ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಬಂದ 45,000 ಟನ್ ಎಲ್ಪಿಜಿ ಹೊತ್ತ ಟ್ಯಾಂಕರ್
ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ ಉದ್ವಿಗ್ನತೆ ಬಗೆಹರಿದಿಲ್ಲ. ಇದರ ನಡುವೆ 45,000 ಟನ್ ಎಲ್ಪಿಜಿಯನ್ನು ಹೊತ್ತ ಭಾರತದ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂದೆ ಬಂದಿದೆ. ಇದು ಐತಿಹಾಸಿಕ ಇಂಧನದ ಬಿಕ್ಕಟ್ಟನ್ನು ನಿವಾರಿಸಲು ದೇಶದ ಹೋರಾಟದ ನಡುವೆ ಬಹಳ ಮುಖ್ಯ ಬೆಳವಣಿಗೆಯಾಗಿದೆ. ಮಾರ್ಷಲ್ ದ್ವೀಪಗಳ ಧ್ವಜವನ್ನು ಹೊಂದಿರುವ ಎಲ್ಪಿಜಿ ಟ್ಯಾಂಕರ್ ಸರ್ವ ಶಕ್ತಿ ಭಾರತಕ್ಕೆ ಬರುವ 45,000 ಟನ್ಗಳಿಗೂ ಹೆಚ್ಚು ಎಲ್ಪಿಜಿಯನ್ನು ಹೊತ್ತಿದ್ದು, ಇಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ.

ನವದೆಹಲಿ, ಮೇ 2: ಪಶ್ಚಿಮ ಏಷ್ಯಾ ಇನ್ನೂ ಯುದ್ಧದ ಬಿಸಿಯಿಂದ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಅಮೆರಿಕ-ಇರಾನ್ ಸಂಘರ್ಷದಿಂದ ಸಮುದ್ರಗಳು ಸ್ತಬ್ಧಗೊಂಡಿರುವಂತೆಯೇ ಭಾರತ ತನ್ನ ರಾಜತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ಬಿಕ್ಕಟ್ಟಿನ ನಡುವೆ 45,000 ಟನ್ ಎಲ್ಪಿಜಿಯನ್ನು ಹೊತ್ತ ಬೃಹತ್ ಸೂಪರ್ಟ್ಯಾಂಕರ್ “ಸರ್ವ ಶಕ್ತಿ” ಹಾರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನವನ್ನು ದಾಟಿ ಹೋಗಲು ಪ್ರಯತ್ನಿಸುತ್ತಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು LPGಯ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಿಂದ ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ದೇಶವು ಅಡುಗೆ ಅನಿಲದ ತೀವ್ರ ಕೊರತೆಯನ್ನು ಅನುಭವಿಸಿದೆ. ಈ ಸಮಯದಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಈ ಬೃಹತ್ ಸರಕುಗಳನ್ನು ಖರೀದಿಸಿದೆ. ‘ಸರ್ವ ಶಕ್ತಿ’ ಸುರಕ್ಷಿತವಾಗಿ ಭಾರತದ ತೀರವನ್ನು ತಲುಪಿದರೆ ಮಾರುಕಟ್ಟೆಯಲ್ಲಿನ ಎಲ್ಪಿಜಿ ಕೊರತೆಯನ್ನು ನಿವಾರಿಸಲು ಇದು ಸಹಾಯಕವಾಗಲಿದೆ.
ಇದನ್ನೂ ಓದಿ: ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ
18 ಭಾರತೀಯ ಪ್ರಜೆಗಳು ಸೇರಿದಂತೆ 20 ಸಿಬ್ಬಂದಿಗಳನ್ನು ಹೊಂದಿರುವ ಈ ಹಡಗು ಈಗ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದು, ಮೇ 13ರಂದು ಆಗಮಿಸುವ ನಿರೀಕ್ಷೆಯಿದೆ. ಈ ಹಿಂದೆ ಸೂಪರ್ಟ್ಯಾಂಕರ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಡೇಟಾವನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಮಾಡಿತ್ತು.
ಇದನ್ನೂ ಓದಿ: ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಇರಾನಿನ ಸಾಗಣೆಯ ಮೇಲೆ ಅಮೆರಿಕ ಕಠಿಣ ದಿಗ್ಬಂಧನ ವಿಧಿಸಿದೆ. ಕಳೆದ ತಿಂಗಳು ಇರಾನ್ನ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿರುವ ಹಡಗುಗಳ ಮೇಲೆ ಗುಂಡು ಹಾರಿಸಲಾಗಿತ್ತು. ಇದರಿಂದಾಗಿ ಹಲವಾರು ಹಡಗುಗಳು ಹಿಂತಿರುಗಬೇಕಾಯಿತು. ಅದರಲ್ಲಿ ಭಾರತದ ಹಡಗೂ ಸೇರಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




