AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ದಾಳಿಗೂ ಬಂತು ಕೃತಕ ಬುದ್ಧಿಮತ್ತೆ! ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಎಐ ನೆರವಿನಿಂದ ಶೋಧ

ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ನೆರವಿನಿಂದ ಅಕ್ರಮ ಪತ್ತೆ ಮಾಡಲು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಐಟಿ ದಾಳಿಗೂ ಬಂತು ಕೃತಕ ಬುದ್ಧಿಮತ್ತೆ! ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಎಐ ನೆರವಿನಿಂದ ಶೋಧ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jun 28, 2023 | 9:23 PM

ಲಖನೌ: ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸುತ್ತಿರುವ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence) ಇದೀಗ ಆದಾಯ ತೆರಿಗೆ ಇಲಾಖೆಗೂ ನೆರವಾಗಿದೆ. ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ನೆರವಿನಿಂದ ಅಕ್ರಮ ಪತ್ತೆ ಮಾಡಲು ದಾಳಿ ನಡೆಸಿದ್ದಾರೆ (IT Raid) ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಿನ್ನದ ವ್ಯಾಪಾರಿಗಳು ಮತ್ತು ರಿಯಲ್ ಎಸ್ಟೇಟ್ ಗುಂಪಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿ ಸುಮಾರು 5 ದಿನಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ. ಕಾನ್ಪುರದ 17 ಸ್ಥಳಗಳಲ್ಲಿ ಮತ್ತು ದೇಶದ ಇತರ 55 ಸ್ಥಳಗಳಲ್ಲಿ ಈ ದಾಳಿ ನಡೆದಿದೆ. ಮೂಲಗಳ ಪ್ರಕಾರ, ಕಳೆದ ಹಲವು ತಿಂಗಳುಗಳಿಂದ ಆದಾಯ ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆಯ ಮೂಲಕ ಅಧಿಕ ಮೌಲ್ಯದ ಅನುಮಾನಾಸ್ಪದ ವಹಿವಾಟುಗಳ ಮೇಲೆ ನಿಗಾ ಇರಿಸಿತ್ತು. ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ನಯಾ ಗಂಜ್‌ನ ಮುಚ್ಚಿದ ಅಂಗಡಿಯಿಂದ 25 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 6 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಆದಾಯ ತೆರಿಗೆ ಇಲಾಖೆಯು 1500 ಕೋಟಿಯ ನಕಲಿ ವಹಿವಾಟುಗಳನ್ನು ಸಹ ಪತ್ತೆ ಮಾಡಿದೆ ಎಂದು ‘ಟ್ಯಾಕ್ಸ್​​ ಕಾನ್ಸೆಪ್ಟ್ ಡಾಟ್​​ನೆಟ್’ ವರದಿ ಮಾಡಿದೆ.

ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಬಳಸಿ ಈ ರೀತಿಯ ತೆರಿಗೆ ವಂಚನೆಯನ್ನು ಭೇದಿಸಲಾಗಿದೆ. ಈ ಮೊದಲು ಇತರ ಮೂಲಗಳ ಸಹಾಯದಿಂದ ಅಕ್ರಮ ವಹಿವಾಟಿನ ಜಾಡು ಹಿಡಿಯಲಾಗುತ್ತಿತ್ತು. ಈ ಪ್ರಕ್ರಿಯೆಗೆ ಹಲವು ದಿನಗಳು ಬೇಕಾಗುತ್ತಿತ್ತು. ಈಗ, ಈ ಕೃತಕ ಬುದ್ಧಿಮತ್ತೆಯ ಮೂಲಕ ಅನೇಕ ವಹಿವಾಟುಗಳ ನಮೂದಿನ ಮಾಹಿತಿಯನ್ನು ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ದಾಖಲಿಸಿಕೊಳ್ಳುತ್ತದೆ. ಆದಾಯ ತೆರಿಗೆ ಇಲಾಖೆ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮೂಲಗಳ ಪ್ರಕಾರ, ಆದಾಯ ತೆರಿಗೆಯ ಆಯ್ದ ಅಧಿಕಾರಿಗಳು ತಮ್ಮ ಕಂಪ್ಯೂಟರ್ ಪರದೆಯ ಮೇಲೆ ಪ್ಯಾನ್ ಸಂಖ್ಯೆಯನ್ನು ನಮೂದಿಸುವ ಮೂಲಕ ಎಲ್ಲಾ ವಹಿವಾಟುಗಳನ್ನು ಪರಿಶೀಲಿಸುವ ಸೌಲಭ್ಯವನ್ನು ಹೊಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: Sam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ರಾತ್ರಿ ನಯಾಗಂಜ್‌ನಲ್ಲಿರುವ ಬಾಗ್ಲಾ ಕಟ್ಟಡಕ್ಕೆ ದಾಳಿ ಮಾಡಿದ್ದರು. ಅಲ್ಲಿ ಮುಚ್ಚಿದ ಅಂಗಡಿಯಲ್ಲಿದ್ದ 10 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದರು. ಮೂಲಗಳ ಪ್ರಕಾರ, ತಂಡವು ಪುರುಷೋತ್ತಮ್ ರಾಧಾ ಮೋಹನ್ ದಾಸ್ ಜ್ಯುವೆಲರ್ಸ್‌ನ ಶೋ ರೂಂ ಮೇಲೆ ದಾಳಿ ನಡೆಸಿತ್ತು. ನಂತರ ಅವರು ನಯಾ ಗಂಜ್‌ನ ಬಾಗ್ಲಾ ಬಿಲ್ಡಿಂಗ್‌ನಲ್ಲಿರುವ ಬಟ್ಟೆಯ ಅಂಗಡಿಯಲ್ಲಿ ಸ್ವಲ್ಪ ಮೊತ್ತವನ್ನು ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪಡೆದಿತ್ತು. ಈ ಅಂಗಡಿ ರಾಧಾಮೋಹನ್ ಪುರುಷೋತ್ತಮದಾಸ್ ಜ್ಯುವೆಲ್ಲರ್ಸ್ ಗೆ ಸೇರಿದ್ದಾಗಿದ್ದು, ಬಟ್ಟೆ ಕೆಲಸಕ್ಕೆ ಬೇರೆಯವರಿಗೆ ನೀಡಲಾಗಿತ್ತು. ಇದಾದ ಬಳಿಕ ಇಲಾಖೆಯ ಎರಡು ತಂಡಗಳು ಅಲ್ಲಿಗೆ ಆಗಮಿಸಿ ಹಲವು ಗಂಟೆಗಳ ಕಾಲ ಅಂಗಡಿಯಲ್ಲಿದ್ದ ಬಟ್ಟೆಗಳನ್ನು ಶೋಧಿಸಿ ಬ್ಯಾಗ್‌ನಿಂದ 10 ಕೋಟಿ ರೂ. ವಶಪಡಿಸಿಕೊಂಡಿತ್ತು. ಮೂಲಗಳ ಪ್ರಕಾರ 18 ಕೋಟಿ ನಗದು ಹಾಗೂ 7 ಕೋಟಿ ಮೌಲ್ಯದ ವಸ್ತುಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾನ್ಪುರದ ಅನೇಕ ದೊಡ್ಡ ಬಂಡವಾಳಶಾಹಿಗಳು, ಉದ್ಯಮಿಗಳು ಮತ್ತು ಉದ್ಯಮಿಗಳು ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಡಿಜಿಜಿಐ ರಾಡಾರ್‌ನಲ್ಲಿದ್ದಾರೆ. ಈ ಜನರ ವ್ಯವಹಾರ ಕಾನ್ಪುರ ಸೇರಿದಂತೆ ದೇಶದಾದ್ಯಂತ ಹರಡಿದೆ. ಈ ದಾಳಿಯ ಸಮಯದಲ್ಲಿ, ಅಂತಹ ಅನೇಕ ದೊಡ್ಡ ಬಂಡವಾಳಶಾಹಿಗಳೊಂದಿಗಿನ ಸಂಪರ್ಕವೂ ಮುನ್ನೆಲೆಗೆ ಬಂದಿದೆ. ಆದಾಯ ತೆರಿಗೆ ಮೂಲಗಳ ಪ್ರಕಾರ, 200 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಆದಾಯ ತೆರಿಗೆಯು ವಿವರವಾದ ವರದಿಯನ್ನು ಸಿದ್ಧಪಡಿಸುತ್ತದೆ ಮತ್ತು ಅದನ್ನು ಇತರ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಿದೆ ಎಂದು ವರದಿ ಉಲ್ಲೇಖಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Wed, 28 June 23