ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ನಲ್ಲಿ ಭೀಕರ ದುರ್ಘಟನೆಯೊಂದು ನಡೆದಿದೆ. ಗೋಡೆ ಕುಸಿದು ನಾಲ್ವರು ಮುಗ್ಧ ಜೀವಗಳು ಬಲಿಯಾಗಿವೆ. ಯಾರದೋ ತಪ್ಪಿಗೆ ಇನ್ಯಾರೋ ಬಲಿಯಾಗಿದ್ದಾರೆ.
ಮದುವೆಗೆ ಅಂತಾ ಬಂದು ಮಸಣ ಸೇರಿದ್ರು! ನಿನ್ನೆ ಹೈದರಾಬಾದ್ನ ಜನ ಶಾಕ್ನಲ್ಲಿದ್ದರು. ಇದಕ್ಕೆ ಕಾರಣ ಹೈದರಾಬಾದ್ನ ಅಂಬೆರ್ಪೇಟೆಯಲ್ಲಿ ನಡೆದಿರುವ ದುರ್ಘಟನೆ. ಅಂಬೆರ್ಪೇಟೆ ಗೋಲ್ನಾಕ್ ಪ್ರದೇಶದಲ್ಲಿ ಮದುವೆಯೊಂದು ನಡೀತಿತ್ತು. ಇನ್ನು ಈ ವೇಳೆ ಭಾರಿ ಅವಘಡವೊಂದು ನಡೆದುಬಿಟ್ಟಿದೆ.
ಇಲ್ಲಿನ ಪರ್ಲ ಗಾರ್ಡನ್ ಫಂಕ್ಷನ್ ಹಾಲ್ನಲ್ಲಿ ಮದುವೆ ನಡೆಯುವಾಗ ಶಿಥಿಲವಾಗಿದ್ದ ಗೋಡೆ ಕುಸಿದು, ನಾಲ್ವರು ಬಲಿಯಾಗಿದ್ದಾರೆ. ಅಲ್ಲದೆ ಗೋಡೆ ಬಿದ್ದ ರಭಸಕ್ಕೆ 2 ಆಟೋ, 10 ಬೈಕ್ಗಳು ನಜ್ಜುಗುಜ್ಜಾಗಿವೆ. ದುರ್ಘಟನೆ ನಡೆಯುತ್ತಿದ್ದಂತೆ ಕಟ್ಟಡದ ಮಾಲೀಕ ನವಾಜ್ ಎಸ್ಕೇಪ್ ಆಗಿದ್ದಾನೆ.
ಮನಸೋ ಇಚ್ಛೆ ಮರುನಿರ್ಮಾಣ ಮಾಡಿದ್ದ ಮಾಲೀಕ! ದುರ್ಘಟನೆ ಸಂಭವಿಸಿರುವ ಪರ್ಲ ಗಾರ್ಡನ್ ಫಂಕ್ಷನ್ ಹಾಲ್ನ ಸುಮಾರು 17 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತಂತೆ. ಇತ್ತೀಚೆಗೆ ಕಟ್ಟಡದ ರಿನೋವೇಷನ್ ಮಾಡಿದ್ದ ಮಾಲೀಕ ನವಾಜ್, ಇಂಜಿನಿಯರ್ಗಳ ಸಲಹೆ ಪಡೆದಿರಲಿಲ್ಲ. ಕಟ್ಟಡದ ಮೇಲೆ ಫಂಕ್ಷನ್ ಹಾಲ್ ನಿರ್ಮಿಸಿದ್ದ.
ಇದು ಶಿಥಿಲವಾಗಿದ್ದ ಕಾರಣ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಿಜಯಲಕ್ಷ್ಮಿ, ಸುರೇಶ್, ಸೋಹೆಲ್ ಹಾಗೂ ಕೃಷ್ಣಯ್ಯ ಮೃತಪಟ್ಟಿದ್ದಾರೆ. ಇನ್ನು ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮಾಲೀಕನ ತಪ್ಪಿಗೆ ಅಮಾಯಕರು ಬಲಿಯಾಗಿದ್ದಾರೆ.
ಘಟನೆ ನಂತರ ಎಸ್ಕೇಪ್ ಆಗಿರುವ ಮಾಲೀಕ ನವಾಜ್ಗಾಗಿ ಪೊಲೀಸರು ಬಲೆ ಬೀಸಿದ್ದು, ಸದ್ಯದಲ್ಲೇ ಬಂಧಿಸುವ ಆಶಯದಲ್ಲಿದ್ದಾರೆ.