ಇರಾನ್‌ಗೆ ಅನಗತ್ಯ ಪ್ರಯಾಣ ಬೇಡ, ಭಾರತೀಯ ನಾಗರಿಕರಿಗೆ ಕೇಂದ್ರದ ಎಚ್ಚರಿಕೆ

ಭಾರತ ಸರ್ಕಾರ ಇರಾನ್‌ಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಭಾರತೀಯ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಹೊರತಾಗಿಯೂ, ಪ್ರಸ್ತುತ ಭದ್ರತಾ ದೃಷ್ಟಿಯಿಂದ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇರಾನ್‌ನಲ್ಲಿರುವ ಭಾರತೀಯರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಇದು ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಸಹಕಾರಿ.

ಇರಾನ್‌ಗೆ ಅನಗತ್ಯ ಪ್ರಯಾಣ ಬೇಡ, ಭಾರತೀಯ ನಾಗರಿಕರಿಗೆ ಕೇಂದ್ರದ ಎಚ್ಚರಿಕೆ
ಟ್ರಾವೆಲ್

Updated on: Jun 24, 2026 | 12:37 PM

ನವದೆಹಲಿ, ಜೂನ್ 24: ಅಮೆರಿಕ ಮತ್ತು ಇರಾನ್(Iran) ನಡುವೆ ಇತ್ತೀಚೆಗಷ್ಟೇ ಶಾಂತಿ ಒಪ್ಪಂದ ಏರ್ಪಟ್ಟಿದ್ದರೂ, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬುಧವಾರ ತನ್ನ ನಾಗರಿಕರಿಗೆ ಹೊಸದೊಂದು ಮಹತ್ವದ ಪ್ರಯಾಣ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮುಂದಿನ ಆದೇಶ ಬರುವವರೆಗೂ ಭಾರತೀಯ ಪ್ರಜೆಗಳು ಇರಾನ್​ಗೆ ಯಾವುದೇ ರೀತಿಯ ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ಭಾರತ ಸರ್ಕಾರ ಕಟ್ಟುನಿಟ್ಟಿನ ಸಲಹೆ ನೀಡಿದೆ.

ಪರಿಸ್ಥಿತಿ ಸುಧಾರಿಸಿದ್ರೂ ಮುನ್ನೆಚ್ಚರಿಕೆ ಅಗತ್ಯ: ಭಾರತದ ನಿಲುವು

ಇರಾನ್ ಮತ್ತು ಅಮೆರಿಕ ನಡುವಿನ ಇತ್ತೀಚಿನ ಮಾತುಕತೆಗಳ ನಂತರ ಅಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಭಾರತೀಯ ರಾಯಭಾರ ಕಚೇರಿ, ಆದಾಗ್ಯೂ ಸಂಪೂರ್ಣ ಭದ್ರತೆಯ ದೃಷ್ಟಿಯಿಂದ ಭಾರತೀಯರು ಸದ್ಯಕ್ಕೆ ತಮ್ಮ ಇರಾನ್ ಪ್ರವಾಸದ ಯೋಜನೆಗಳನ್ನು ಮುಂದೂಡುವುದು ಸೂಕ್ತ ಎಂದು ತಿಳಿಸಿದೆ.

ಜಾಗರೂಕರಾಗಿರಲು ಸೂಚನೆ: ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕು, ಸದಾ ಜಾಗೃತರಾಗಿರಬೇಕು ಮತ್ತು ಸ್ಥಳೀಯ ಇರಾನ್ ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಒತ್ತಾಯಿಸಿದೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಮಹತ್ವದ ಮಾತುಕತೆ ಮುಕ್ತಾಯ: ಪರಮಾಣು ಬಿಕ್ಕಟ್ಟು, ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚನೆ

ರಾಯಭಾರ ಕಚೇರಿಯಲ್ಲಿ ‘ಹೆಸರು ನೋಂದಣಿ’ ಕಡ್ಡಾಯ

ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಯಾವುದೇ ತುರ್ತು ಕೆಲಸದ ನಿಮಿತ್ತ ಇರಾನ್‌ಗೆ ಹೊಸದಾಗಿ ಆಗಮಿಸುವವರು, ತಕ್ಷಣವೇ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್ ಅಥವಾ ಕಚೇರಿಗೆ ಭೇಟಿ ನೀಡಿ ತಮ್ಮ ಸಂಪೂರ್ಣ ವಿವರಗಳನ್ನು ಆದಷ್ಟು ಬೇಗ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ಸಂಪರ್ಕಿಸಲು ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಇದು ಸಹಕಾರಿಯಾಗಲಿದ್ದು, ಮುಂದಿನ ಹೊಸ ಅಪ್‌ಡೇಟ್‌ಗಳಿಗಾಗಿ ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನಿಸುತ್ತಿರುವಂತೆ ಹೇಳಲಾಗಿದೆ.

ಇರಾನ್-ಅಮೆರಿಕ ಶಾಂತಿ ಒಪ್ಪಂದದ ಹಿನ್ನೆಲೆ

ಮಧ್ಯಪ್ರಾಚ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಭೀಕರ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ಇತ್ತೀಚೆಗಷ್ಟೇ 14 ಅಂಶಗಳ ಜಂಟಿ ಶಾಂತಿ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿವೆ. ಈ ಒಪ್ಪಂದವನ್ನು ಜಾರಿಗೆ ತರಲು ಉಭಯ ದೇಶಗಳ ಪ್ರತಿನಿಧಿಗಳು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇತ್ತೀಚೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಈ ಯಶಸ್ವಿ ಬೆಳವಣಿಗೆಯ ಕುರಿತು ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಫೆಬ್ರವರಿ ಅಂತ್ಯದಲ್ಲಿ ಆರಂಭವಾದ ಈ ಯುದ್ಧವನ್ನು ಕೊನೆಗೊಳಿಸಲು ನಾವು ಈಗ ಯಶಸ್ವಿ ಅಡಿಪಾಯ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಇದು ಶಾಶ್ವತ ಶಾಂತಿಯ ಮನೆ ನಿರ್ಮಿಸಲು ನೆರವಾಗಲಿದೆ ಎಂದು ಹೇಳಿದ್ದರು. ಈ ಸಕಾರಾತ್ಮಕ ಬದಲಾವಣೆಗಳ ನಡುವೆಯೂ ಭಾರತ ತನ್ನ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:36 pm, Wed, 24 June 26

Loading...
Unable to load recommendations.
Follow Us