ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆದರಿಕೆ; ಭಾರತದಿಂದ ಬಾಂಗ್ಲಾದೇಶ ಹೈಕಮಿಷನರ್‌ಗೆ ಸಮನ್ಸ್ ಜಾರಿ

ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಭದ್ರತೆಗಾಗಿ ಬಾಂಗ್ಲಾದೇಶ ಹೈಕಮಿಷನರ್‌ಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿ ಮಾಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರಿಂದ ಕಳೆದ ವರ್ಷದಿಂದ ಭಾರತ-ಬಾಂಗ್ಲಾದೇಶದ ಸಂಬಂಧಗಳು ಹದಗೆಟ್ಟಿವೆ. ಹಿಂದೂಗಳು ಸೇರಿದಂತೆ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯನ್ನು ನಿಭಾಯಿಸಲು ವಿಫಲವಾದ ಉಸ್ತುವಾರಿ ಆಡಳಿತವನ್ನು ನವದೆಹಲಿ ಪದೇ ಪದೇ ಟೀಕಿಸುತ್ತಿದೆ.

ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆದರಿಕೆ; ಭಾರತದಿಂದ ಬಾಂಗ್ಲಾದೇಶ ಹೈಕಮಿಷನರ್‌ಗೆ ಸಮನ್ಸ್ ಜಾರಿ
Protest Near Indian High Commission

Updated on: Dec 17, 2025 | 6:26 PM

ನವದೆಹಲಿ, ಡಿಸೆಂಬರ್ 17: ನ್ಯಾಷನಲ್ ಸಿಟಿಜನ್ ಪಾರ್ಟಿ ನಾಯಕರಾದ ಹಸ್ನತ್ ಅಬ್ದುಲ್ಲಾ ಅವರು ಮಾಡಿದ ಪ್ರಚೋದನಕಾರಿ ಭಾರತ ವಿರೋಧಿ ಹೇಳಿಕೆಗಳ ವಿರುದ್ಧ ಔಪಚಾರಿಕ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸಲು ಭಾರತದ ವಿದೇಶಾಂಗ ಸಚಿವಾಲಯ (MEA) ಬಾಂಗ್ಲಾದೇಶದ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ. ಈ ಕುರಿತು ಭಾರತವು ಬಾಂಗ್ಲಾದೇಶದ (Bangldaesh) ಹೈಕಮಿಷನರ್ ರಿಯಾಜ್ ಹಮೀದುಲ್ಲಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಹದಗೆಡುತ್ತಿರುವ ಭದ್ರತಾ ವಾತಾವರಣ ಮತ್ತು ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದಾದ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು ವ್ಯಾಪಕ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ನಂತರ ಪತನಗೊಂಡಿತ್ತು. ಆಗಸ್ಟ್ 2024ರಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾದ ಬಳಿಕ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳಲ್ಲಿ ಈ ಬೆದರಿಕೆ ಮತ್ತೊಂದು ಕೆಳಮಟ್ಟವನ್ನು ಗುರುತಿಸಿದೆ. ಕಳೆದ ಕೆಲವು ದಿನಗಳಿಂದ ಕೆಲವು ಉಗ್ರಗಾಮಿಗಳು ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸುತ್ತಲೂ ಪ್ರತಿಭಟನೆಗಳನ್ನು ಯೋಜಿಸಿವೆ ಎನ್ನಲಾಗಿದೆ. ಹೀಗಾಗಿ, ಭಾರತ ಭದ್ರತೆ ಕೋರಿದೆ.


ಇದನ್ನೂ ಓದಿ: Sheikh Hasina: ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಮಾಜಿ ಪ್ರಧಾನಿ?

ಏನಿದು ಪ್ರಕರಣ?:

ಸೋಮವಾರ ಢಾಕಾದ ಸೆಂಟ್ರಲ್ ಶಹೀದ್ ಮಿನಾರ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಸ್ನತ್ ಅಬ್ದುಲ್ಲಾ, ಬಾಂಗ್ಲಾದೇಶವು ಪ್ರತ್ಯೇಕತಾವಾದಿ ಗುಂಪುಗಳು ಸೇರಿದಂತೆ ಭಾರತಕ್ಕೆ ಆತಂಕ ತಂದೊಡ್ಡುವ ಪಡೆಗಳಿಗೆ ಆಶ್ರಯ ನೀಡಬಹುದು. ಭಾರತದ “7 ಸಿಸ್ಟರ್ಸ್” ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಭಾರತದಿಂದ ಕಡಿತಗೊಳಿಸಲು ಸಹಾಯ ಮಾಡಬಹುದು ಎಂದು ಎಚ್ಚರಿಸಿದ್ದರು.

ಇದನ್ನೂ ಓದಿ: ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಇಂಟರ್​​ಪೋಲ್ ಮೊರೆಹೋಗಲು ಬಾಂಗ್ಲಾದೇಶ ನಿರ್ಧಾರ

“ನಾವು ಪ್ರತ್ಯೇಕತಾವಾದಿ ಮತ್ತು ಭಾರತ ವಿರೋಧಿ ಪಡೆಗಳಿಗೆ ಆಶ್ರಯ ನೀಡುತ್ತೇವೆ. ನಂತರ ನಾವು 7 ಸಹೋದರಿ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುತ್ತೇವೆ” ಎಂದು ಹಸ್ನತ್ ಅಬ್ದುಲ್ಲಾ ಹೇಳಿದ್ದರು. “ಬಾಂಗ್ಲಾದೇಶದ ಸಾರ್ವಭೌಮತ್ವ, ಸಾಮರ್ಥ್ಯ, ಮತದಾನದ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಗೌರವಿಸದ ಶಕ್ತಿಗಳಿಗೆ ಭಾರತ ಆಶ್ರಯ ನೀಡಿದರೆ, ಬಾಂಗ್ಲಾದೇಶ ಕೂಡ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ನಾನು ಭಾರತಕ್ಕೆ ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು. ಇದಾದ ಬಳಿಕ ಡಾಕಾದಲ್ಲಿರುವ ಭಾರತದ ರಾಯಭಾರ ಕಚೇರಿಕೆಗೆ ಬೆದರಿಕೆ ಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ