AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ, ಆರೋಪಿಯ ಕ್ರೌರ್ಯ, ಉಸಿರಿರುವವರೆಗೂ ಹೋರಾಡಿದ್ದ ಯುವತಿ

ದೆಹಲಿಯಲ್ಲಿ IRS ಅಧಿಕಾರಿ ಪುತ್ರಿ, ನಾಗರಿಕ ಸೇವಾ ಆಕಾಂಕ್ಷಿ, ರಾಕ್ಷಸೀಯವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾರೆ. ಚಾರ್ಜಿಂಗ್ ಕೇಬಲ್ ಬಳಸಿ ಉಸಿರುಗಟ್ಟಿಸಿ, ಪ್ರಜ್ಞಾಹೀನಳಾದ ಮೇಲೆ ದೌರ್ಜನ್ಯ ಎಸಗಲಾಗಿದೆ. ಸಾವಿಗೂ ಮುನ್ನ ಯುವತಿ ಕ್ರೂರವಾಗಿ ಹೋರಾಡಿದ್ದು, ಆರೋಪಿ ರಾಹುಲ್ ಮೀನಾ ಮನೆ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ. ವೈದ್ಯಕೀಯ ವರದಿಗಳು ಯುವತಿಯ ನರಕಯಾತನೆಯನ್ನು ಬಹಿರಂಗಪಡಿಸಿವೆ.

ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ, ಆರೋಪಿಯ ಕ್ರೌರ್ಯ,  ಉಸಿರಿರುವವರೆಗೂ ಹೋರಾಡಿದ್ದ ಯುವತಿ
ರಾಹುಲ್ Image Credit source: India Today
ನಯನಾ ರಾಜೀವ್
|

Updated on: Apr 24, 2026 | 9:57 AM

Share

ನವದೆಹಲಿ, ಏಪ್ರಿಲ್ 24:  ತನ್ನ ಮನೆಯ ಕೊಠಡಿಯಲ್ಲಿ ಕುಳಿತು ದೇಶ ಸೇವೆ ಮಾಡುವ ಕನಸಿನೊಂದಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆಗೆಂದು ಓದುತ್ತಿದ್ದ 22 ವರ್ಷದ ಯುವತಿಯ ಕೊಲೆ(Murder) ಪ್ರಕರಣದಲ್ಲಿ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿಯು ಆಕೆ ಸಾವನ್ನಪ್ಪುವ ಮೊದಲು ಎದುರಿಸಿದ ನರಕಯಾತನೆಯನ್ನು ಎತ್ತಿ ತೋರಿಸಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.

ಸಾವಿನವರೆಗೂ ಹೋರಾಡಿದ್ದ ಯುವತಿ ವೈದ್ಯಕೀಯ ವರದಿಗಳ ಪ್ರಕಾರ, ಯುವತಿಯ ತೋಳುಗಳು ಮತ್ತು ಕೈಗಳ ಮೇಲೆ ಅನೇಕ ಮೂಗೇಟುಗಳಿವೆ. ಇದು ಆಕೆ ಸುಲಭವಾಗಿ ಶರಣಾಗಲಿಲ್ಲ, ಬದಲಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ದಾಳಿಕೋರನೊಂದಿಗೆ ಕೊನೆಯ ಕ್ಷಣದವರೆಗೂ ಸೆಣಸಾಡಿದ್ದಾಳೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ, ಆರೋಪಿ ಮೊಂಡಾದ ವಸ್ತುವಿನಿಂದ ಆಕೆಯ ಮುಖಕ್ಕೆ ಬಲವಾಗಿ ಹೊಡೆದ ಪರಿಣಾಮ ಆಕೆಯ ಮೂಗಿನ ಮೂಳೆ ಮುರಿದುಹೋಗಿತ್ತು.

ಚಾರ್ಜಿಂಗ್ ಕೇಬಲ್‌ನಿಂದ ಉಸಿರುಗಟ್ಟಿಸಿ ಹತ್ಯೆ ಯುವತಿಯ ಕುತ್ತಿಗೆಯ ಸ್ನಾಯುಗಳಲ್ಲಿ ರಕ್ತಸ್ರಾವ ಮತ್ತು ಥೈರಾಯ್ಡ್ ಕಾರ್ಟಿಲೆಜ್ ಮುರಿತಗೊಂಡಿರುವುದು ಕಂಡುಬಂದಿದೆ. ಮೊಬೈಲ್ ಚಾರ್ಜಿಂಗ್ ಕೇಬಲ್ ಬಳಸಿ ಕತ್ತು ಹಿಸುಕಿದ ಪರಿಣಾಮ ಉಸಿರುಕಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಮಾದರಿಗಳನ್ನು ಸಂರಕ್ಷಿಸಲಾಗಿದೆ.

ಮತ್ತಷ್ಟು ಓದಿ: ನನ್ನಿಂದ ತಪ್ಪಾಗಿದೆ, ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು?

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ರಾಹುಲ್ ಮೀನಾ ಬೆಳಗ್ಗೆ 6.30ಕ್ಕೆ ಬಿಡಿ ಕೀಲಿ ಬಳಸಿ ಮನೆ ಪ್ರವೇಶಿಸಿದ್ದಾನೆ. ಪೋಷಕರು ಜಿಮ್‌ಗೆ ತೆರಳಿದ ಸಮಯವನ್ನೇ ಹೊಂಚು ಹಾಕಿ ಈತ ಒಳನುಗ್ಗಿದ್ದ. ಹತ್ಯೆಯ ನಂತರ ಯುವತಿಯ ಬೆರಳಚ್ಚು ಬಳಸಿ ಲಾಕರ್ ತೆರೆಯಲು ಪ್ರಯತ್ನಿಸಿದ್ದಾನೆ. ಅದು ವಿಫಲವಾದಾಗ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ನಗದು ಮತ್ತು ಆಭರಣ ದೋಚಿದ್ದಾನೆ.

ಪರಾರಿಯಾಗುವ ಮೊದಲು ತನ್ನ ರಕ್ತದ ಕಲೆಗಳಿರುವ ಬಟ್ಟೆಗಳನ್ನು ಬದಲಿಸಿಕೊಂಡು, ಬೆಳಗ್ಗೆ 7.20ಕ್ಕೆ ಅಂದರೆ ಪೋಷಕರು ಬರುವ ಕೆಲವೇ ನಿಮಿಷಗಳ ಮೊದಲು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಗೂ ಕೆಲವೇ ಗಂಟೆಗಳ ಮೊದಲು ರಾಜಸ್ಥಾನದ ಅಲ್ವಾರ್‌ನಲ್ಲಿ ತನ್ನದೇ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ ರಾಹುಲ್ ಮೀನಾ, ಅಲ್ಲಿಂದ ದೆಹಲಿಗೆ ಬಂದು ಈ ಕೃತ್ಯವೆಸಗಿದ್ದಾನೆ. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಇಡೀ ಕುಟುಂಬವನ್ನೇ ನಾಶಮಾಡಲು ಈತ ಮುಂದಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us