AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿನ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆಯಲ್ಲಿ ಮಾಡಲಾದ ಪ್ರಮುಖ ಬದಲಾವಣೆ ಏನೇನು?

ಕೇಂದ್ರವು ಹೊರಡಿಸಿದ ಸುಗ್ರೀವಾಜ್ಞೆಯು 'ರಾಜ್ಯ ಸಾರ್ವಜನಿಕ ಸೇವೆಗಳು ಮತ್ತು ರಾಜ್ಯ ಸಾರ್ವಜನಿಕ ಸೇವಾ ಆಯೋಗ'ಕ್ಕೆ ಸಂಬಂಧಿಸಿದ ಯಾವುದೇ ಕಾನೂನುಗಳನ್ನು ಜಾರಿಗೊಳಿಸದಂತೆ ದೆಹಲಿ ವಿಧಾನಸಭೆಯನ್ನು ನಿರ್ಬಂಧಿಸಿದೆ. ಸುಗ್ರೀವಾಜ್ಞೆಯ ಆ ಭಾಗವನ್ನು ಮಸೂದೆಯಲ್ಲಿ ಕೈಬಿಡಲಾಗಿದೆ.

ದೆಹಲಿಯಲ್ಲಿನ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆಯಲ್ಲಿ ಮಾಡಲಾದ ಪ್ರಮುಖ ಬದಲಾವಣೆ ಏನೇನು?
ಅಮಿತ್ ಶಾ- ಅರವಿಂದ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 31, 2023 | 1:42 PM

ದೆಹಲಿ ಜುಲೈ 31: ಕೇಂದ್ರದ ವಿವಾದಾತ್ಮಕ ಸುಗ್ರೀವಾಜ್ಞೆ (ordinance )ಅಥವಾ ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕಾಗಿ ವಿಶೇಷ ಆದೇಶವನ್ನು ಬದಲಿಸುವ ಮಸೂದೆಯನ್ನು ಪ್ರಮುಖ ಬದಲಾವಣೆಗಳೊಂದಿಗೆ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗೃಹ ಸಚಿವ ಅಮಿತ್ ಶಾ (Amit Shah) ಅವರು ಮಂಡಿಸಲಿರುವ ಕರಡು ಮಸೂದೆಯನ್ನು ಸಂಸದರಿಗೆ ನೀಡಲಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆಯಲ್ಲಿ (Government of National Capital Territory of Delhi (Amendment) Bill) ಮೂರು ವಿಷಯಗಳನ್ನು ಅಳಿಸಿ ಒಂದನ್ನು ಸೇರ್ಪಡೆ ಮಾಡಲಾಗಿದೆ. ಇದು ದೆಹಲಿಯಲ್ಲಿ ಚುನಾಯಿತ ಸರ್ಕಾರವು ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣವನ್ನು ಹೊಂದಿದೆ, ಕೇಂದ್ರ ಸರ್ಕಾರ ಅಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ರದ್ದುಗೊಳಿಸಲು ಕೇಂದ್ರವು ಮೇ ತಿಂಗಳಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ.

ಕೇಂದ್ರವು ಹೊರಡಿಸಿದ ಸುಗ್ರೀವಾಜ್ಞೆಯು ‘ರಾಜ್ಯ ಸಾರ್ವಜನಿಕ ಸೇವೆಗಳು ಮತ್ತು ರಾಜ್ಯ ಸಾರ್ವಜನಿಕ ಸೇವಾ ಆಯೋಗ’ಕ್ಕೆ ಸಂಬಂಧಿಸಿದ ಯಾವುದೇ ಕಾನೂನುಗಳನ್ನು ಜಾರಿಗೊಳಿಸದಂತೆ ದೆಹಲಿ ವಿಧಾನಸಭೆಯನ್ನು ನಿರ್ಬಂಧಿಸಿದೆ. ಸುಗ್ರೀವಾಜ್ಞೆಯ ಆ ಭಾಗವನ್ನು ಮಸೂದೆಯಲ್ಲಿ ಕೈಬಿಡಲಾಗಿದೆ.

ಮಸೂದೆಯಲ್ಲಿನ ಹೊಸ ನಿಬಂಧನೆಯು ದೆಹಲಿಯ ಮುಖ್ಯಮಂತ್ರಿ ನೇತೃತ್ವದ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವು ಶಿಫಾರಸು ಮಾಡಿದ ಹೆಸರುಗಳನ್ನು ಆಧರಿಸಿ ದೆಹಲಿ ಸರ್ಕಾರದಿಂದ ರಚಿಸಲಾದ ಮಂಡಳಿಗಳು ಮತ್ತು ಆಯೋಗಗಳಿಗೆ ಲೆಫ್ಟಿನೆಂಟ್ ಗವರ್ನರ್ ನೇಮಕಾತಿಗಳನ್ನು ಮಾಡುತ್ತದೆ ಎಂದು ಹೇಳುತ್ತದೆ.

ಸುಗ್ರೀವಾಜ್ಞೆ ವಿವಾದ ದೆಹಲಿ ಸರ್ಕಾರ ಮತ್ತು ಕೇಂದ್ರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ದೆಹಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (DERC) ಅಧ್ಯಕ್ಷರ ನೇಮಕದ ಬಗ್ಗೆ ಆಗಿರುವ ವಾದ- ವಿವಾದ ಇತ್ತೀಚಿನದ್ದು.

ವಿವಾದಾತ್ಮಕ ಮಸೂದೆಯು ಅರವಿಂದ ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ನಡುವೆ ಭಾರೀ ಜಟಾಪಟಿ ಉಂಟುಮಾಡಿದೆ. ರಾಜಧಾನಿಯಲ್ಲಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯು ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಅರವಿಂದ ಕೇಜ್ರಿವಾಲ್ ದೇಶಾದ್ಯಂತ ಸಂಚರಿಸಿ, ವಿವಿಧ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಅವರ ಬೆಂಬಲವನ್ನು ಪಡೆದರು.

ಮಸೂದೆಯಲ್ಲಿ ಕೈ ಬಿಡಲಾದ ಅಂಶಗಳೇನು?

1. ಸುಗ್ರೀವಾಜ್ಞೆಯ ಮೂಲಕ ಸೆಕ್ಷನ್ 3A ನಂತೆ ಸೇರಿಸಲಾದ ‘ದೆಹಲಿ ವಿಧಾನಸಭೆಗೆ ಸಂಬಂಧಿಸಿದಂತೆ ಹೆಚ್ಚುವರಿ ನಿಬಂಧನೆಗಳನ್ನು’ ಮಸೂದೆಯಲ್ಲಿ ತೆಗೆದುಹಾಕಲಾಗಿದೆ. ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು, ಆದೇಶ ಅಥವಾ ತೀರ್ಪು ಒಳಗೊಂಡಿರುವ ಹೊರತಾಗಿಯೂ, ಪಟ್ಟಿ II ರ ನಮೂದು 41 ರಲ್ಲಿ ನಮೂದಿಸಲಾದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೊರತುಪಡಿಸಿ 239AA ವಿಧಿಯ ಪ್ರಕಾರ ಕಾನೂನುಗಳನ್ನು ರಚಿಸುವ ಅಧಿಕಾರವನ್ನು ಶಾಸಕಾಂಗವು ಹೊಂದಿರುತ್ತದೆ ಎಂದು ಸುಗ್ರೀವಾಜ್ಞೆಯ ಸೆಕ್ಷನ್ 3A ಹೇಳುತ್ತದೆ.

2. ಸಂಸತ್ತು ಮತ್ತು ದೆಹಲಿ ಅಸೆಂಬ್ಲಿಯಲ್ಲಿ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರದ ‘ವಾರ್ಷಿಕ ವರದಿ’ಯನ್ನು ಕಡ್ಡಾಯವಾಗಿ ಮಂಡಿಸುವುದು.

3. ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿಯ ಮುಖ್ಯಮಂತ್ರಿಯ ಮುಂದೆ ಕೇಂದ್ರ ಸರ್ಕಾರಕ್ಕೆ ಉಲ್ಲೇಖಿಸಬೇಕಾದ ಪ್ರಸ್ತಾವನೆಗಳು ಅಥವಾ ವಿಷಯಗಳಿಗೆ ಸಂಬಂಧಿಸಿದ ಮಂತ್ರಿಗಳ ಆದೇಶಗಳು/ನಿರ್ದೇಶನಗಳನ್ನು ಕಡ್ಡಾಯವಾಗಿ ಇರಿಸುವ ನಿಬಂಧನೆ.

ಸೇರ್ಪಡೆ ಆಗಿದ್ದೇನು?

ದೆಹಲಿ ಅಸೆಂಬ್ಲಿ ಜಾರಿಗೊಳಿಸಿದ ಕಾನೂನಿನ ಮೂಲಕ ರಚಿಸಲಾದ ಮಂಡಳಿಗಳು ಅಥವಾ ಆಯೋಗಗಳಿಗೆ, ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವು ಲೆಫ್ಟಿನೆಂಟ್ ಗವರ್ನರ್ ಅವರ ನೇಮಕಾತಿಗಾಗಿ ಹೆಸರುಗಳನ್ನು ಶಿಫಾರಸು ಮಾಡುತ್ತದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? ತಪ್ಪಾಗಿದೆ ಎಂದು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳಬೇಕು: ಯೋಗಿ ಆದಿತ್ಯನಾಥ್

ಸುಪ್ರೀಂಕೋರ್ಟ್ ಹೇಳಿದ್ದೇನು?

ಸಾರ್ವಜನಿಕ ಸುವ್ಯವಸ್ಥೆ, ಭೂಮಿ ಮತ್ತು ಪೊಲೀಸರಿಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ಸೇವೆಗಳನ್ನು ನಿಯಂತ್ರಿಸುತ್ತದೆ ಎಂದು ಸುಪ್ರೀಂಕೋರ್ಟ್ ಮೇ ತಿಂಗಳಲ್ಲಿ ದೆಹಲಿ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.

ಕೇಂದ್ರವು ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದೆ. ಸುಪ್ರೀಂ ತೀರ್ಪಿನ ಬೆನ್ನಲ್ಲೇ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯ ವಿರುದ್ಧ ಅರವಿಂದ ಕೇಜ್ರಿವಾಲ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕಳೆದ ವಾರ, ಸುಪ್ರೀಂ ಕೋರ್ಟ್ ಕೇಂದ್ರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ದೆಹಲಿ ಸರ್ಕಾರದ ಮನವಿಯನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತು. ಸೇವೆಗಳ ಮೇಲಿನ ನಿಯಂತ್ರಣವನ್ನು ಕಸಿದುಕೊಳ್ಳಲು ಕಾನೂನನ್ನು ಮಾಡುವ ಮೂಲಕ ದೆಹಲಿ ಸರ್ಕಾರಕ್ಕೆ ಸಂಸತ್ತು “ಆಡಳಿತದ ಸಾಂವಿಧಾನಿಕ ತತ್ವಗಳನ್ನು ರದ್ದುಗೊಳಿಸಬಹುದೇ” ಎಂದು ಸಂವಿಧಾನ ಪೀಠವು ಪರಿಶೀಲಿಸುತ್ತದೆ ಎಂದು ಅದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ