‘ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ಚರ್ಚೆಗೆ ಸಿದ್ಧ’; ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಕಲಾಪದಲ್ಲಿ 24 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸುವುದಾಗಿ ವಿರೋಧ ಪಕ್ಷಗಳಿಗೆ ಆಫರ್ ನೀಡಿದ್ದು, ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಚರ್ಚೆಯಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ 3 ಗಂಟೆಯಿಂದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ತಾವು ಸದನದಲ್ಲಿಯೇ ಉಪಸ್ಥಿತರಿರುವುದಾಗಿ ಅಮಿತ್ ಶಾ ಹೇಳಿದ್ದಾರೆ. ವಿಪಕ್ಷಗಳು ಎತ್ತುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ರಾತ್ರಿಯಿಡೀ ಚರ್ಚೆ ಮುಂದುವರಿಸಲು ತಾವು ಸಿದ್ಧರಾಗಿರುವುದಾಗಿ ಅವರು ತಿಳಿಸಿದರು. ಸಂಸತ್ತಿನಲ್ಲಿ ವಿವರವಾದ ಚರ್ಚೆಯಲ್ಲಿ ಭಾಗವಹಿಸಬೇಕೋ ಅಥವಾ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಬೇಕೋ ಎಂಬುದನ್ನು ವಿರೋಧ ಪಕ್ಷಗಳೇ ಈಗ ನಿರ್ಧರಿಸಬೇಕು ಎಂದು ಅಮಿತ್ ಶಾ ಹೇಳಿದರು.

ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ಚರ್ಚೆಗೆ ಸಿದ್ಧ; ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು
Amit Shah
Image Credit source: PTI

Updated on: Aug 12, 2026 | 3:18 PM

ಮುಖ್ಯಾಂಶಗಳು

  • ನಾಳೆ ಲೋಕಸಭಾ ಅಧಿವೇಶನ ಮುಕ್ತಾಯ
  • ನಾಳೆಯವರೆಗೂ ಚರ್ಚೆಗೆ ಸಿದ್ಧವಿರುವುದಾಗಿ ಅಮಿತ್ ಶಾ ಹೇಳಿಕೆ
  • ವಿಪಕ್ಷಗಳು ಸಹಕರಿಸಿದರೆ ರಾತ್ರಿಯಿಡೀ ಚರ್ಚೆಗೆ ಸಿದ್ಧ ಎಂದ ಗೃಹ ಸಚಿವ

ನವದೆಹಲಿ, ಆಗಸ್ಟ್ 12: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ವಿಚಾರದಲ್ಲಿ ಅಮಿತ್ ಶಾ (Amit Shah) ಅವರಿಗೆ ಸಂಸತ್ತಿಗೆ ಬರಲು ಧೈರ್ಯವಿಲ್ಲ, ಈ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಈ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಗೈರುಹಾಜರಿಯನ್ನು ಪ್ರಶ್ನಿಸುವಾಗ ವಿಪಕ್ಷಗಳು ಬಳಸಿದ ‘ಅಸಂಸದೀಯ’ ಪದಗಳ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೇ, ‘ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನಾನು ಸಂಸತ್​ನಲ್ಲಿ ಚರ್ಚೆಗೆ ಸಿದ್ಧವಿದ್ದೇನೆ. ವಿಪಕ್ಷಗಳು ಈಗ ಯಾಕೆ ಓಡಿಹೋಗುತ್ತಿವೆ?’ ಎಂದು ಪ್ರಶ್ನಿಸಿದ್ದಾರೆ.

ಇಂದು ಸಂಸತ್ತಿನ ಸಂಕೀರ್ಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮಿತ್ ಶಾ, “ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ನಾನು ಪ್ರತಿದಿನವೂ ಬಂದು ನನ್ನ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ. ಆದರೆ, ವಿರೋಧ ಪಕ್ಷಗಳು ಎರಡೂ ಸದನಗಳ ಕಲಾಪ ನಡೆಯಲು ಬಿಡದಿದ್ದಾಗ, ಯಾರಾದರೂ ಏನು ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ವಿಪಕ್ಷಗಳು ಗದ್ದಲ ಎಬ್ಬಿಸಬಾರದು’; ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್​ನಲ್ಲಿ ಭಾಷಣಕ್ಕೆ ಅಮಿತ್ ಶಾ ಸಿದ್ಧ

“ನೀಟ್ ಪ್ರತಿಭಟನೆ ಮತ್ತು ಪೊಲೀಸರ ಕ್ರಮಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈಗಾಗಲೇ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ಪೂರ್ಣಪ್ರಮಾಣದ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದು, ಚರ್ಚೆಗೆ ಸಮಯ ನಿಗದಿಪಡಿಸಲು ಮತ್ತು ವಿಪಕ್ಷಗಳಿಗೆ ಸಿದ್ಧರಾಗಲು ಕೋರಲಾಗಿತ್ತು. ಇದೇ ವಿರೋಧ ಪಕ್ಷಗಳ ಆರಂಭಿಕ ಬೇಡಿಕೆಯಾಗಿತ್ತು. ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ನಾನು ಸಹ ಸದನದಲ್ಲಿ ಕುಳಿತು ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದೇನೆ. ಆದರೆ, ವಿಪಕ್ಷಗಳಿಗೆ ಚರ್ಚೆ ನಡೆಯುವುದೇ ಇಷ್ಟವಿಲ್ಲ. ಈಗ ಯಾರು ಓಡಿಹೋಗುತ್ತಿದ್ದಾರೆ ಎಂಬುದನ್ನು ದೇಶದ ಜನರೇ ನಿರ್ಧರಿಸಲಿ” ಎಂದು ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದರು.


ಇಂದು ಮಧ್ಯಾಹ್ನ 3 ಗಂಟೆಯೊಳಗೆ ವಿಪಕ್ಷಗಳು ಸ್ಪೀಕರ್‌ಗೆ ಪತ್ರ ನೀಡಲಿ ಎಂದು ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದರು. ಪತ್ರ ನೀಡಿದರೆ ತಕ್ಷಣವೇ ಚರ್ಚೆ ಆರಂಭಿಸಿ, ತಡರಾತ್ರಿಯವರೆಗೂ ಚರ್ಚೆ ಮುಂದುವರಿಸಿ, ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ನಾನು ಸದನದಲ್ಲೇ ಇದ್ದು ಉತ್ತರ ನೀಡಲು ಸಿದ್ಧ ಎಂದಿದ್ದಾರೆ. “ಇಂದು ಮಧ್ಯಾಹ್ನ 3 ಗಂಟೆಯಿಂದ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನಾವು ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆಗೆ ಸಿದ್ಧರಿದ್ದೇವೆ. ನಾನು ಖುದ್ದಾಗಿ ಸದನದಲ್ಲಿ ಕುಳಿತು, ಪ್ರತಿಯೊಬ್ಬರ ಮಾತುಗಳನ್ನು ಆಲಿಸಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ” ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ: ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಪ್ರತಿಪಕ್ಷಗಳ ಮನವಿ ಪರಿಗಣಿಸಲು ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ

“ಸರ್ಕಾರದ ಬಳಿ ಮುಚ್ಚಿಡುವಂತದ್ದು ಯಾವುದೂ ಇಲ್ಲ. ವಿಪಕ್ಷಗಳು ಇಷ್ಟು ದಿನ ಚರ್ಚೆಗೆ ಏಕೆ ಅವಕಾಶ ನೀಡಲಿಲ್ಲ ಎಂಬುದನ್ನೂ ಚರ್ಚಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್‌ಡಿಎ ಸರ್ಕಾರವು ಯಾವುದೇ ವಿಷಯದ ಬಗ್ಗೆಯೂ ಚರ್ಚಿಸಲು ಸಿದ್ಧವಿದ್ದು, ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಬಿಡಬೇಕು” ಎಂದು ಅಮಿತ್ ಶಾ ವಿಪಕ್ಷಗಳಿಗೆ ಮನವಿ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Wed, 12 August 26

Loading...
Unable to load recommendations.
Follow Us