
ನವದೆಹಲಿ, ಆಗಸ್ಟ್ 6: ಕಾಕ್ರೋಚ್ ಜನತಾ ಪಾರ್ಟಿ (CJP) ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ (ಜನರು ಏನು ಹೇಳುತ್ತಾರೆ?) ಎಂಬ ಅಭಿಯಾನ ಆರಂಭಿಸಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಕೋರ್ ಟೀಮ್ನ ಎರಡು ದಿನಗಳ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಸಂಘಟನೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.
ಅಭಿಜೀತ್ ದಿಪ್ಕೆ ಅವರು “ಕ್ಯಾ ಬೋಲ್ತಿ ಪಬ್ಲಿಕ್” ಎಂಬ ಅಭಿಯಾನವನ್ನು ಘೋಷಿಸಿದ್ದು, ಇದು ಭಾರತದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ. ಸಿಜೆಪಿ ಪ್ರತಿನಿಧಿಗಳು ನಾಗರಿಕರೊಂದಿಗೆ ಮಾತನಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಕುರಿತು ಅವರ ಅಭಿಪ್ರಾಯಗಳನ್ನು ತಿಳಿಯಲಿದ್ದಾರೆ. “ಈ ‘ಕ್ಯಾ ಬೋಲ್ತಿ ಪಬ್ಲಿಕ್’ ಅಭಿಯಾನದ ಸಮಯದಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರು ಏನು ಯೋಚಿಸುತ್ತಾರೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಾತನಾಡಿ, “ನಮ್ಮ ದೇಶದಲ್ಲಿ ಇಂದು ಸಂಸ್ಥೆಗಳ ಹೊಣೆಗಾರಿಕೆಯು ಅಪಾಯಕಾರಿ ಸ್ಥಿತಿಯಲ್ಲಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯದ ಮುನ್ಸೂಚನೆ. ಈ ಹಿಂದೆ ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಯಾರು ಮತ ಹಾಕಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತಿದೆ. ಪ್ರಜಾಪ್ರಭುತ್ವ ಹೀಗೆ ಕೆಲಸ ಮಾಡುವುದು ಸರಿಯಲ್ಲ. ನಾವು ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ. ನಾವು ಈ ಕೆಲಸ ಮಾಡುವವರೆಗೆ ದೇಶದಲ್ಲಿ ಚುನಾವಣಾ ಅಕ್ರಮಗಳು ಮುಂದುವರಿಯುತ್ತಲೇ ಇರುತ್ತವೆ” ಎಂದಿದ್ದಾರೆ.
CJP TAKES ITS MOVEMENT NATIONWIDE !!!
CJP has announced “Kya Bolti Public”, a nationwide outreach campaign beginning in September.
The idea is to travel across the country, meet young people and take up issues around education, unemployment and other concerns affecting young… pic.twitter.com/YICP9VyaBI
— Ravi Prakash Official (@raviprakash_rtv) August 6, 2026
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಅತಿದೊಡ್ಡ ಸಾಧನೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಜೀತ್ ದಿಪ್ಕೆ, ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ವಿದ್ಯಾರ್ಥಿಗಳ ಹೋರಾಟದ ಅತಿದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. ಜಂತರ್ ಮಂತರ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಉದ್ಯೋಗವಿಲ್ಲದ ಯುವಕರೂ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು. ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ ಅವರು, ತಮ್ಮ ಸಂಘಟನೆಯು ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುತ್ತದೆ ಮತ್ತು ಶಾಲಾ ಮಟ್ಟದಿಂದಲೇ ಶಿಕ್ಷಣವು ಕೈಗೆಟುಕದಂತಾಗಿರುವುದರಿಂದ ಶಿಕ್ಷಣ ಸುಧಾರಣೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಶಿಕ್ಷಣವನ್ನು ಲಾಭ ಗಳಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮಗೆ ಅದನ್ನು ಬದಲಾಯಿಸುವ ಆಸೆಯಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಮದುವೆ ಬಗ್ಗೆ ಭಾರೀ ಚರ್ಚೆ; ಭಾವೀ ಸೊಸೆ ಕುರಿತು ತಾಯಿ ಹೇಳಿದ್ದೇನು?
ಸಿಜೆಪಿ ರಾಜಕೀಯ ಪಕ್ಷವಲ್ಲ;
“ಸಿಜೆಪಿ ರಾಜಕೀಯ ಪಕ್ಷವಲ್ಲ. ಸದ್ಯಕ್ಕೆ ಸಿಜೆಪಿ ಒಂದು ಒತ್ತಡದ ಗುಂಪಾಗಿ ಕೆಲಸ ಮಾಡುತ್ತದೆ. ಏಕೆಂದರೆ ಭಾರತಕ್ಕೆ ಈಗ ಅತ್ಯಂತ ತುರ್ತಾಗಿ ಬೇಕಿರುವುದು ಒಂದು ಒತ್ತಡದ ಗುಂಪು. ಸಿಜೆಪಿಯು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಆಡಳಿತ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಾಪಕ ವಿಷಯಗಳನ್ನು ಕೈಗೆತ್ತಿಕೊಳ್ಳಲಿದೆ” ಎಂದು ದಿಪ್ಕೆ ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ