AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಭಾರಿ ಅನಾಹುತ

ವಿಶಾಖಪಟ್ಟಣಂನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. 161 ಪ್ರಯಾಣಿಕರಿದ್ದ ವಿಮಾನದ ಇಂಜಿನ್ ವಿಫಲವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಘಟನೆಯ ವಿವರ ಇಲ್ಲಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಭಾರಿ ಅನಾಹುತ
ಇಂಡಿಗೋ ವಿಮಾನ (ಸಾಂದರ್ಭಿಕ ಚಿತ್ರ)Image Credit source: TV9 Network
ಗಣಪತಿ ಶರ್ಮಾ
|

Updated on:Mar 28, 2026 | 1:18 PM

Share

ನವದೆಹಲಿ, ಮಾರ್ಚ್​ 28: ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ದೆಹಲಿಗೆ (Delhi) ತೆರಳುತ್ತಿದ್ದ ಇಂಡಿಗೋ ವಿಮಾನವೊಂದು (IndiGo Flight) ಎಂಜಿಜಿನ್ ವೈಫಲ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ 161 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಘಟನೆಯ ವಿವರ

ಇಂಡಿಗೋ ಸಂಸ್ಥೆಯ ಬೋಯಿಂಗ್ 737 (ವಿಮಾನ ಸಂಖ್ಯೆ 6E 579) ಶನಿವಾರ ಬೆಳಗ್ಗೆ ವಿಶಾಖಪಟ್ಟಣಂನಿಂದ ದೆಹಲಿಗೆ ಪ್ರಯಾಣ ಬೆಳೆಸಿತ್ತು. ವಿಮಾನವು ದೆಹಲಿ ವಿಮಾನ ನಿಲ್ದಾಣವನ್ನು ತಲುಪುವ ಕೆಲವೇ ನಿಮಿಷಗಳ ಮೊದಲು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್‌ಗಳು ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಅನುಮತಿ ಕೋರಿದ್ದಾರೆ.

ಬೆಳಗ್ಗೆ 10:39ಕ್ಕೆ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಘೋಷಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಮತ್ತು ತುರ್ತು ಚಿಕಿತ್ಸಾ ತಂಡಗಳು ರನ್‌ವೇ ಬಳಿ ಸನ್ನದ್ಧವಾಗಿದ್ದವು. ಅದೃಷ್ಟವಶಾತ್, ಬೆಳಗ್ಗೆ 10:54ಕ್ಕೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.

ಟರ್ಕಿ ಸಂಸ್ಥೆಯ ವಿಮಾನ

ಈ ವಿಮಾನವನ್ನು ಇಂಡಿಗೋ ಸಂಸ್ಥೆಯು ಟರ್ಕಿಯ ‘ಕೊರೆಂಡನ್ ಏರ್ಲೈನ್ಸ್’ನಿಂದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಸದ್ಯ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ತಿಳಿಸಿದೆ.

ಇದನ್ನೂ ಓದಿ: ತಪ್ಪಿದ ದೊಡ್ಡ ಅನಾಹುತ: ಡಿಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ, ತುರ್ತು ಭೂಸ್ಪರ್ಶಗಳಂಥ ಘಟನೆಗಳು ಹೆಚ್ಚುತ್ತಿರುವುದು ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ.

ಇತ್ತೀಚೆಗೆ ನಡೆದ ವಿಮಾನಗಳ ತುರ್ತು ಭೂಸ್ಪರ್ಶದ ಟೈಮ್​ಲೈನ್

  • ಜನವರಿ 12, 2026: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ವಿಮಾನವು ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಕಾರಣ ತುರ್ತು ಭೂಸ್ಪರ್ಶ ಮಾಡಿತ್ತು.
  • ಫೆಬ್ರವರಿ 24, 2026: ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಘೋಷಿಸಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.
  • ಮಾರ್ಚ್ 18, 2026: ಮಸ್ಕತ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಹೈಡ್ರಾಲಿಕ್ ವೈಫಲ್ಯದ ಕಾರಣದಿಂದಾಗಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Sat, 28 March 26

Follow Us