ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ
ಇತ್ತೀಚೆಗೆ ಮದುವೆಗೂ ಮುಂಚೆ ದೈಹಿಕ ಸಂಬಂಧ ಹೊಂದಿ, ಮೋಸ ಹೋಗುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಈ ಬಗ್ಗೆ ಪ್ರಕರಣವೊಂದರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು 'ಮದುವೆಗೆ ಮುನ್ನ ಯಾರನ್ನೂ ನಂಬಬೇಡಿ. ವಿವಾಹಪೂರ್ವ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಎಚ್ಚರ ವಹಿಸಿ' ಎಂದು ಎಚ್ಚರಿಕೆ ನೀಡಿದ್ದಾರೆ. ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ನಡೆಸಿದ ಪ್ರಕರಣವೊಂದರ ವಿಚಾರಣೆ ವೇಳೆ ಈ ಸಲಹೆ ನೀಡಿದ್ದಾರೆ.

ನವದೆಹಲಿ, ಫೆಬ್ರವರಿ 16: ಮದುವೆಯ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪಗಳನ್ನು ಒಳಗೊಂಡ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ವಿವಾಹಪೂರ್ವ ಸಂಬಂಧಗಳ ಕುರಿತು ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಇಂದು ಆ ಸಮಯದಲ್ಲಿ ಈಗಾಗಲೇ ಮದುವೆಯಾಗಿದ್ದರೂ, ಆ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ ಆರೋಪ ಹೊತ್ತಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ.
ವಿಚಾರಣೆಯ ಸಂದರ್ಭದಲ್ಲಿ ಸಲಹೆ ನೀಡಿದ ನ್ಯಾಯಮೂರ್ತಿ ನಾಗರತ್ನ, ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. “ಬಹುಶಃ ನಾವು ಹಳೆಯ ಕಾಲದವರಾಗಿರಬಹುದು. ಆದರೆ, ಮದುವೆಗೂ ಮೊದಲು ಒಬ್ಬ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಅವರ ಸಂಬಂಧ ಎಷ್ಟೇ ಗಾಢವಾಗಿದ್ದರೂ ಮದುವೆಗೆ ಮೊದಲು ಅವರು ಹೇಗೆ ದೈಹಿಕ ಸಂಬಂಧದಲ್ಲಿರುತ್ತಾರೆ ಎಂಬುದನ್ನು ನಮಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಹಳೆಯ ಕಾಲದವರಿಗೆ ಇದು ವಿಚಿತ್ರವಾದ ಸಂಗತಿ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ
“ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಮದುವೆಗೆ ಮೊದಲು ಯಾರೂ ಯಾರನ್ನೂ ನಂಬಬಾರದು” ಎಂದು ಅವರು ಸಲಹೆ ನೀಡಿದ್ದಾರೆ. ಆ ಮಹಿಳೆ ಮತ್ತು ಪುರುಷ 2022ರಲ್ಲಿ ಮ್ಯಾಟ್ರಿಮೊನಿ ವೆಬ್ಸೈಟ್ ಮೂಲಕ ಭೇಟಿಯಾಗಿದ್ದರು. ಮೊದಲೇ ಮದುವೆಯಾಗಿದ್ದರೂ ಆತ ಮಹಿಳೆಗೆ ತಾನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದೇ ನಂಬಿಕೆಯಿಂದ ಆಕೆ ಆತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು.
ಅವರ ಲೈಂಗಿಕ ಸಂಭೋಗದ ವೀಡಿಯೊಗಳನ್ನು ಮಹಿಳೆಯ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡಲಾಗಿದೆ. ಅದನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
