆ. ಇಂಗ್ಲಿಷ್ ಮತ್ತು ಇತರ 6 ಭಾರತೀಯ ಭಾಷೆಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರಗೊಳ್ಳಲಿದೆ.
ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ‘ಎಂಜಿನಿಯರಿಂಗ್ ಮಾರ್ವೆಲ್’ ಎನಿಸಿದ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ.
(Documentary on Kaleshwaram project to be aired on Discovery Channel)
ಇದನ್ನೂ ಓದಿ: ತೆಲಂಗಾಣದ 135 ವರ್ಷ ಹಳೆಯ ಜೈಲು ಖಾಲಿ, ಇಲ್ಲಿ ತಲೆ ಎತ್ತಲಿದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಇದನ್ನೂ ಓದಿ: ಕೊವಿಡ್ 19 ಲಸಿಕೆ ತಯಾರಿಕೆಗಾಗಿ ತೆಲಂಗಾಣ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್..
Published On - 5:02 pm, Sun, 20 June 21