ಆತ್ಮಹತ್ಯೆ ಮಾಡಿಕೊಂಡ ಮಗನಿಗೆ 23 ವರ್ಷಗಳಿಂದ ಮದುವೆ ಮಾಡುತ್ತಿದ್ದಾರೆ ಅಪ್ಪ-ಅಮ್ಮ!
ತೆಲಂಗಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಕಳೆದ 23 ವರ್ಷಗಳಿಂದ ತೆಲಂಗಾಣದ ದಂಪತಿ ಪ್ರತಿ ವರ್ಷ ತಮ್ಮ ಆ ಮಗನ ವಿವಾಹವನ್ನು ನಡೆಸುತ್ತಿದ್ದಾರೆ. ಮಗನ ಸಾವಿನ ದುಃಖವನ್ನು ಆತನ ಮದುವೆಯ ಆಚರಣೆಯನ್ನಾಗಿ ಪರಿವರ್ತಿಸಿದ್ದಾರೆ. ಬದುಕಿದ್ದಾಗ ಮಗನಿಗೆ ಸಿಗದ ಪ್ರೀತಿ ಸಾವಿನ ನಂತರವಾದರೂ ಸಿಗಲಿ ಎಂದು ಆಶೀರ್ವದಿಸಿ ಅವರು ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇನಿದು ವಿಚಿತ್ರ ಸುದ್ದಿ? ಮೃತಪಟ್ಟ ಯುವಕನಿಗೆ ಮದುವೆ ಮಾಡುವುದೇಕೆ? ಈ ಆಚರಣೆ ಹೇಗೆ ಮಾಡುತ್ತಾರೆ? ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು.

ಹೈದರಾಬಾದ್, ಮಾರ್ಚ್ 28: ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲಾರದೆ ರಾಮ್ ಕೋಟಿ ಎಂಬ ಯುವಕ 23 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ, ಕಳೆದ 23 ವರ್ಷಗಳಿಂದ ತೆಲಂಗಾಣದಲ್ಲಿ (Telangana) ದಂಪತಿ ಸಾವನ್ನಪ್ಪಿದ ತಮ್ಮ ಮಗನ ಸಾವಿನ ದುಃಖವನ್ನು ಪ್ರಾರ್ಥನೆಗಳು, ಆಚರಣೆಗಳು ಮತ್ತು ಭಕ್ತಿಯಿಂದ ಆಚರಿಸುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಆತ ಮೃತಪಟ್ಟ ದಿನದಂದು ಆತನ ಫೋಟೋಗೆ ಆತ ಪ್ರೀತಿಸಿದ ಯುವತಿಯ ಫೋಟೋದ ಜೊತೆಗೆ ಮದುವೆ ಮಾಡುತ್ತಿದ್ದಾರೆ. ದುಃಖವಾಗಿ ಪ್ರಾರಂಭವಾಗಿದ್ದ ಈ ಸಾವು ಈಗ ಇಡೀ ಗ್ರಾಮವನ್ನು ಒಟ್ಟುಗೂಡಿಸುವ ಸಂಪ್ರದಾಯವಾಗಿ ಬೆಳೆದಿದೆ.
ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಲಾಲು ಮತ್ತು ಸುಕ್ಕಮ್ಮ 2003ರಲ್ಲಿ ಮೃತಪಟ್ಟ ತಮ್ಮ ಮಗ ರಾಮ್ ಕೋಟಿಗಾಗಿ ಪ್ರತಿ ವರ್ಷ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ರಾಮ್ ಪ್ರೀತಿಸಿದ ಹುಡುಗಿಯ ಕುಟುಂಬಸ್ಥರು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಮನನೊಂದು ರಾಮ್ ಕೋಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಕೆಲವೇ ದಿನಗಳಲ್ಲಿ ಅವರು ಪ್ರೀತಿಸಿದ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಳು. ಇಬ್ಬರೂ ಪ್ರೇಮಿಗಳು ಇಹಲೋಕ ತ್ಯಜಿಸಿದರೂ ಅವರ ಕೊನೆಯಾಸೆಯನ್ನು ಈಡೇರಿಸಲು ರಾಮ್ ಅವರ ತಂದೆ-ತಾಯಿ ನಿರ್ಧರಿಸಿದರು.
ಇದನ್ನೂ ಓದಿ: ತೆಲಂಗಾಣದ ದೇವಸ್ಥಾನದ ಜಾತ್ರೆಯಲ್ಲಿ ಜಾತಿ ಸಂಘರ್ಷ; ಕೂದಲೆಳೆದು ಮಹಿಳೆಯರಿಗೆ ಥಳಿತ, ಮಗು ಸಾವು
ಹೀಗಾಗಿ, ಬದುಕಿದ್ದಾಗ ಅವರಿಬ್ಬರ ಮದುವೆ ಮಾಡಲಾಗದ ಕಾರಣದಿಂದ ಅವರ ಸಾವಿನ ದಿನದಂದು ರಾಮ್ ಅವರ ಮದುವೆ ಸಮಾರಂಭವನ್ನು ಏರ್ಪಡಿಸುತ್ತಿದ್ದಾರೆ. 23 ವರ್ಷಗಳಿಂದ ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ತಮ್ಮ ಮಗನ ಸಾವಿನ ದಿನವನ್ನು ಅವರು ಸ್ಮರಣೀಯವಾಗಿಸುತ್ತಿದ್ದಾರೆ.
ಸುಕ್ಕಮ್ಮ ಅವರ ಪ್ರಕಾರ, ರಾಮ್ನ ಸಾವಿನ ನಂತರ ಆತ ಕನಸಿನಲ್ಲಿ ಕಾಣಿಸಿಕೊಂಡು ದೇವಸ್ಥಾನ ಕಟ್ಟಿಸಿ ಮದುವೆ ಮಾಡುವಂತೆ ಕೇಳಿಕೊಂಡರು. ಇದನ್ನು ನಂಬಿದ ದಂಪತಿಗಳು ತಮ್ಮ ಮನೆಯೊಳಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ಅವರು ಅದರಲ್ಲಿ ಮಗ ರಾಮ್ ಮತ್ತು ಆತ ಪ್ರೀತಿಸಿದ ಹುಡುಗಿಯ ಪ್ರತಿಮೆಗಳನ್ನು ಸ್ಥಾಪಿಸಿ, ಅವರನ್ನು ಒಟ್ಟಿಗೆ ಇರಿಸಿದರು.
ಇದನ್ನೂ ಓದಿ: ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ
ಅಂದಿನಿಂದ, ಪ್ರತಿ ವರ್ಷ ರಾಮ ನವಮಿಯಂದು ಅವರಿಬ್ಬರಿಗೂ ಸಾಂಪ್ರದಾಯಿಕ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ಈ ಆಚರಣೆಯನ್ನು ನಿಜವಾದ ವಿವಾಹದಂತೆಯೇ ಸಂಪ್ರದಾಯ, ಪದ್ಧತಿಗಳೊಂದಿಗೆ ನಡೆಸಲಾಗುತ್ತದೆ. ಈ ಸಮಾರಂಭವನ್ನು ವೀಕ್ಷಿಸಲು ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಗ್ರಾಮಸ್ಥರು, ಸಂಬಂಧಿಕರು ಮತ್ತು ಹತ್ತಿರದ ಪ್ರದೇಶಗಳ ಜನರು ಪ್ರತಿ ವರ್ಷ ಅವರ ಮನೆಗೆ ಆಗಮಿಸುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
